ಶಿರಸಿ ಮಾರಿಕಾಂಬ ಜಾತ್ರೆ ಘೋಷಣೆ ಬೆನ್ನಲ್ಲೇ ದೇಗುಲ ಅಧ್ಯಕ್ಷರ ಮನೆ ಮುಂದೆ ಮಾಟ
ಕಾರವಾರ, ಜನವರಿ 03: ಈಚೆಗಷ್ಟೇ ಶಿರಸಿ ಮಾರಿಕಾಂಬ ಜಾತ್ರೆಯ ದಿನಾಂಕ ಘೋಷಣೆಯಾಗಿದ್ದು, ಈ ಬೆನ್ನಲ್ಲೇ ಶಿರಸಿ ದೇಗುಲದ ಅಧ್ಯಕ್ಷ ವೆಂಕಟೇಶ್ ನಾಯ್ಕ ಅವರ ಮನೆಯ ಮುಂದೆ ಮಾಟ ಮಾಡಲಾಗಿದೆ.
ಬನವಾಸಿ ರಸ್ತೆಯ ರಾಮನಬೈಲು ಕ್ರಾಸ್ ಬಳಿ ಇರುವ ಅವರ ಮನೆ ಮುಂದೆ ಸ್ತಂಭನ ಪದ್ಧತಿ ಮುಖೇನ ಮಾಟ ಮಾಡಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ. ಇಂದು ಬೆಳಗಿನ ಜಾವ ವೆಂಕಟೇಶ್ ಅವರು ಹೊರಗೆ ಬಂದಾಗ ಮಾಟ ಮಾಡಿರುವುದು ಕಾಣಿಸಿದೆ. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಳೆ ಎಲೆ ಮೇಲೆ ಕುಂಬಳಕಾಯಿ, ನಿಂಬೆಹಣ್ಣು, ಮೊಳೆ, ಹಿಟ್ಟಿನ ಉಂಡೆ ಮೂಲಕ ಮಾಟ ಮಾಡಲಾಗಿದೆ. ಈ ಪದ್ಧತಿಯನ್ನು ತಾಂತ್ರಿಕ ಪರಿಣತರು ಸ್ತಂಭನ ಪದ್ದತಿ ಎನ್ನುತ್ತಾರೆ. ಈ ರೀತಿ ಮಾಡಿದಾಗ ಮಾಟ ಮಾಡಲ್ಪಟ್ಟ ವ್ಯಕ್ತಿ ಕ್ರಿಯಾಶೀಲತೆ ಇಲ್ಲದೇ ಬಳಲುತ್ತಾರೆ. ಆರೋಗ್ಯ ಹದಗೆಡುತ್ತದೆ, ಬುದ್ಧಿ, ಕ್ರಿಯಾಶೀಲತೆ ಕಳೆದುಹೋಗುತ್ತದೆ ಎನ್ನಲಾಗುತ್ತದೆ.

ದೂರಿನ ಮೇರೆಗೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಸಿ.ಸಿ ಕ್ಯಾಮೆರಾ ಇರಲಿಲ್ಲವಾದ್ದರಿಂದ ಸುತ್ತಮುತ್ತಲ ಮನೆಗಳಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಲಾಗುತ್ತಿದೆ. ಇದುವರೆಗೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ಹೀಗೆ ಮಾಟ ಮಾಡುತ್ತಿರುವುದು ಇದೇ ಮೊದಲಲ್ಲ. ಎಂಟು ತಿಂಗಳ ಹಿಂದೆಯೂ ದೇವಸ್ಥಾನದಲ್ಲಿಯೇ ಮಾಟ ಮಾಡಲಾಗಿತ್ತು. ದೇವಸ್ಥಾನದ ಕಚೇರಿಯಲ್ಲಿ ಅವರು ಕೂರುವ ಸ್ಥಳದಲ್ಲಿ ತಾಮ್ರದ ತಗಡನ್ನು ಇಟ್ಟು ಹೋಗಿದ್ದರು. ಎರಡು ತಿಂಗಳ ಹಿಂದೆ ಐದು ನಿಂಬೆ ಹಣ್ಣು ಇಟ್ಟುಹೋಗಿದ್ದು, ಅವರ ಮನೆ ಪ್ರವೇಶದ ಸಂದರ್ಭದಲ್ಲಿ ಕೂಡ ಶಾಮಿಯಾನದ ಒಳಗೆ ಸತ್ತ ನಾಯಿಗೆ ಮಾಟ ಮಾಡಿ ತಂದು ಹಾಕಿದ್ದರು ಎಂದು ವೆಂಕಟೇಶ್ ನಾಯ್ಕ ತಿಳಿಸಿದ್ದಾರೆ.












Click it and Unblock the Notifications