ಕರ್ನಾಟಕ ಬಂದ್ಗೆ ಉತ್ತರ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ: ಜೋರಾದ ಮಳೆ ಆರ್ಭಟ
ಕಾರವಾರ, ಸೆಪ್ಟೆಂಬರ್ 29: ಕಾವೇರಿ ನೀರಿಗಾಗಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ತಕ್ತವಾಗಿದೆ.
ಜಿಲ್ಲಾ ಕೇಂದ್ರ ಕಾರವಾರದಲ್ಲಿ ಬೆಳಿಗ್ಗೆ ಎಂದಿನಂತೆ ಬಸ್ ಸಂಚಾರ ಆರಂಭಗೊಂಡಿದೆ. ಗ್ರಾಮೀಣ, ಜಿಲ್ಲೆ, ಅಂತರಜಿಲ್ಲೆಗಳಿಗೂ ಬಸ್ ಸಂಚಾರ ಆರಂಭವಾಗಿದ್ದು ಬಂದ್ ಇರುವ ಕಡೆ ಮಾತ್ರ ಬಸ್ ಸಂಚಾರ ನಿಲ್ಲಿಸಲಾಗಿದೆ.
ಇನ್ನು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಕೂಡ ನಿಧಾನವಾಗಿ ತೆರೆದುಕೊಳ್ಳುತ್ತಿವೆ.ಕೆಲ ಹೋಟೆಲ್ಗಳನ್ನು ಮುಂಜಾನೆ ಎಂದಿನಂತೆ ತೆರದಿದ್ದರೇ, ಇನ್ನು ಕೆಲವು ಹೊಟೆಲಲ್ಗಳನ್ನು ಕಾದು ನೋಡಿ ತೆರೆಯುವುದಕ್ಕೆ ಮುಂದಾಗಿದ್ದಾರೆ. ಇನ್ನು ನಗರದಲ್ಲಿ ಜನರ ಓಡಾಟವೂ ಕೂಡ ಎಂದಿನಂತೆ ಆರಂಭವಾಗಿದೆ. ಕಾರವಾರದಲ್ಲಿ ಯಾವುದೇ ರಿತಿಯ ಬಂದ್ ವಾತಾವರಣ ಕಂಡುಬಂದಿಲ್ಲ. ಆಟೋ, ಟೆಂಪೋ, ಟ್ಯಾಕ್ಸಿ ಸಂಚಾರ ಕೂಡ ಓಡಾಟ ಆರಂಭಿಸಲಾಗಿದೆ.

ಕಾವೇರಿ ನೀರಿಗಾಗಿ ಕೊಟ್ಟಿರುವ ಕರ್ನಾಟಕ ಬಂದ್ಗೆ ಕರೆಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಹಿನ್ನೆಲೆಯಲ್ಲಿ ಜಿಲ್ಲಾ ಶಾಲಾ ಕಾಲೇಜುಗಳು ರಜೆ ನೀಡಿಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳು ಮುಂಜಾನೆಯಿಂದಲೇ ಶಾಲಾ ಕಾಲೇಜುಗಳ ಕಡೆ ತೆರಳುತ್ತಿದ್ದಾರೆ. ಇನ್ನು ಬಂದ್ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

ಇನ್ನು ಜಿಲ್ಲೆಯ ಇತರೆ ತಾಲೂಕಿಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಎಲ್ಲ ತಾಲೂಕುಗಳಲ್ಲಿಯೂ ಎಂದಿನಂತೆ ಸಾರಿಗೆ ಸಂಚಾರ ಆರಂಭಗೊಂಡಿದ್ದು ಅಂಗಡಿ ಮುಂಗಟ್ಟುಗಳನ್ನು ತೆರೆಯುತ್ತಿರುವ ಮಾಹಿತಿ ಲಭ್ಯವಾಗಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಸುರಿಯಲಾರಂಭಿಸಿದೆ. ಮುಂಜಾನೆಯಿಂದಲೇ ಗಾಳಿ ಸಹಿತ ಭಾರಿ ಮಳೆ ಆರ್ಭಟಿಸುತ್ತಿದ್ದು ಕೆಲ ತಗ್ಗು ಪ್ರದೇಶಗಳು ಜಲಾವೃತಗೊಳ್ಳತೊಡಗಿದೆ. ಕಳೆದ ನಾಲ್ಕೈದು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಸುರಿಯುತ್ತಿದ್ದ ಮಳೆ ಇಂದು ಮುಂಜಾನೆಯಿಂದಲೇ ಜೋರಾಗಿದೆ. ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ತಾಲೂಕುಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಕಾವೇರಿ ಹೋರಾಟಕ್ಕೆ ಮಳೆ ಅಡ್ಡಿಯಾಗಿದೆ.












Click it and Unblock the Notifications