ನೀರು ಹರಿಯುವ ಕಾಲುವೆಗೆ ಮಣ್ಣು ತುಂಬಿದ ನೌಕಾನೆಲೆ: ಮೊದಲ ಮಳೆಗೆ ಮುಳುಗಿದ ಇಡೂರು ಗ್ರಾಮ!
ಕಾರವಾರ, ಜೂನ್ 29: ಸೀಬರ್ಡ್ ಅಭಿವೃದ್ಧಿ ಕಾಮಗಾರಿ ಮಳೆಗಾಲದಲ್ಲಿ ಸ್ಥಳೀಯರಿಗೆ ಮತ್ತೆ ಕಂಠಕವಾಗಿದೆ. ಹರಿಯುವ ನೀರಿಗೆ ಅಡ್ಡಲಾಗಿ ಮಣ್ಣು ತುಂಬಿದ ಪರಿಣಾಮ ಮಳೆನೀರು ತಾಲೂಕಿನ ಚೆಂಡೀಯಾದ ಇಡೂರು ಗ್ರಾಮದ ನೂರಾರು ಎಕರೆ ಪ್ರದೇಶದಲ್ಲಿ ಜಲಾವೃತಗೊಂಡಿದ್ದು ಜಮೀನುಗಳ ಮಧ್ಯ ಮನೆಕಟ್ಟಿಕೊಂಡಿದ್ದ ಹತ್ತಾರು ಕುಟುಂಬಗಳು ಇದೀಗ ಆತಂಕದಲ್ಲಿ ಕಾಲಕಳೆಯಬೇಕಾಗಿದೆ.
ಇಡೂರು ಗ್ರಾಮದಲ್ಲಿನ 10ಕ್ಕೂ ಹೆಚ್ಚು ಮನೆಗಳ ಜನರು ತಮ್ಮದಲ್ಲದ ತಪ್ಪಿಗೆ ಪರದಾಡಬೇಕಾಗಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜಮೀನುಗಳ ಮಧ್ಯೆ ಕಟ್ಟಿಗೊಂಡಿರುವ ಮನೆಗಳು ಇದೀಗ ದ್ವೀಪದಂತಾಗಿವೆ. ಮನೆಗಳಿಗೆ ತೆರಳಬೇಕೆಂದರೆ ಸೊಂಟದವರೆಗೆ ಮುಳುಗುವ ನೀರಿನಲ್ಲಿ ತೆರಳಬೇಕಾಗಿದೆ. ಕೆಲ ಮನೆಗಳ ಬಾಗಿಲವರೆಗೂ ನೀರು ಬಂದಿದ್ದು, ಹೀಗೆ ಮಳೆ ಮುಂದುವರಿದಲ್ಲಿ ಮನೆಯೇ ಮುಳುಗುವ ಭೀತಿ ಇದೀಗ ಗ್ರಾಮಸ್ಥರದ್ದಾಗಿದೆ.

ಇಷ್ಟೊಂದು ಅವಾಂತರಕ್ಕೆ ಕಾರಣವಾಗಿರುವುದು ನೌಕಾನೆಲೆ ಕಾಮಗಾರಿ ಎನ್ನಲಾಗಿದೆ. ನೀರು ಹರಿದು ಹೋಗುವ ಹಳ್ಳಕ್ಕೆ ಅಡ್ಡಲಾಗಿ ಮಣ್ಣು ಸುರಿದು ರಸ್ತೆ ಮಾಡಿದ ಪರಿಣಾಮ ಇದೀಗ ಮಳೆ ನೀರು ಸಂಗ್ರಹವಾಗುತ್ತಿದೆ. ಕಳೆದ ಬಾರಿಯೂ ಇದೇ ರೀತಿ ಮಳೆ ನೀರು ತೆರಳುವ ಕಾಲುವೆ ಮುಚ್ಚಿದ ಪರಿಣಾಮ ಚೆಂಡಿಯಾ, ಅರಗಾ ವ್ಯಾಪ್ತಿಯಲ್ಲಿ ನೀರು ತುಂಬಿ ಜನರು ಪರದಾಡುವಂತಾಗಿತ್ತು.
ಇದೀಗ ಮತ್ತದೆ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಉಪ್ಪು ನೀರಿನ ಕಾರಣಕ್ಕೆ ಪಾಳುಬಿಟ್ಟಿದ್ದ ಜಮೀನು ಸೇರಿದಂತೆ ಅಲ್ಪಸ್ವಲ್ಪ ಮಾಡುತ್ತಿದ್ದ ಕೃಷಿ ಭೂಮಿ ಕೂಡ ಇದೀಗ ಜಲಾವೃತಗೊಂಡು ಕೆಸರು ತುಂಬಿಕೊಳ್ಳುತ್ತಿದೆ. ಮನೆಯವರು ಮನೆ ಬಿಟ್ಟು ಹೋಗಲು ಆಗದೆ ಇತ್ತ ಇರಲು ಧೈರ್ಯ ಸಾಲದ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ.
ನಿರ್ಮಾಣವಾಗದ ತಡೆಗೋಡೆ
2008 ಅಕ್ಟೋಬರ್ನಲ್ಲಿ ಇದೇ ರೀತಿ ಗ್ರಾಮದಲ್ಲಿ ನೀರು ತುಂಬಿಕೊಂಡು ಮನೆಗಳನ್ನು ಕಳೆದುಕೊಂಡಿದ್ದೇವು. ಆದರೆ ಕಳೆದ ಮೂರು ವರ್ಷಗಳಿಂದ ಮತ್ತೆ ಇದೇ ರೀತಿ ನೀರು ತುಂಬಿಕೊಳ್ಳುತ್ತಿದೆ. ಈ ಬಾರಿ ಮೊದಲ ಮಳೆಗೆ ಭಾರಿ ಪ್ರಮಾಣದಲ್ಲಿ ನೀರು ಶೇಖರಣೆಗೊಂಡಿದ್ದು ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮನೆಗಳು ಕುಸಿಯುವ ಭೀತಿ ಇದೆ. ಪಕ್ಕದಲ್ಲಿಯೇ ಹಳ್ಳ ಹರಿಯುವ ಕಾರಣ ನೀರು ಬೇಗ ಸಂಗ್ರಹವಾಗುತ್ತದೆ. ಹಳ್ಳದ ನೀರು ಹತ್ತದಂತೆ ತಡೆಗೋಡೆ ನಿರ್ಮಿಸುವುದಾಗಿ ಹೇಳಲಾಗಿತ್ತಾದರೂ ಈವರೆಗೂ ಯಾವುದೇ ಕೆಲಸವಾಗಿಲ್ಲ. ಸಮಸ್ಯೆಗೆ ಕೂಡಲೇ ಅಧಿಕಾರಿಗಳು ಸ್ಪಂದಿಸಿ ನೌಕಾನೆಲೆಯವರಿಗೆ ಸೂಚಿಸಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರಾದ ಕೃಷ್ಣಾನಂದ ಆಗ್ರಹಿಸಿದ್ದಾರೆ.

ಮಕ್ಕಳು ಸಂಬಂಧಿಕರ ಮನೆಗೆ ಶಿಫ್ಟ್
ಕಳೆದ ಮೂರು ದಿನಗಳಿಂದ ನೀರು ತುಂಬಿಕೊಂಡಿದೆ. ಈವರೆಗೂ ಯಾರೊಬ್ಬರು ಸಮಸ್ಯೆ ಆಲಿಸಿಲ್ಲ. ನೌಕಾನೆಲೆಯವರು ಹಳ್ಳಕ್ಕೆ ಮಣ್ಣು ಸುರಿದ ಕಾರಣ ಈ ರೀತಿ ಸಮಸ್ಯೆಯಾಗಿದೆ. ಮಳೆ ಜೋರಾದಲ್ಲಿ ಮತ್ತಷ್ಟು ನೀರು ತುಂಬುವ ಭೀತಿ ಇರುವ ಕಾರಣ ಮನೆಯಲ್ಲಿದ್ದ ಮಕ್ಕಳನ್ನು ಸಂಬಂಧಿಕರ ಮನೆಗಳಲ್ಲಿ ಇರಿಸಿದ್ದೇವೆ. ನಮಗೆ ಮಳೆ ನೀರು ತುಂಬುವ ಭೀತಿ ಇದ್ದು ನಮಗೆ ಮಳೆಗಾಲ ಮುಗಿಯುವವರೆಗೆ ಎಲ್ಲಿಯಾದರು ವ್ಯವಸ್ಥೆ ಮಾಡಬೇಕು. ಇಲ್ಲವೇ ಕೂಡಲೇ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರಾದ ಬಾಬುರಾವ್ ಆಗ್ರಹಿಸಿದ್ದಾರೆ.
ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರ
ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ. ನೌಕಾನೆಲೆಯವರು ಹಳ್ಳಕ್ಕೆ ಮಣ್ಣು ತುಂಬಿದ್ದರಿಂದ ಈ ರೀತಿ ನೀರು ಸಂಗ್ರಹವಾಗಿದೆ. ಈಗಾಗಲೇ ನೌಕಾನೆಲೆಯಿಂದ ಆ ಮಣ್ಣನ್ನು ತೆರವುಗೊಳಿಸುತ್ತಿರುವ ಮಾಹಿತಿ ಇದೆ. ಆದರೆ ಗ್ರಾಮದಲ್ಲಿ ಮತ್ತೆ ನೀರು ತುಂಬಿಕೊಂಡಲ್ಲಿ ಕಾಳಜಿ ಕೇಂದ್ರ ತೆರೆಯಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಗ್ರಾಮಸ್ಥರ ಸಂಪರ್ಕದಲ್ಲಿದ್ದು ಅವಶ್ಯವಿದ್ದಲ್ಲಿ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗುವುದು ಚೆಂಡಿಯಾ ಗ್ರಾಮ ಪಂಚಾಯಿತಿ ಪಿಡಿಓ ನಾಗೇಶ ತೆಂಡೂಲ್ಕರ್ ತಿಳಿಸಿದ್ದಾರೆ.












Click it and Unblock the Notifications