"ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ್ರೆ ಜೆಡಿಎಸ್ನಲ್ಲಿ ಉಳಿಯುವೆ''
ಕಾರವಾರ, ಡಿಸೆಂಬರ್ 16: ಸದ್ಯ ಬಿಜೆಪಿಗೆ ದೇಶದಲ್ಲಿ ಭವಿಷ್ಯವಿದ್ದು, ಜೆಡಿಎಸ್-ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಮಾತ್ರ ಅಲ್ಲಿ ಉಳಿಯುವೆ. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸದ್ಯ ಜೆಡಿಎಸ್- ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಒಳ್ಳೆಯ ಬೆಳವಣಿಗೆ. ನಾನು ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಸಲಹೆ ನೀಡಿದ್ದೇನೆ. ಬಿಜೆಪಿ ಜೊತೆಯಲ್ಲಿ ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಪಕ್ಷದಲ್ಲಿಯೇ ಉಳಿಯುವ ಚಿಂತನೆ ಮಾಡುತ್ತೇನೆ ಎಂದಿದ್ದಾರೆ.
ನಾನು ಜೆಡಿಎಸ್ ಪಕ್ಷದಲ್ಲಿ ಇದ್ದರೂ ಅತಂತ್ರವಾಗಿದ್ದೇನೆ. ಮುಂದೆ ನನ್ನ ರಾಜಕೀಯ ಭವಿಷ್ಯಕ್ಕಾಗಿ ಯಾವ ಪಕ್ಷಕ್ಕೆ ಹೋಗಬೇಕು ಎಂದು ಇನ್ನೂ ಗೊಂದಲದಲ್ಲಿದ್ದೇನೆ. ಜನವರಿ 15ರ ನಂತರ ಈ ಬಗ್ಗೆ ನನ್ನ ಕಾರ್ಯಕರ್ತರಿಗೆ ಸ್ಪಷ್ಟಪಡಿಸುತ್ತೇನೆ. ದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಮಾತ್ರ ಭವಿಷ್ಯವಿದ್ದಂತೆ ಇದೆ. ಕಾಂಗ್ರೆಸ್ ವಿರೋಧ ಪಕ್ಷವಾಗಲೂ ಅರ್ಹತೆ ಕಳೆದುಕೊಂಡಿದೆ. ಬಿಹಾರದಲ್ಲಿ ನಿತೀಶ್ಕುಮಾರ್ ಹೇಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೋ ಹಾಗೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೆ ಒಳ್ಳೆಯ ಬೆಳವಣಿಗೆಯಾಗಲಿದೆ ಎಂದಿದ್ದಾರೆ.

ಜನವರಿ 15ರ ನಂತರ ಸ್ಪಷ್ಟ ನಿರ್ಧಾರ
ನಾನು ನಾಲ್ಕು ಬಾರಿ ವಿಧಾನಸಭಾ ಚುನಾವಣೆ ಎದುರಿಸಿದ್ದು, ಇಂದು ವಸಂತ್ ಅಸ್ನೋಟಿಕರ್ ಅಭಿಮಾನಿಗಳು, ನನ್ನ ಬೆಂಬಲಿಗರು ಕ್ಷೇತ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲರಿಗೂ ಆನಂದ್ ಮುಂದೆ ಯಾವ ಪಕ್ಷದಲ್ಲಿ ಇರುತ್ತಾರೆ ಎನ್ನುವ ಕುತೂಹಲ ಇದೆ. ನನ್ನ ಕೆಲ ನಿಲುವಿನಿಂದ ಅವರು ಗೊಂದಲಕ್ಕೆ ಸಿಲುಕಿ ನೋವನ್ನು ಅನುಭವಿಸಿದ್ದಾರೆ. ಈ ಬಾರಿ ಹಿಂದೆ ಮಾಡಿದ ತಪ್ಪುಗಳನ್ನು ನಾನು ಮಾಡುವುದಿಲ್ಲ. ಚುನಾವಣೆ ಸೋತಾಗಿನಿಂದ ಕ್ಷೇತ್ರದಲ್ಲಿಯೇ ಓಡಾಟ ನಡೆಸಿದ್ದೇನೆ. ಜನವರಿ 15ರ ನಂತರ ಸ್ಪಷ್ಟ ನಿರ್ಧಾರವೊಂದನ್ನು ತೆಗೆದುಕೊಂಡು ರಾಜಕೀಯ ಮುಂದುವರೆಸುತ್ತೇನೆ ಎಂದಿದ್ದಾರೆ.

ಕರವೇ ಅನಾವಶ್ಯಕವಾಗಿ ವಿರೋಧ
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಮಾಡಿರುವ ಬಿಜೆಪಿ ಸರ್ಕಾರದ ಕ್ರಮ ಒಳ್ಳೆಯದ್ದಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅನಾವಶ್ಯಕವಾಗಿ ವಿರೋಧ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೇ ಹುಟ್ಟಿ ಬೆಳೆದ ಮರಾಠಿ ಮಾತನಾಡುವವರು ರಾಜ್ಯದ ಮಕ್ಕಳೇ, ಅವರ ಅಭಿವೃದ್ಧಿಗೆ ಪ್ರಾಧಿಕಾರ ಮಾಡಿದರೆ ತಪ್ಪೇನು. ಕ್ಷೇತ್ರದ ಗಡಿಯಲ್ಲೂ ಹಲವು ಮರಾಠಿಗರಿದ್ದು, ಅವರಿಗೆ ಈ ಪ್ರಾಧಿಕಾರದಿಂದ ಸಹಾಯವಾಗಲಿದೆ. ಕಾರವಾರದ ಸಮಗ್ರ ಅಭಿವೃದ್ಧಿಗೆ ಹೈದ್ರಾಬಾದ್ ಕರ್ನಾಟಕ ಮಾದರಿಯಲ್ಲಿ ಗಡಿ ಪ್ರದೇಶ ಎಂದು ಗುರುತಿಸಿ ವಿಶೇಷ ಸವಲತ್ತು ಕೊಡಬೇಕು ಎಂದು ಆನಂದ್ ಮನವಿ ಮಾಡಿಕೊಂಡಿದ್ದಾರೆ.

ಹಾಲಿ-ಮಾಜಿಗಳಿಂದ ಆಣೆ ಪ್ರಮಾಣ
ಹಿಂದಿನಿಂದ ಪಂಚಾಯತಿ ಚುನಾವಣೆಯ ರಾಜಕೀಯಕ್ಕೆ ನಾನು ಇಳಿದಿಲ್ಲ. ಈ ಹಿನ್ನಲೆಯಲ್ಲಿ ಈ ಬಾರಿ ಸಹ ತಟಸ್ಥವಾಗಿ ಉಳಿಯಲಿದ್ದು, ಉತ್ತಮ ಅಭ್ಯರ್ಥಿಗಳನ್ನು ಜನರು ಆಯ್ಕೆ ಮಾಡಲಿ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ಸ್ಥಳೀಯ ಪಂಚಾಯತ್ ಸಾಕಷ್ಟು ಪ್ರಾಮುಖ್ಯತೆ ಹೊಂದಿರುತ್ತದೆ. ಆ ಊರಿನ ದೇವರನ್ನು ಬಿಟ್ಟರೆ ಪಂಚಾಯತಿಗೆ ಹೆಚ್ಚು ಬೆಲೆ ಇರುತ್ತದೆ. ಪಂಚಾಯತಿ ಪ್ರತಿನಿಧಿಗಳ ಆಯ್ಕೆಗೆ ರಾಜಕೀಯ ಇರಬಾರದು. ಅದಕ್ಕಾಗಿ ನಾನು ಈ ಅಖಾಡದಲ್ಲಿ ಇಳಿಯುವುದಿಲ್ಲ ಎಂದಿದ್ದಾರೆ.
Recommended Video

ಯಾರೇ ಉತ್ತಮ ಅಭ್ಯರ್ಥಿ ನಿಂತರೂ ಅವರಿಗೆ ತನ್ನ ಬೆಂಬಲ
ಸದ್ಯ ಕಾರವಾರದ ಹಾಲಿ ಹಾಗೂ ಮಾಜಿ ಶಾಸಕರು ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳಿಂದ ಆಣೆ ಪ್ರಮಾಣ ಮಾಡಿಸಿಕೊಂಡು, ಗೆದ್ದ ನಂತರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬೆಂಬಲ ಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಯಾರೇ ಉತ್ತಮ ಅಭ್ಯರ್ಥಿ ನಿಂತರೂ ಅವರಿಗೆ ತನ್ನ ಬೆಂಬಲವಿದ್ದು, ಜನರು ಹಣ- ಹೆಂಡದ ಆಮಿಷಕ್ಕೆ ಬಲಿಯಾಗದೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ, ಅಭಿವೃದ್ಧಿ ಮಾಡುವವರನ್ನು ಗೆಲ್ಲಿಸಬೇಕು ಎಂದು ಇಬ್ಬರೂ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications