2,500 ಅಡಿ ಆಳದ ಕಂದಕ, ಆ ದಿನ ಸ್ವಲ್ಪ ಯಾಮಾರಿದ್ರೂ ದಳಪತಿ ವಿಜಯ್ ಜೊತೆ ನನ್ನ ಪ್ರಾಣವೂ ಹೋಗ್ತಿತ್ತು: ನಟ ಅಭಿಮನ್ಯು ಸಿಂಗ್
ನಟ ದಳಪತಿ ವಿಜಯ್ ಅವರು ತನ್ನ ಸಿನಿಮಾ ಸಾಮ್ರಾಜ್ಯ ತೊರೆದು ಈಗಷ್ಟೇ ರಾಜಕೀಯಕ್ಕೆ ಪ್ರವೇಶಿಸಿ, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಇದರ ನಡುವೆ ವಿಜಯ್ಗೆ ಶೂಟಿಂಗ್ ಸಮಯದಲ್ಲೇ ಪ್ರಾಣಾಪಾಯ ಎದುರಾಗಿದ್ದ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಖ್ಯಾತ ಖಳನಾಯಕ, ಬಹುಭಾಷಾ ನಟ ಅಭಿಮನ್ಯು ಸಿಂಗ್ ಅವರು ವಿಜಯ್ ಜೊತೆಗಿನ ಹಳೆಯ ಶೂಟಿಂಗ್ ದಿನಗಳ ಆಘಾತಕಾರಿ ಘಟನೆಯೊಂದನ್ನು ನೆನೆದಿದ್ದಾರೆ. ಆ ದಿನ ನಾವಿಬ್ಬರೂ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದೆವು ಎಂದೂ ಅಭಿಮನ್ಯು ಹೇಳಿದ್ದಾರೆ.
ಚಿತ್ರೀಕರಣದ ವೇಳೆ ನಡೆದಿದ್ದೇನು?
ಅಭಿಮನ್ಯು ಸಿಂಗ್ ಅವರು ದಳಪತಿ ವಿಜಯ್ ಜೊತೆ 'ವೇಲಾಯುಧಂ' (2011) ಮತ್ತು 'ತಲೈವಾ' (2013) ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದರು. ವಿಜಯ್ ಅವರ ಸರಳತೆ ಮತ್ತು ವಿನಮ್ರ ಗುಣವನ್ನು ಶ್ಲಾಘಿಸಿರುವ ಅಭಿಮನ್ಯು, ಇತ್ತೀಚಿನ ಸಂದರ್ಶನದಲ್ಲಿ 'ವೇಲಾಯುಧಂ' ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ಶೂಟಿಂಗ್ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಚಲಿಸುವ ರೈಲಿನ ಮೇಲೆ ನಡೆಸಿದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ತಾವು ಹೇಗೆ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾಗಿದ್ದೆವು ಎಂಬ ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

"ಕೊಯಮತ್ತೂರಿನಿಂದ ಸುಮಾರು 6 ಗಂಟೆಗಳ ಕಾಲ ಪ್ರಯಾಣಿಸಿ ತಲುಪಿದ ಒಂದು ಸಣ್ಣ ರೈಲ್ವೆ ನಿಲ್ದಾಣದಲ್ಲಿ 6 ದಿನಗಳಿಂದ ಫೈಟ್ ಸೀನ್ ಶೂಟಿಂಗ್ ನಡೆಯುತ್ತಿತ್ತು. 7ನೇ ದಿನ ರೈಲಿನ ಮೇಲ್ಭಾಗದಲ್ಲಿ ದೃಶ್ಯಗಳನ್ನು ಚಿತ್ರೀಕರಿಸಬೇಕಿತ್ತು. ಅದು ರೈಲು ಲಭ್ಯವಿರುವ ಕೊನೆಯ ದಿನವಾಗಿತ್ತು. ಆಸ್ಟ್ರೇಲಿಯಾದ ಫೈಟ್ ಮಾಸ್ಟರ್ ಒಬ್ಬರು, ಭದ್ರತೆಗೆ ಹೆಚ್ಚಿನ ಸಮಯ ನೀಡಿದರೆ ನಿಗದಿತ ಸಮಯದಲ್ಲಿ ಶೂಟಿಂಗ್ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನಂತರ ಚೆನ್ನೈನ ಮತ್ತೊಬ್ಬ ಫೈಟ್ ಮಾಸ್ಟರ್ ನೆರವಿಗೆ ಬಂದರು. ಆರಂಭದಲ್ಲಿ ರೈಲು ನಿಂತಿದ್ದಾಗ ನಾವಿಬ್ಬರೂ ಪ್ರಾಕ್ಟೀಸ್ ಮಾಡಿದ್ದೆವು, ಆದರೆ ಕ್ಯಾಮೆರಾ ಆನ್ ಆಗುತ್ತಿದ್ದಂತೆ ರೈಲು ಚಲಿಸಲು ಪ್ರಾರಂಭಿಸುತ್ತದೆ ಎಂದು ನಮಗೆ ತಿಳಿಸಿದ್ರು" ಎಂದು ಅಭಿಮನ್ಯು ಹೇಳಿದ್ದಾರೆ.
2,500 ಅಡಿ ಆಳದ ಕಂದಕ ಮತ್ತು ಸಾವಿನ ಭಯ
ಚಲಿಸುವ ರೈಲಿನ ಮೇಲೆ ಫೈಟ್ ಮಾಡಬೇಕಾದ ಪರಿಸ್ಥಿತಿ ಕಂಡು ಆತಂಕಗೊಂಡ ಅಭಿಮನ್ಯು, ತಕ್ಷಣ ವಿಜಯ್ ಅವರ ಬಳಿ ಹೋಗಿ, "ನಿಜವಾಗಿಯೂ ನಾವು ಹೀಗೆ ಫೈಟ್ ಮಾಡಲು ಸಾಧ್ಯವೇ?" ಎಂದು ಕೇಳಿದ್ದರು. ಅದಕ್ಕೆ ವಿಜಯ್ ಅವರು ಧೈರ್ಯ ತುಂಬುತ್ತಾ, "ಇಲ್ಲ ಇಲ್ಲ, ನಾವು ಇಲ್ಲಿ ಫೈಟ್ ಮಾಡಲ್ಲ, ಬದಲಿಗೆ ಒಬ್ಬರನ್ನೊಬ್ಬರು ಬದುಕಿಸುತ್ತೇವೆ" ಎಂದು ಉತ್ತರಿಸಿದ್ದರಂತೆ. ರೈಲು ಸುಮಾರು 70ರಿಂದ 80 ಕಿಲೋಮೀಟರ್ ವೇಗವನ್ನು ತಲುಪಿದಾಗ, ರೈಲಿನ ಮೇಲೆ ಯಾವುದೇ ಸುರಕ್ಷತಾ ಕವಚಗಳಿಲ್ಲದೆ ಕೇವಲ ವಿಜಯ್, ಅಭಿಮನ್ಯು ಮತ್ತು ನಡುವಿಗೆ ಹಗ್ಗ ಕಟ್ಟಿಕೊಂಡಿದ್ದ ಕ್ಯಾಮೆರಾಮನ್ ಮಾತ್ರ ಇದ್ದರು.
"ರೈಲು ಚಲಿಸುತ್ತಿದ್ದಾಗ ಹಳಿಯ ಕೆಳಗೆ ಒಂದು ಬ್ರಿಡ್ಜ್ ಬಂತು. ಆಗಲೇ ನನಗೆ ಅರಿವಾಗಿದ್ದು, ಒಂದು ವೇಳೆ ನನ್ನ ಕಾಲು ಜಾರಿದ್ದರೆ ನಾನು ನೇರವಾಗಿ 2,500 ಅಡಿ ಆಳದ ಭೀಕರ ಕಂದಕಕ್ಕೆ ಬೀಳುತ್ತಿದ್ದೆ. ಅಷ್ಟೇ ಅಲ್ಲ, ನಮ್ಮಿಬ್ಬರಲ್ಲಿ ಯಾರ ಕಾಲು ಜಾರಿದರೂ, ಪ್ರಾಣ ಉಳಿಸಿಕೊಳ್ಳುವ ಆತುರದಲ್ಲಿ ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದುಕೊಳ್ಳುತ್ತಿದ್ದೆವು, ಇದರಿಂದ ನಾವಿಬ್ಬರೂ ಒಟ್ಟಿಗೆ ಬಿದ್ದು ಸತ್ತುಹೋಗುತ್ತಿದ್ದೆವು" ಎಂದು ಆ ಭಯಾನಕ ಕ್ಷಣವನ್ನು ಅಭಿಮನ್ಯು ನೆನಪಿಸಿಕೊಂಡಿದ್ದಾರೆ.

7 ದಿನ ನಿದ್ದೆ ಇರಲಿಲ್ಲ
ಅದೃಷ್ಟವಶಾತ್ ಶೂಟಿಂಗ್ ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಮುಗಿಯಿತು. ಆದರೆ ಆ ಭಯಾನಕ ಅನುಭವದಿಂದಾಗಿ ಅಭಿಮನ್ಯು ಅವರಿಗೆ ಸುಮಾರು 6 ರಿಂದ 7 ದಿನಗಳ ಕಾಲ ಸರಿಯಾಗಿ ನಿದ್ದೆಯೇ ಬಂದಿರಲಿಲ್ಲವಂತೆ. "ಒಂದು ವೇಳೆ ಕಾಲು ಕೊಂಚ ಜಾರಿದ್ದರೂ ಏನಾಗುತ್ತಿತ್ತು ಎಂದು ಯೋಚಿಸಿ ನಡುಕ ಹುಟ್ಟುತ್ತಿತ್ತು. ಆದರೆ, ಅಷ್ಟು ದೊಡ್ಡ ಸೂಪರ್ ಸ್ಟಾರ್ ಆಗಿದ್ದ ವಿಜಯ್ ಅವರೇ ಅಷ್ಟು ಧೈರ್ಯದಿಂದ ಭದ್ರತೆ ಇಲ್ಲದಿದ್ದರೂ ಶೂಟಿಂಗ್ ಮಾಡಲು ಸಿದ್ಧರಿರುವಾಗ, ನಾನೇಕೆ ಹೆದರಬೇಕು ಎಂದು ನನಗೆ ನಾನೇ ಧೈರ್ಯ ತಂದುಕೊಂಡೆ. ನಿಜಕ್ಕೂ ಅದು ಸಾವಿನಿಂದ ಕೂದಲೆಳೆ ಅಂತರದ ಪಾರು" ಎಂದು ಅವರು ಹೇಳಿದ್ದಾರೆ.
"ದಕ್ಷಿಣದ ಪ್ರೇಕ್ಷಕರು ನಟರನ್ನು ದೇವರಂತೆ ಪೂಜಿಸುತ್ತಾರೆ"
ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಮಾತನಾಡಿದ ಅವರು, ಬಾಲಿವುಡ್ಗಿಂತ ಸೌತ್ ಇಂಡಿಯನ್ ಸಿನಿ ಪ್ರೇಕ್ಷಕರು ತಮ್ಮ ನೆಚ್ಚಿನ ನಟರ ವಿಷಯದಲ್ಲಿ ಅತ್ಯಂತ ನಿಷ್ಠಾವಂತರು ಎಂದು ಅಭಿಪ್ರಾಯಪಟ್ಟಿದ್ದಾರೆ. "ಅಲ್ಲಿನ ಅಭಿಮಾನಿಗಳು ತಮ್ಮ ಸ್ಟಾರ್ಗಳ ಎಲ್ಲ ಸಿನಿಮಾಗಳನ್ನು ನೋಡುತ್ತಾರೆ, ಅವರನ್ನು ಗೌರವಿಸುತ್ತಾರೆ ಮತ್ತು ದೇವರಂತೆ ಪೂಜಿಸುತ್ತಾರೆ. ಇಂತಹ ಪ್ರೇಕ್ಷಕರನ್ನು ಪಡೆಯಲು ಅಲ್ಲಿನ ನಟರು ಪುಣ್ಯ ಮಾಡಿದ್ದಾರೆ" ಎಂದಿದ್ದಾರೆ. ದಕ್ಷಿಣದ ಚಿತ್ರರಂಗವು ಇಂದಿಗೂ ತನ್ನ ಮಣ್ಣಿನ ಕಥೆಗಳನ್ನು, ಭಾರತೀಯತೆಯ ಆತ್ಮವಿರುವ ಕಥೆಗಳನ್ನು ಸಿನಿಮಾಗಳ ಮೂಲಕ ಹೇಳುತ್ತಿದೆ. ಆದರೆ ಬಾಲಿವುಡ್ ಪ್ರೇಕ್ಷಕರಿಗೆ ಏನನ್ನು ತೋರಿಸಬೇಕು ಎಂಬ ಗೊಂದಲದಲ್ಲಿದೆ, ಜೊತೆಗೆ ಅಲ್ಲಿ ಪ್ರತಿಭಾವಂತ ಬರಹಗಾರರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ ಎಂದು ಅಭಿಮನ್ಯು ಸಿಂಗ್ ಬಾಲಿವುಡ್ ವಿರುದ್ಧ ಬೇಸರವೂ ಹೊರಹಾಕಿದ್ದಾರೆ.













Click it and Unblock the Notifications