ಮಳೆ ಅಡ್ಡಿ, ಮತ ಯಂತ್ರಗಳ ದೋಷದ ಮಧ್ಯೆ ಉತ್ತರ ಕನ್ನಡದಲ್ಲಿ ಶೇ.77.75 ರಷ್ಟು ಮತದಾನ
ಕಾರವಾರ, ಮೇ 11: ಮತಯಂತ್ರದಲ್ಲಿ ದೋಷ, ಸಣ್ಣಪುಟ್ಟ ಗಲಾಟೆ, ಮಳೆ ಅಡ್ಡಿ ಸೇರಿದಂತೆ ಇನ್ನಿತರ ಗೊಂದಲಗಳ ನಡುವೆ ಉತ್ತರ ಕನ್ನಡ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿ ಬುಧವಾರ ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು ಶೇ.77.75 ರಷ್ಟು ಮತದಾನವಾಗಿದೆ.
ಒಟ್ಟು 11,94,714 ಮತದಾರರ ಪೈಕಿ 9,28,860 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ ಯಲ್ಲಾಪುರ ಕ್ಷೇತ್ರದಲ್ಲಿ ಶೇ. 81.71 ಶಿರಸಿ ಶೇ.78.85, ಹಳಿಯಾಳ ಶೇ. 78.11, ಕುಮಟಾ ಶೇ. 77.46, ಭಟ್ಕಳ ಶೇ.77.05, ಕಾರವಾರ ಶೇ. 74.10 ಮತದಾನವಾಗಿದೆ.

ಜಿಲ್ಲೆಯ ಆರು ವಿಧಾನಸಭಾ ವ್ಯಾಪ್ತಿಯ ಮತಗಟ್ಟೆಗಳ ಪೈಕಿ ಬಹುತೇಕ ಕಡೆ ಮುಂಜಾನೆ ಏಳು ಗಂಟೆಗೆ ಮತದಾನ ಆರಂಭವಾಗಿತ್ತು. ಆದರೆ ಕಾರವಾರದ, ಹಳಿಯಾಳ, ಯಲ್ಲಾಪುರ ಸೇರಿದಂತೆ ಜಿಲ್ಲೆಯ ಕೆಲವೆಡೆ ಮತಯಂತ್ರ ಜೋಡಣೆಯಲ್ಲಿ ಸಿಬ್ಬಂದಿಗಳಿಗೆ ಗೊಂದಲ ಹಾಗೂ ದೋಷದಿಂದಾಗಿ ಕೆಲ ಕಾಲ ವಿಳಂಭವಾಗಿ ಮತದಾನ ಆರಂಭಿಸಲಾಗಿತ್ತು. ಕಾರವಾರದ ಬಹುತೇಕ ಮತಗಟ್ಟೆಗಳಿಗೆ ಮುಂಜಾನೆಯಿಂದಲೇ ಆಗಮಿಸಿದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕಿ ರೂಪಾಲಿ ನಾಯ್ಕ ತಾಲೂಕಿನ ಚೆಂಡಿಯಾ ಗ್ರಾಮದ ಮತಗಟ್ಟೆ ಸಂಖ್ಯೆ 140 ರಲ್ಲಿ ಪತಿ, ಮಗ, ಸೊಸೆಯೊಂದಿಗೆ ತೆರಳಿ ಮತದಾನ ಮಾಡಿದರು. ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ತಾಲೂಕಿನ ಮಾಜಾಳಿಯ ಮೆಡಿಶಿಟ್ಟಾದ ಮತಗಟ್ಟೆಯಲ್ಲಿ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್ನಲ್ಲಿ ಹಾಗೂ ಮಾಜಿ ಶಾಸಕ ಗಂಗಾಧರ ಭಟ್ ಮುಂಜಾನೆ ತಮ್ಮ ಹಕ್ಕು ಚಲಾಯಿಸಿದರು.
ಮತಗಟ್ಟೆಗೆ ಬಂದು ಸುಕ್ರಜ್ಜಿ ಮತದಾನ
ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಅವರು ಕಾರವಾರ ತಾಲೂಕಿನ ಬಡಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ ಆಗಮಿಸಿ ಮತದಾನ ಮಾಡಿದರು. ಸರ್ಕಾರ ರಚನೆಗೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮದ್ಯ, ಹಣದ ಆಮಿಷಕ್ಕೆ ಒಳಗಾಗಬಾರದು. ನಮಗೆ ಬೇಕಾದ ಸೌಲಭ್ಯಗಳನ್ನು ಪಡೆಯಲು ಸರ್ಕಾರ ಕೊಟ್ಟಿರುವ ನಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದರು.

ಯುವ ಮತದಾರರಿಗೆ ಗಿಡಗಳ ಗಿಫ್ಟ್
ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್ನಲ್ಲಿ ತೆರೆಲಾದ ಮತಗಟ್ಟೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಯುವ ಮತದಾರರಿಗೆ ಮತಗಟ್ಟೆಯಲ್ಲಿ ಗಿಡಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡಲಾಯಿತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಎಂಸಿ ಕಮಿಷನರ್ ಜುಬಿನ್ ಮಹಾಪಾತ್ರ ಹಾಗೂ ಮತಗಟ್ಟೆ ಅಧಿಕಾರಿಗಳು ಹೂವು- ಹಣ್ಣುಗಳ ಗಿಡಗಳನ್ನು ನೀಡಿ ಅಭಿನಂದಿಸಿದರು.
ಮತದಾನ ಅವಧಿ ಮುಗಿದರು ಅವಕಾಶ
ಇನ್ನು ಮಧ್ಯಾಹ್ನದ ಬಳಿಕ ಜಿಲ್ಲೆಯ ಹಳಿಯಾಳದಲ್ಲಿ ಸುರಿಯುತ್ತಿದ್ದ ಮಳೆ ಸಂಜೆ ವೇಳೆಗೆ ಜಿಲ್ಲೆಯಾದ್ಯಂತ ಗುಡುಗು ಸಿಡಿಲಿನೊಂದಿಗೆ ಆರ್ಭಟಿಸಿದೆ. ಪರಿಣಾಮ ಮತದಾರರು ಮತದಾನಕ್ಕೂ ಪರದಾಡುವಂತಾಯಿತು. ಅಲ್ಲದೆ ಶಿರಸಿಯ ಮಧುರಳ್ಳಿಯಲ್ಲಿ ಕೊನೆಗಳಿಗೆಯಲ್ಲಿ ಮತದಾನಕ್ಕೆ ಹೆಚ್ಚು ಜನರು ಆಗಮಿಸಿದ ಕಾರಣ ಹೆಚ್ಚುವರಿ ಸಮಯ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. 40 ಜನ ಮತದಾರರಿಗೆ ಟೋಕನ್ ಕೊಟ್ಟು ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.
ಇನ್ನು ಜಿಲ್ಲೆಯ ಕೆಲವೆಡೆ ಮತದಾನ ಮುಕ್ತಾಯದ ಬಳಿಕವೂ ಗಾಳಿ ಮಳೆ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮತಗಟ್ಟೆ ಅಧಿಕಾರಿಗಳು ಮೊಬೈಲ್ ಬೆಳಕಿನಲ್ಲಿ ಮತಯಂತ್ರಗಳನ್ನು ಜೋಡಿಸಿ ಸೀಲ್ ಮಾಡುವಂತಾಯಿತು. ಅಲ್ಲದೆ ಮತಯಂತ್ರಗಳನ್ನು ಕುಮಟಾದ ಡಾ.ಎ.ವಿ ಬಾಳಿಗಾ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಂಗೆ ರವಾನೆಗೆ ಮಾಡಬೇಕಾಗಿದ್ದು, ಕೆಲವೆಡೆ ಮಳೆ ಕಾರಣದಿಂದಾಗಿ ಮತಯಂತ್ರಗಳ ರವಾನಿ ವಿಳಂಭವಾಗಿದೆ.
ಮತಗಟ್ಟೆಯಲ್ಲೆ ಚುನಾವಣಾ ಸಿಬ್ಬಂದಿ ತಡೆಹಿಡಿದ ಗ್ರಾಮಸ್ಥರು
ನಕಲಿ ಮತದಾನ ಆರೋಪ ಹಿನ್ನಲೆಯಲ್ಲಿ ಮತದಾನ ಮುಗಿದರೂ ಮತಗಟ್ಟೆಯಲ್ಲೇ ಚುನಾವಣಾ ಸಿಬ್ಬಂದಿಯನ್ನು ಗ್ರಾಮಸ್ಥರು ತಡೆಹಿಡಿದ ಘಟನೆ ಹೊನ್ನಾವರ ತಾಲೂಕಿನ ಸಂತೆಗುಳಿ ಗ್ರಾಮದ ಮತಗಟ್ಟೆ ಸಂಖ್ಯೆ 190ರಲ್ಲಿ ನಡೆದಿದೆ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೆಗುಳಿ ಮತಗಟ್ಟೆಯಲ್ಲಿ ಮುರುಳಿಧರ್ ಹೆಗಡೆ ಎಂಬುವವರ ಸಿರಿಯಲ್ ನಂಬರ್ ಬಳಸಿ ಬೇರೊಬ್ಬರು ವ್ಯಕ್ತಿ ಮತದಾನ ಮಾಡಿದ್ದು ಮುರುಳಿಧರ್ ಎಂಬುವವರು ಮತದಾನಕ್ಕೆ ಬಂದ ವೇಳೆ ಪ್ರಕರಣ ಬಯಲಿಗೆ ಬಂದಿದೆ. ಇನ್ನು ಲೋಪದ ಅರಿವಾದ ಹಿನ್ನೆಲೆಯಲ್ಲಿ ಮತಗಟ್ಟೆಯ ಚುನಾವಣಾಧಿಕಾರಿಗಳು 17ಸಿ ಅಡಿಯಲ್ಲಿ ಟೆಂಡರ್ ಓಟ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಒಂದು ಮತವನ್ನು ಕಡಿತಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದು, ಗ್ರಾಮಸ್ಥರು ಚುನಾವಣಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.












Click it and Unblock the Notifications