ಸಿಎಂ ಭೇಟಿ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಉತ್ತರ ಕನ್ನಡಕ್ಕೆ ಭೇಟಿ
ಕಾರವಾರ, ಜುಲೈ 31: ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದು ಹೋದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಸಹ ಎಚ್ಚೆತ್ತುಕೊಂಡಿದ್ದು, ನೆರೆ ಪೀಡಿತ ಪ್ರದೇಶಗಳ ವೀಕ್ಷಣೆಗೆ ಆಗಸ್ಟ್ 2ರಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ. ಈ ಮೂಲಕ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಜುಲೈ 23ರಂದು ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ನದಿಗಳು ಉಕ್ಕಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದರಲ್ಲೂ ಕಾಳಿ, ಗಂಗಾವಳಿ ನದಿ ಉಕ್ಕಿ ಕಾರವಾರ ಹಾಗೂ ಅಂಕೋಲಾ, ಯಲ್ಲಾಪುರ ತಾಲೂಕಿನ ಹಲವು ಪ್ರದೇಶದಲ್ಲಿ ಹಾನಿ ಸಂಭವಿಸಿದ್ದು, ಇನ್ನೊಂದೆಡೆ ಗುಡ್ಡ ಕುಸಿತದಿಂದ ಯಲ್ಲಾಪುರ ತಾಲೂಕಿನ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು.
ಹಾನಿಗೊಳಗಾದ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ವಿವಿಧ ಪ್ರದೇಶಕ್ಕೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿದ್ದು, ಇನ್ನೊಂದೆಡೆ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಾರ್ಯ ಚುರುಕಾಗಿ ಮಾಡಲು ಸೂಚನೆಯನ್ನ ಸಹ ನೀಡಿ ತೆರಳಿದ್ದಾರೆ. ಇದೀಗ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಜಿಲ್ಲೆಗೆ ಆಗಮಿಸಿ ನೆರೆ ಹಾನಿ ವೀಕ್ಷಣೆ ಮಾಡಿ ಜನರಿಗೆ ಸಾಂತ್ವನ ಹೇಳುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಹುಬ್ಬಳ್ಳಿ ಮಾರ್ಗವಾಗಿ ಕಾರವಾರಕ್ಕೆ
ಆಗಸ್ಟ್ 1ರಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುವ ಸಿದ್ದರಾಮಯ್ಯ ಹುಬ್ಬಳ್ಳಿ ಮಾರ್ಗವಾಗಿ ಕಾರವಾರಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಕಾಳಿ ನದಿ ಪ್ರವಾಹದಿಂದ ಹಾನಿಗೊಳಗಾದ ಕಾರವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಆಗಸ್ಟ್ 2ರ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೇ ಕೆಪಿಸಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆಯಲಿದ್ದು, ಇದರೊಟ್ಟಿಗೆ ಸಾರ್ವಜನಿಕರಿಂದ ಅಹವಾಲು ಸಹ ಸ್ವೀಕರಿಸಲಿದ್ದಾರೆ.

ಹಾನಿಗೊಳಗಾದ ಪ್ರದೇಶದ ವೀಕ್ಷಣೆ
"ಇದಾದ ನಂತರ ಮಧ್ಯಾಹ್ನ ಅಂಕೋಲಾ ತಾಲೂಕಿಗೆ ಭೇಟಿ ನೀಡಲಿರುವ ಸಿದ್ದರಾಮಯ್ಯ, ತಾಲೂಕಿನ ವಾಸರಕುದ್ರಿಗಿ, ಶಿರೂರು ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶದ ವೀಕ್ಷಣೆ ನಡೆಸಿ ನಂತರ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಸಹ ಪಡೆಯಲಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂಕೋಲಾ ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಅದೇ ಸಮುದಾಯ ಭವನದಲ್ಲಿ ಸಭೆ ನಡೆಸಿ ನೆರೆಯಿಂದ ಹಾನಿಗೊಳಗಾದವರಿಂದ ಅಹವಾಲನ್ನು ಸ್ವೀಕರಿಸಲಿದ್ದಾರೆ. ಇದಾದ ನಂತರ ಯಲ್ಲಾಪುರ ತಾಲೂಕಿನಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ,'' ಎಂದು ಮಾಜಿ ಶಾಸಕ ಸತೀಶ್ ಸೈಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೆರೆ ಪರಿಸ್ಥಿತಿ ನಿರ್ಮಾಣವಾಗಿ ಸಾಕಷ್ಟು ಹಾನಿ
ಕಳೆದ 2019ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ನೆರೆ ಪರಿಸ್ಥಿತಿ ನಿರ್ಮಾಣವಾಗಿ ಸಾಕಷ್ಟು ಹಾನಿಯಾಗಿದ್ದರೂ ಅಂದಿನ ಸಿಎಂ ಆಗಮಿಸಿರಲಿಲ್ಲ. ಆದರೆ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಮಾರನೇ ದಿನವೇ ಜಿಲ್ಲೆಯತ್ತ ಆಗಮಿಸಿ ಜಿಲ್ಲೆಯಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿ ಹೋಗಿದ್ದು, ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನಲಾಗಿತ್ತು. ಇದರ ನಡುವೆ ಕಾಂಗ್ರೆಸ್ ಸಹ ಎಚ್ಚೆತ್ತುಕೊಂಡಿದ್ದು, ಸಿದ್ದರಾಮಯ್ಯನವರನ್ನು ಕರೆಸಿ ಜನರಿಂದ ಅಹವಾಲು ಸ್ವೀಕರಿಸಿಕೊಳ್ಳುವ ಮೂಲಕ ನೆರೆಯಿಂದ ಹಾನಿಗೊಳಗಾದವರ ಜೊತೆ ಕಾಂಗ್ರೆಸ್ನವರು ಇದ್ದಾರೆ ಎನ್ನುವ ಸಂದೇಶ ಕೊಡಲು ಮುಂದಾಗಿದೆ ಎನ್ನಲಾಗಿದೆ.
Recommended Video

ಸಿಎಂ ಭೇಟಿ ನೀಡದ ಪ್ರದೇಶಗಳಿಗೆ ಮಾಜಿ ಸಿಎಂ
ಕದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ಕಾಳಿ ನದಿ ನೀರು ಹೊರಬಿಟ್ಟು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಳಿ ನದಿ ಪಾತ್ರದ ಗ್ರಾಮಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿಲ್ಲ ಎನ್ನುವ ವಿರೋಧ ಇದೀಗ ಕೇಳಿ ಬಂದಿದೆ. ಕದ್ರಾ ಜಲಾಶಯ ಪಾತ್ರದ ಹಲವಾರು ಗ್ರಾಮಗಳು ಮುಳುಗಡೆಯಾಗಿ ಸಾಕಷ್ಟು ಹಾನಿ ಸಂಭವಿಸಿತ್ತು.
ಇನ್ನು ಕೆಪಿಸಿ ಅಧಿಕಾರಿಗಳ ನಿರ್ಲಕ್ಷದಿಂದಲೇ ಪದೇ ಪದೇ ಪ್ರವಾಹ ಎದುರಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಇನ್ನು ಸಿಎಂ ಅಂಕೋಲಾಕ್ಕೆ ಆಗಮಿಸಿದ್ದು, ಕಾರವಾರಕ್ಕೆ ಆಗಮಿಸಿ ಕಾಳಿ ನದಿ ಪ್ರವಾಹದಿಂದ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿದ್ದರೆ ಇದಕ್ಕೆ ಶಾಶ್ವತ ಪರಿಹಾರವಾದರೂ ಸಿಗುತ್ತಿತ್ತು. ಆದರೆ ಸಿಎಂ ಆಗಮಿಸದೇ ನಿರ್ಲಕ್ಷ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಿಎಂ ಆಗಮಿಸದೇ ಇರುವುದಕ್ಕೆ ವಿರೋಧ ಸಹ ಕೇಳಿ ಬಂದಿದೆ.
ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಕದ್ರಾ ಜಲಾಶಯದಿಂದ ನೀರು ಹೊರಬಿಟ್ಟಿದ್ದರಿಂದ ಹಾನಿಗೊಳಗಾದ ಹಲವು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, ಇದಲ್ಲದೇ ಕೆಪಿಸಿ, ಕೈಗಾ ಅಧಿಕಾರಿಗಳ ಜೊತೆ ಸಹ ಸಭೆ ನಡೆಸುವ ಮೂಲಕ ಸಿಎಂ ಆಗಮಿಸದೇ ಸೃಷ್ಟಿಯಾಗಿರುವ ವಿರೋಧದ ಲಾಭವನ್ನು ಕಾಂಗ್ರೆಸ್ ಪಡೆಯಲು ಮುಂದಾಗಿದೆ ಎನ್ನಲಾಗಿದೆ.












Click it and Unblock the Notifications