ಗೋಕರ್ಣ ದೇಗುಲ ಹಸ್ತಾಂತರದ ವೇಳೆ ಬಂದ ಫೋನ್ ಕರೆ, ಪ್ರಕ್ರಿಯೆ ಸ್ಥಗಿತ
Recommended Video

ಕುಮಟಾ, ಅ 9: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ರಾಮಚಂದ್ರಾಪುರ ಮಠದ ಸುಪರ್ದಿಗೆ ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತ ವಾಪಸ್ ನಡೆಯುವ ಪ್ರಕ್ರಿಯೆ, ಮಂಗಳವಾರ (ಅ 9) ಆರಂಭವಾಗಿ, ಹಸ್ತಾಂತರ ಪ್ರಕ್ರಿಯೆ ಮಧ್ಯದಲ್ಲೇ ಸ್ಥಗಿತಗೊಂಡ ವಿದ್ಯಮಾನ ನಡೆದಿದೆ.
ಕುಮಟಾ ಕಂದಾಯ ಇಲಾಖೆಯ ಅಧಿಕಾರಿಗಳು, ರಾಮಚಂದ್ರಾಪುರ ಮಠದ ಜಿ.ಕೆ ಹೆಗಡೆ ಅವರಿಗೆ ಶನಿವಾರ (ಅ 6) ಸಂಜೆ ಕರೆ ಮಾಡಿ, "ನ್ಯಾಯಾಲಯದ ಆದೇಶದ ಮೇರೆಗೆ ದೇವಾಲಯವನ್ನು ಹಸ್ತಾಂತರಿಸುತ್ತೇವೆ. ಹಸ್ತಾಂತರ ಪ್ರಕ್ರಿಯೆಗಳನ್ನು ದಾಖಲೀಕರಿಸಲು ಅಂದು ಬಂದಿದ್ದ ಫೋಟೋ, ವಿಡಿಯೋದವರನ್ನು ಹಾಗೂ ಆಭರಣಗಳ ಮಾಪನ ಮಾಡಿ ಪರೀಕ್ಷಿಸುವವರನ್ನು ಬರುವಂತೆ ತಿಳಿಸಿ, ನಾಳೆ (ಅ 7, ಭಾನುವಾರ) ಬೆಳಗ್ಗೆ 9 ಗಂಟೆಗೆ ಹಸ್ತಾಂತರ ಮಾಡುತ್ತೇವೆ." ಎಂದು ತಿಳಿಸಿದ್ದರು ಎನ್ನುವ ಮಾಹಿತಿಯಿದೆ.
ಇದಾಗಿ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಕಂದಾಯ ಇಲಾಖೆಯಿಂದ ದೂರವಾಣಿ ಕರೆಬಂದು, ನಾಳೆ ಹಸ್ತಾಂತರಕ್ಕೆ ಬರುತ್ತಿಲ್ಲ, ನೀವೊಮ್ಮೆ ತಹಶೀಲ್ದಾರರ ಕಛೇರಿಗೆ ಕರೆ ಮಾಡಿ, ಕಾರಣ ಏನು ಎನ್ನುವುದನ್ನು ವಿಚಾರಿಸಿಕೊಳ್ಳಿ ಎನ್ನುವ ಉತ್ತರ ಬಂದಿದೆ.
ರಾಮಚಂದ್ರಾಪುರ ಮಠದವರು ತಹಶೀಲ್ದಾರರ ಕಛೇರಿಗೆ ಕರೆ ಮಾಡಿದಾಗ " ನಾಳೆ ಹಸ್ತಾಂತರ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು, ಆದರೆ ಸರ್ಕಾರದ ಕಡೆಯಿಂದ ಪತ್ರವೊಂದರ ಅವಶ್ಯಕತೆ ಇದ್ದು, ಅದು ತಲುಪಿದ ನಂತರ ಹಸ್ತಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಕಚೇರಿಯವರು ಮಠದವರಿಗೆ ಉತ್ತರಿಸಿದ್ದಾರೆ.
ಇದಾದ ನಂತರ ಕಂದಾಯ ಇಲಾಖೆಯ ಅಧಿಕಾರಿಗಳು ರಾಮಚಂದ್ರಾಪುರ ಮಠಕ್ಕೆ ಪತ್ರ ಬರೆದು, ಹಸ್ತಾಂತರ ಪ್ರಕ್ರಿಯೆ ಮಂಗಳವಾರ (ಅ 9) ಬೆಳಗ್ಗೆ ಹತ್ತು ಗಂಟೆಗೆ ನಡೆಯಲಿದೆ, ಸಿದ್ದರಾಗಿರಿ ಎನ್ನುವ ಮಾಹಿತಿಯನ್ನು ನೀಡಿದ್ದರು. ಅದರಂತೇ, ಪ್ರಕ್ರಿಯೆ ಆರಂಭವಾಗಿತ್ತು.

ರಾಮಚಂದ್ರಾಪುರ ಮಠದವರಿಗೆ ಸೂಚನೆ
ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ದಿನಾಂಕ ಅಕ್ಟೋಬರ್ ಆರರಂದು, ಕುಮಟಾ ತಾಲ್ಲೂಕು ಅಧಿಕಾರಿಗಳಿಗೆ ಗೋಕರ್ಣ ಮಹಾಬಲೇಶ್ವರ ದೇವಾಲಯದ ಸಮಗ್ರ ಆಡಳಿತವನ್ನು ಹಸ್ತಾಂತರಿಸುವಂತೆ ಸೂಚಿಸಿದ್ದು, ಆ ಆದೇಶದ ಅನ್ವಯ ಪತ್ರ ಮುಖೇನ ರಾಮಚಂದ್ರಾಪುರ ಮಠದವರಿಗೆ ಸೂಚಿಸಿದ್ದರು. ಮಠದ ಸಿಬ್ಬಂದಿಗಳು, ಇದಕ್ಕೆ ಬೇಕಾದ ಸಿದ್ದತೆಯನ್ನು ಅ 9ರಂದು ಮಾಡಿಕೊಂಡಿದ್ದರು.ಸುಪ್ರೀಂ ಕೋರ್ಟಿನ ಆದೇಶದ ಅನ್ವಯ ದೇವಾಲಯದ ಸಮಗ್ರ ಆಡಳಿತವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸಿ ಎಂದು ಸ್ವತಃ ಜಿಲ್ಲಾಧಿಕಾರಿಗಳೇ ತಹಶೀಲ್ದಾರರಿಗೆ 06.10.18 ರಂದು ಆದೇಶಿಸಿದ್ದರು.

ದೇವರ ಆಭರಣಗಳನ್ನು ಹಸ್ತಾಂತರ ಮಾಡುವ ಮಧ್ಯೆ, ಬಂದ ದೂರವಾಣಿ ಕರೆ
ಅದರಂತೇ, ಹಸ್ತಾಂತರ ಪ್ರಕ್ರಿಯೆ ಆರಂಭವಾಗಿತ್ತು. ಆದರೆ, ದೇವರ ಆಭರಣಗಳನ್ನು ಹಸ್ತಾಂತರ ಮಾಡುವ ಮಧ್ಯೆ, ಬಂದ 'ದೂರವಾಣಿ ಕರೆಯ' ಆದೇಶದ ಮೇರೆಗೆ ಪ್ರಕ್ರಿಯೆಯನ್ನು ಅಲ್ಲಿಗೇ ಕಂದಾಯ ಇಲಾಖೆಯ ಅಧಿಕಾರಿಗಳು ನಿಲ್ಲಿಸಿರುತ್ತಾರೆ.
ಸರ್ವೋಚ್ಚ ನ್ಯಾಯಾಲಯದ ಆದೇಶ, ಅದನ್ನು ಅನುಸರಿಸುವಂತೆ ಜಿಲ್ಲಾಧಿಕಾರಿಗಳ ಆದೇಶ, ಕುಮಟಾ ತಾಲೂಕು ಅಧಿಕಾರಿಗಳಿಂದ ಹಸ್ತಾಂತರ ಪತ್ರ ಇವೆಲ್ಲವೂ ಇದ್ದರೂ, ಹಸ್ತಾಂತರ ಪ್ರಕ್ರಿಯೆ ಯಾವ ಕಾರಣಕ್ಕಾಗಿ ಸ್ಥಗಿತಗೊಂಡಿತು ಎನ್ನುವುದರ ಬಗ್ಗೆ ಹಸ್ತಾಂತರಕ್ಕೆ ಬಂದಿದ್ದ ಅಧಿಕಾರಿಗಳಿಗೆ ಮಾಹಿತಿಯಿರಲಿಲ್ಲ.

ತಪ್ಪಾಗಿ ಅರ್ಥೈಸಿಕೊಂಡು ದೇವಾಲಯವನ್ನು ವಶಪಡಿಸಿಕೊಂಡಿದ್ದ ಸರ್ಕಾರ
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ರಾಮಚಂದ್ರಾಪುರ ಮಠಕ್ಕೆ ದೇವಾಲಯ ಹಸ್ತಾಂತರವಾಗುತ್ತಿದೆ.
ಸೆ.07 ರ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡು ದೇವಾಲಯವನ್ನು ವಶಪಡಿಸಿಕೊಂಡಿದ್ದ ಸರ್ಕಾರ.
ಅ.03 ರಂದು ಸೆ.07 ರ ತೀರ್ಪಿಗೆ ಸ್ಪಷ್ಟನೆ ನೀಡಿ, "ಅದು ಅರ್ಥವಾಗಿರಲಿಲ್ಲವೇ? ಏಕೆ ತಪ್ಪಾಗಿ ಅರ್ಥೈಸಿಕೊಂಡಿರಿ?" ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿದ್ದ ನ್ಯಾಯಪೀಠ ಸೆ.07 ರ ಯಥಾಸ್ಥಿತಿ ಮುಂದಿನ ಆದೇಶದವರೆಗೂ ಮುಂದುವರಿಯಲಿ ಎಂದು ಮಧ್ಯಂತರ ಆದೇಶ ನೀಡಿತ್ತು.

ದೇಗುಲದ ಆಡಳಿತವನ್ನು ಮಠದ ಸುಪರ್ದಿಗೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ
ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠವು ರಾಮಚಂದ್ರಾಪುರ ಮಠದ ಪರವಾಗಿ ಆದೇಶ ಹೊರಡಿಸಿ, ಮುಂದಿನ ಆದೇಶ ಬರುವವರೆಗೆ ದೇಗುಲದ ಆಡಳಿತವನ್ನು ರಾಮಚಂದ್ರಪುರ ಮಠದ ಸುಪರ್ದಿಗೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ಬಗ್ಗೆ 2008ರಲ್ಲಿ ಕರ್ನಾಟಕ ಸರ್ಕಾರ ನೀಡಿದ್ದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿತ್ತು.

ತಿಂಗಳು ತುಂಬಿದ ಶಿಶುವನ್ನು ಹೆರಿಗೆಯಾಗದಂತೆ ಎಷ್ಟುದಿನ ಹಿಡಿದಿಡುತ್ತಾರೋ
ಹಸ್ತಾಂತರ ಪ್ರಕ್ರಿಯೆ ಸ್ಥಗಿತಗೊಂಡಿದ್ದಕ್ಕೆ ತೀವ್ರ ಬೇಸರಗೊಂಡಿರುವ ರಾಮಚಂದ್ರಾಪುರ ಮಠ, ಕೋಟಿಗಟ್ಟಲೆ ಸುರಿದು ಆಯಕಟ್ಟಿನ ಜಾಗಗಳಲ್ಲಿ ಕುಳಿತಿರುವ ದೊಡ್ಡ ಜೋಬಿರುವ "ಸಣ್ಣ ಮನುಷ್ಯ"ರಿಗೆ ಹಸ್ತಾಂತರ ಸರ್ವಥಾ ಒಪ್ಪಿಗೆಯಿಲ್ಲ. ಯಾವ ಅಧಿಕಾರಿಗಳನ್ನು ಹೆಸರಿಸಿ ಸರ್ವೋಚ್ಛ ನ್ಯಾಯಾಲಯದ ಆದೇಶವಿದೆಯೋ ಆ ವ್ಯಕ್ತಿಗಳಿಗೆ ನ್ಯಾಯಾಂಗ ನಿಂದನೆಯ ಪುಲಿಯೊಂದುಕಡೆ, ದೊಡ್ಡ ಜೇಬಿನ ದರಿಯಿನ್ನೊಂದು ಕಡೆ.. ತಿಂಗಳು ತುಂಬಿದ ಶಿಶುವನ್ನು ಹೆರಿಗೆಯಾಗದಂತೆ ಎಷ್ಟುದಿನ ಹಿಡಿದಿಡುತ್ತಾರೋ ನೋಡೇಬಿಡೋಣ ಎನ್ನುವ ಪ್ರತಿಕ್ರಿಯೆ ನೀಡಿದ್ದಾರೆ.











Click it and Unblock the Notifications