ಸೇತುವೆ ಕಾಮಗಾರಿ ಅಪೂರ್ಣ; ಸ್ಥಳೀಯರಲ್ಲಿ ಆತಂಕ
ಕಾರವಾರ, ಮೇ 26: ಗ್ರಾಮದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಾರಂಭಿಸಿದ್ದ ಸೇತುವೆ ಕಾಮಗಾರಿಯೊಂದು ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯತನದಿಂದ ಕುಂಟುತ್ತಿದೆ. ಮಾತ್ರವಲ್ಲದೆ ಕಳೆದೆರಡು ವರ್ಷವೂ ಇದೇ ಅರೆ ಬರೆ ಸೇತುವೆ ಕಾಮಗಾರಿಯಿಂದ ನೆರೆ ಸಮಸ್ಯೆ ಎದುರಿಸಿದ್ದ ಜನರು ಈ ಬಾರಿಯೂ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಸರ್ಕಾರ ಸೇತುವೆಯನ್ನು ಮಂಜೂರು ಮಾಡಿದ್ದರೂ ಗುತ್ತಿಗೆದಾರ ಸೇತುವೆ ಪೂರ್ಣಗೊಳಿಸದ ಕಾರಣ ಗ್ರಾಮಸ್ಥರು ಪರದಾಡುವಂತಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕತಗಾಲ್ ನ ಬೊಗ್ರಿಬೈಲ್ ಗ್ರಾಮದ ಜನರ ಸಂಕಷ್ಟ. ಈ ಗ್ರಾಮದ ಜನರು ನದಿ ದಾಟಲು ದೋಣಿಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಇದ್ದ ಹಿನ್ನೆಲೆ ಸರ್ಕಾರ ಗ್ರಾಮದಲ್ಲಿ ಹರಿಯುವ ಅಘನಾಶಿನಿ ನದಿಗೆ ಅಡ್ಡಲಾಗಿ 19.18 ಕೋಟಿ ವೆಚ್ಛದಲ್ಲಿ ಶಾಶ್ವತ ಸೇತುವೆಯನ್ನು ಮಂಜೂರು ಮಾಡಿತ್ತು. ಆದರೆ ಸೇತುವೆ ಕಾಮಗಾರಿ ಪ್ರಾರಂಭವಾಗಿ ನಾಲ್ಕು ವರ್ಷಗಳೇ ಕಳೆದರೂ ಕೂಡ ಇದುವರೆಗೂ ಪೂರ್ಣಗೊಂಡಿಲ್ಲ.
ಗ್ರಾಮಸ್ಥರಿಂದ ಅಡಿಕೆ ಮರದ ಏಣಿ ನಿರ್ಮಾಣ
ಸೇತುವೆ ಕಾಮಗಾರಿ ಗುತ್ತಿಗೆ ಪಡೆದಿದ್ದ ಡಿಆರ್ಎನ್ ಇನ್ಫ್ರಾಸ್ಟ್ರಕ್ಚರ್ ಕಂಪನಿ 2018ರ ಮಾರ್ಚ್ 19 ರಂದು ಸೇತುವೆ ಕಾಮಗಾರಿ ಪ್ರಾರಂಭಿಸಿದೆ. ಸೇತುವೆಯೂ ಬಹುತೇಕ ಪೂರ್ಣಗೊಂಡಿದೆ. ಆದರೆ ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆಯನ್ನೇ ನಿರ್ಮಿಸದೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಹೀಗ ಕಾಮಗಾರಿ ಸ್ಥಗಿತಗೊಳಿಸಿ ವರ್ಷಗಳೇ ಕಳೆದಿದೆ. ಈ ಹಿನ್ನೆಲೆ ನದಿ ದಾಟಲು ಗ್ರಾಮಸ್ಥರೇ ಅಡಿಕೆ ಮರದ ಏಣಿ ಮಾಡಿ ಸೇತುವೆಯ ಎರಡೂ ಬದಿಗೆ ಸಂಪರ್ಕ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಅಲ್ಲದೆ ಸೇತುವೆ ನಿರ್ಮಾಣ ವೇಳೆ ನದಿಗೆ ಅಡ್ಡ ಹಾಕಲಾಗಿದ್ದ ಕಲ್ಲು ಮಣ್ಣಿನಿಂದಾಗಿ ಕಳೆದ ಎರಡು ವರ್ಷವೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆರೆ ಕಾಣಿಸಿಕೊಂಡು ಈ ಭಾಗದ ಜನಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಇದೀಗ ಮಳೆಗಾಲ ಪ್ರಾರಂಭವಾಗಿದ್ದು ಮತ್ತೆ ನೆರೆ ಆತಂಕ ಎದುರಾಗಿದೆ. ಅಲ್ಲದೆ ಈ ರೀತಿ ಅರೆಬರೆ ಸೇತುವೆ ಕಾಮಗಾರಿಯಿಂದ ಗ್ರಾಮಸ್ಥರು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ಜಯಂತ್ ನಾಯ್ಕ.
ಕಾಮಗಾರಿ ಮುಗಿಸಲು ಗ್ರಾಮಸ್ಥರ ಆಗ್ರಹ
ಇನ್ನು ಕಲ್ಲಬ್ಬೆ ಪಂಚಾಯತ್ ವ್ಯಾಪ್ತಿಯ ಬೊಗ್ರಿಬೈಲ್ ಹಾಗೂ ಉಪ್ಪಿನಪಟ್ಟಣ ಗ್ರಾಮದ ನಡುವೆ ಹರಿಯುವ ಅಘನಾಶಿನಿ ನದಿ ದಾಟಲು ಹಿಂದಿನಿಂದಲೂ ಗ್ರಾಮಸ್ಥರು ದೋಣಿ ಬಳಸುತ್ತಿದ್ದರು. ಆದರೆ ಮಳೆಗಾಲದಲ್ಲಿ ನದಿ ಉಕ್ಕಿಹರಿಯುವುದರಿಂದ ಓಡಾಡಲು ಅನುಕೂಲವಾಗಲಿ ಎಂದು ಸೇತುವೆಗೆ ಬೇಡಿಕೆಯಿಡಲಾಗಿತ್ತು. ನಿರೀಕ್ಷೆಯ ಪ್ರಕಾರ ಇಷ್ಟೋತ್ತಿಗಾಗಲೇ ಸೇತುವೆಯ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಬೇಕಿತು. ನಾನಾ ಕಾರಣಗಳಿಂದ ಕಾಮಗಾರಿ ಕುಂಟುತ್ತ ಸಾಗಿದೆ. ಅಂತೂ ಇಷ್ಟು ವರ್ಷಗಳ ನಂತರ ಮಳೆಗಾಲಕ್ಕೂ ಪೂರ್ವದಲ್ಲಿ ಸೇತುವೆಯು ಅರೆಬರೆಯಾಗಿ ಹಂತಕ್ಕೆ ಬಂದು ನಿಂತಿದೆ. ಮಳೆಗಾಲದ ಒಳಗಾಗಿ ನಿರ್ಮಾಣ ಪೂರ್ನಗೊಳ್ಳುತ್ತಿದೆ ಎಂಬ ಮಾತು ಹುಸಿಯಾಗಿದೆ.
ಗುತ್ತಿಗೆದಾರರ ವಿರುದ್ಧ ಹಿಡಿಶಾಪ
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕತಗಾಲ್ ನ ಬೊಗ್ರಿಬೈಲ್ ಸಂಪರ್ಕ ಸೇತುವೆ ಕಾಮಗಾರಿ ಕಳೆದ ನಾಲ್ಕು ವರ್ಷದಿಂದ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಕೋಟ್ಯಾಂತರ ರೂ ವೆಚ್ಚದ ರಸ್ತೆ ಹಾಗೂ ಸೇತುವೆ ಕಾಮಗಾರಿಯೂ ಅಪೂರ್ಣಗೊಂಡಿದ್ದುಮ ಗ್ರಾಮಸ್ಥರು ಸಂಬಂಧಿಸಿದ ಇಲಾಖೆ ಹಾಗೂ ಗುತ್ತಿಗೆದಾರರ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ಗುತ್ತಿಗೆದಾರರು, ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸದ ಪರಿಣಾಮ ಸೇತುವೆ ದುಸ್ಥಿತಿ ಹಾಗೂ ಮಾತ್ರವಲ್ಲದೆ ಕಳೆದೆರಡು ವರ್ಷವೂ ಇದೇ ಅರೆ ಬರೆ ಸೇತುವೆ ಕಾಮಗಾರಿಯಿಂದ ನೆರೆ ಸಮಸ್ಯೆ ಎದುರಿಸಿದ್ದ ಜನರು ಈ ಬಾರಿಯೂ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಈ ಹಿಂದೆ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ ಶಾಸಕರು ಕಾರ್ಯಕ್ರಮವೊಂದರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಬಾಕಿ ಉಳಿಸಿಕೊಂಡಾಗ ಮಾತ್ರ ಜನಕ್ಕೆ ನಾವು ನೆನಪಿರುತ್ತೇವೆ ಎಂದು ಹೇಳಿರುವ ವೀಡಿಯೋವೊಂದು ಇದೀಗ ವೈರಲ್ ಆಗಿದ್ದು ಜನರ ನಡುವೆ ಚರ್ಚೆಗೆ ಕಾರಣವಾಗಿದೆ.
ಬೊಗ್ರಿಬೈಲ್ ಸಂಪರ್ಕ ಸೇತುವೆ
ಒಟ್ಟಾರೆ ನಾಲ್ಕು ವರ್ಷದಲ್ಲಿ ನಿರ್ಮಾಣವಾಗಿ ವಾಹನ ಸವಾರರ ಉಪಯೋಗಕ್ಕೆ ಬರಬೇಕಿದ್ದ ಸೇತುವೆ ಕಳೆದ ನಾಲ್ಕು ವರ್ಷದಿಂದ ಕಾಮಗಾರಿ ನಡೆಯುತ್ತಿಲೆ ಇದೆ. ನಾಲ್ಕು ವರ್ಷ ಕಳೆದರೂ ಅರ್ಧ ಕಾಮಗಾರಿ ಪೂರ್ಣ ಆಗದಿರುವುದು ದುರಂತ. ಈ ಹಿನ್ನೆಲೆಯಲ್ಲಿ ಓಡಾಟ ನಡೆಸುವ ಜನ ಅಯ್ಯೋ ಈ ಸೇತುವೆ ಕಾಮಗಾರಿ ಯಾವಾಗ ಮುಗಿಯತ್ತೋ ಅಂತಾ ಆಡಿಕೊಳ್ಳುವಂತಾಗಿದೆ. ಕಾಮಗಾರಿ ಆಮೆ ವೇಗದಲ್ಲೇ ನಡೆಸಿಕೊಂಡು ಬರುತ್ತಿದೆ. ಆದರೆ ಇದೀಗ ಅಪೂರ್ಣಗೊಂಡು ನಿಂತಿರುವ ಸೇತುವೆ ಮೇಲೆ ಮಳೆಗಾಲದಲ್ಲಿ ಓಡಾಟ ಸಾಧ್ಯವಿಲ್ಲದಂತಾಗಿದೆ. ಆದ್ದರಿಂದ ಆದಷ್ಟು ಶೀಘ್ರದಲ್ಲಿ ಸೇತುವೆಗೆ ಸಂಪರ್ಕ ರಸ್ತೆಯನ್ನು ನಿರ್ಮಿಸಿಕೊಡಿ ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
Recommended Video