ಕಾರವಾರ; ಕಡಲತೀರದ ಕಾಮಗಾರಿ ಬಗ್ಗೆ ಶಾಸಕಿ ಯು-ಟರ್ನ್!

ಕಾರವಾರ, ಡಿಸೆಂಬರ್ 29: ಕಾರವಾರ ನಗರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ನಿರ್ಮಾಣ ಹಂತದಲ್ಲಿರುವ ಆವರಣ ಗೋಡೆ ವಿವಾದಕ್ಕೆ ಕಾರಣವಾಗಿದೆ. ಈ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಜೊತೆ ಶಂಕು ಸ್ಥಾಪನೆ ಮಾಡಿದ್ದ ಶಾಸಕಿ ರೂಪಾಲಿ ನಾಯ್ಕ ಈಗ ಯೂ- ಟರ್ನ್ ಹೊಡೆದಿದ್ದಾರೆ.

ಸೋಮವಾರ ನಡೆದ ಕಾರವಾರ ನಗರಸಭೆಯ ಮೊದಲ ಸಾಮಾನ್ಯ ಸಭೆಯಲ್ಲಿ ಶಾಸಕಿ ತಾವೇ ಶಂಕು ಸ್ಥಾಪನೆ ಮಾಡಿದ್ದ ಕಾಮಗಾರಿಗೆ ತಾವೇ ವಿರೋಧ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಾಮಗಾರಿ ಶಂಕು ಸ್ಥಾಪನೆ ವೇಳೆ ಸಚಿವ ಶಿವರಾಮ್ ಹೆಬ್ಬಾರ್, ನಗರಸಭೆ ಅಧ್ಯಕ್ಷ ಡಾ. ನಿತೀನ್ ಪಿಕಳೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನವನದಿಂದ ಫುಡ್ ಕೋರ್ಟ್ ತನಕ ಆವರಣ ಗೋಡೆ, ಮುಖ್ಯ ದ್ವಾರದ ಕಮಾನು ನಿರ್ಮಾಣ ಹಾಗೂ ಟ್ಯಾಗೋರ್ ಪುತ್ಥಳಿ ಸ್ಥಾಪಿಸುವ ಸುಮಾರು 60 ಲಕ್ಷ ವೆಚ್ಚದ ಕಾಮಗಾರಿಗೆ ನವೆಂಬರ್ 24ರಂದು ಶಂಕು ಸ್ಥಾಪನೆ ಮಾಡಲಾಗಿತ್ತು.

BJP MLA Roopali Naik Takes Uturn

ಜನಪ್ರತಿನಿಧಿಗಳಿಂದ ಚಾಲನೆ ಸಿಗುತ್ತಿದ್ದಂತೆಯೇ ಗುತ್ತಿಗೆ ಪಡೆದಿರುವ ನಿರ್ಮಿತಿ ಕೇಂದ್ರದಿಂದ ಕಡಲತೀರದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಈಗಾಗಲೇ ಕಮಾನು ಹಾಗೂ ಆವರಣ ಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಈ ನಡುವೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಆವರಣ ಗೋಡೆ ನಿರ್ಮಾಣದಿಂದ ಕಡಲತೀರದ ಸೌಂದರ್ಯಕ್ಕೆ ಧಕ್ಕೆ ಉಂಟಾಗಲಿದ್ದು, ಕಡಲತೀರದ ಸೌಂದರ್ಯಕ್ಕೆ ಹಾನಿಯಾಗದಂತೆ ಯಥಾಸ್ಥಿತಿಯಲ್ಲಿ ಇರಲು ಬಿಡಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು.

ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಪಾಲ್ಗೊಂಡಿದ್ದರು. ಸಭೆಯಲ್ಲಿ ಕಡಲತೀರದಲ್ಲಿ ನಿರ್ಮಿಸುತ್ತಿರುವ ಕಾಂಪೌಂಡ್ ಕಾಮಗಾರಿಯ ಬಗ್ಗೆ ಶಾಸಕಿ ನಿರ್ಮಿತಿ ಕೇಂದ್ರದ ಅಧಿಕಾರಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

BJP MLA Roopali Naik Takes Uturn

"ನಾನು ರವೀಂದ್ರನಾಥ್ ಟ್ಯಾಗೋರ್ ಪುತ್ಥಳಿ ಸ್ಥಾಪನೆಯೊಂದೇ ಎಂದು ಅದರ ಶಂಕು ಸ್ಥಾಪನೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಆದರೆ, ಆವರಣ ಗೋಡೆ ನಿರ್ಮಾಣ ಕಾಮಗಾರಿಯ ಬಗ್ಗೆ ನನಗೆ ಮಾಹಿತಿಯೇ ನೀಡಿರಲಿಲ್ಲ. ಕಡಲ ತೀರಕ್ಕೆ ಗೋಡೆ ಯಾತಕ್ಕಾಗಿ ಬೇಕಿದೆ? ಇಷ್ಟು ವರ್ಷದಿಂದ ತಡೆ ಗೋಡೆ ಇರಲಿಲ್ಲ. ಮೊದಲೇ ಮೇಲ್ಸೇತುವೆ ಮಾಡಿ ಕಡಲತೀರದ ಸೌಂದರ್ಯಕ್ಕೆ ಹಾನಿಯಾಗುತ್ತಿದೆ. ಈಗ ಮತ್ತೆ ಆವರಣ ಗೋಡೆ ಬೇಡ" ಎಂದು ಹೇಳಿದ್ದಾರೆ.

"ತಕ್ಷಣ ಗೋಡೆ ನಿರ್ಮಾಣ ಕಾಮಗಾರಿ ನಿಲ್ಲಿಸಿ. ಯಾರು ಈ ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ? ಯಾರಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ಮಾಡಿದರೆ ಹೀಗೆ ಆಗುವುದು. ಶಾಸಕರ ಗಮನಕ್ಕೆ ತರದೇ ಕಾಮಗಾರಿ ಮಾಡಿದ್ದೇವೆ ಎಂದು ಪತ್ರಿಕಾ ಹೇಳಿಕೆ ನೀಡಿ" ಎಂದು ಅಧಿಕಾರಿಗೆ ಸೂಚಿಸಿದ್ದಾರೆ.

ಫೇಸ್‌ಬುಕ್‌ ಪೋಸ್ಟ್; ನವೆಂಬರ್ 24ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸಮ್ಮುಖದಲ್ಲಿ ನಡೆದ ಆವರಣ ಗೋಡೆ ಹಾಗೂ ಪ್ರವೇಶ ದ್ವಾರದ ಶಂಕುಸ್ಥಾಪನೆ ಕಾಮಗಾರಿಯ ಕಾರ್ಯಕ್ರಮದ ಬಗ್ಗೆ ಶಾಸಕಿ ರೂಪಾಲಿ ನಾಯ್ಕ ಅವರ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಕೂಡ ಹಾಕಲಾಗಿದೆ.

"ಕಡಲತೀರದಲ್ಲಿ ಮಹಾದ್ವಾರ ನಿರ್ಮಾಣ ಹಾಗೂ ಮಹಾದ್ವಾರದಿಂದ ವಾರ್‌ಶಿಪ್ ಮ್ಯೂಸಿಯಂ ತನಕ ಆವರಣಗೋಡೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು" ಎಂದು ಬರೆಯಲಾಗಿದೆ. ಅಲ್ಲದೇ, ಶಂಕುಸ್ಥಾಪನೆಯ ದಿನ ಬ್ಯಾನರ್‌ವೊಂದನ್ನು ಕೂಡ ಸ್ಥಳದಲ್ಲಿ ಅಳವಡಿಸಲಾಗಿತ್ತು. ಅದರಲ್ಲಿ ಕಾಮಗಾರಿಯ ಸಂಪೂರ್ಣ ವಿವರಗಳಿತ್ತು. ಅದನ್ನು ಕೂಡ ಶಾಸಕಿ ಗಮನಿಸಿರಲಿಲ್ಲವೇ? ಎಂಬ ಪ್ರಶ್ನೆ ಎದ್ದಿದೆ.

ಗೋಡೆ ಎತ್ತರ ಕಡಿಮೆ; ಕಡಲ ತೀರದಲ್ಲಿ ನಿರ್ಮಿಸುತ್ತಿರುವ ಆವರಣ ಗೋಡೆ ಕಾಮಗಾರಿಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರದವರು ಸೋಮವಾರ ಗೋಡೆಯ ಎತ್ತರ ಕಡಿಮೆ ಮಾಡಲು ಮುಂದಾಗಿದ್ದಾರೆ. ಮಕ್ಕಳ ಉದ್ಯಾನವನದಿಂದ ಪ್ರವೇಶ ದ್ವಾರದವರೆಗೆ ಸುಮಾರು ನಾಲ್ಕು ಅಡಿ ಎತ್ತರದಲ್ಲಿ ಗೋಡೆ ನಿರ್ಮಿಸಲಾಗಿತ್ತು. ಶಾಸಕಿ ರೂಪಾಲಿ ನಾಯ್ಕ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಟ್ಟಿದ್ದ ಕಲ್ಲುಗಳನ್ನು ಕೆಡವಿ, ಗೋಡೆಯ ಎತ್ತರವನ್ನು ಕಡಿಮೆ ಮಾಡುವ ಕಾರ್ಯ ಮಾಡಲಾಗಿದೆ.

ನಿರ್ಮಿತಿ ಕೇಂದ್ರದ ಅಧಿಕಾರಿ ಈ ಕುರಿತು ಮಾತನಾಡಿದ್ದು, "ನಾವು ಉಸ್ತುವಾರಿ ಸಚಿವರ ಗಮನಕ್ಕೆ ತಂದೇ ಕಾಮಗಾರಿಯ ಶಂಕುಸ್ಥಾಪನೆ ಮಾಡಿಸಿದ್ದೇವೆ. ಶಾಸಕರು ಈಗ ವಿರೋಧ ವ್ಯಕ್ತಪಡಿಸಿದ್ದು, ಅವರಿಗೆ ಈ ಗೋಡೆ ಕಾಮಗಾರಿಯ ಬಗ್ಗೆ ಗೊತ್ತಿದೆಯೋ, ಇಲ್ಲವೋ ನನಗೂ ಗೊತ್ತಿಲ್ಲ. ಈಗ ಗೋಡೆಯ ಎತ್ತರ ಕಡಿಮೆ ಮಾಡಿ ಅದರ ಮೇಲೆ ಗ್ರಿಲ್ಸ್ ಹಾಕುತ್ತೇವೆ. ಶಾಸಕರ ಅನುಮತಿ ಪಡೆದೇ ಕಾಮಗಾರಿ ಮುಂದುವರೆಸುತ್ತೇವೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+