ಭಟ್ಕಳ: ಮಾರುಕೇರಿ, ಶಿರಾಲಿ ಗ್ರಾಮ ಪಂಚಾಯತಿಗಳಲ್ಲಿ ಭ್ರಷ್ಟಾಚಾರ, ಆರೋಪ
ಕಾರವಾರ, ಡಿಸೆಂಬರ್, 09: ಭಟ್ಕಳ ತಾಲೂಕಿನ ಮಾರುಕೇರಿ ಹಾಗೂ ಶಿರಾಲಿ ಗ್ರಾಮ ಪಂಚಾಯತ್ನಲ್ಲಿ ಕಸದ ಬುಟ್ಟಿ ಖರೀದಿಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಮಾರುಕಟ್ಟೆಯಲ್ಲಿ ನೂರಾರು ರೂಪಾಯಿಗೆ ಸಿಗುವ ಕಸದ ಬುಟ್ಟಿಯೊಂದಕ್ಕೆ ಬರೋಬ್ಬರ 950 ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಭ್ರಷ್ಟಾಚಾರ ತಡೆಗೆ ಅದೇಷ್ಟೇ ಕಠಿಣ ಕ್ರಮ ಜಾರಿಯಾದರೂ ಕೂಡ, ಹಣ ಲಪಟಾಯಿಸುವ ನೌಕರರು ಮಾತ್ರ ತಮ್ಮ ಭ್ರಷ್ಟಾಚಾರವನ್ನು ನಿಲ್ಲಿಸುತ್ತಿಲ್ಲ. ಇದೀಗ ಸ್ವಚ್ಚ ಗ್ರಾಮ ಯೋಜನೆಯಡಿ ಜನರಿಗೆ ಕೊಡುವ ಕಸದ ಬುಟ್ಟಿ ಖರೀದಿಯಲ್ಲಿಯೂ ಭ್ರಷ್ಟಾಚಾರ ನಡೆಸಿರುವ ಆರೋಪ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿ ಹಾಗೂ ಶಿರಾಲಿ ಗ್ರಾಮ ಪಂಚಾಯತ್ನಲ್ಲಿ ಕೇಳಿಬಂದಿದೆ.
ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಗ್ರಾಮ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಮನೆ ಮನೆ ಕಸ ವಿಲೇವಾರಿಗೆ ಬಳಸಲು ಕಸದ ಬುಟ್ಟಿ ಖರೀದಿಸಿ, ಅದನ್ನು ಆಯ್ದ ಮನೆ, ಹೋಟೆಲ್, ಅಂಗಡಿಗಳಿಗೆ ಹಂಚಲಾಗಿದೆ.

ಲಕ್ಷಾಂತರ ರೂ. ಭ್ರಷ್ಟಾಚಾರ ಆರೋಪ
ಹೀಗೆ ಖರೀದಿಸಲಾದ ಕಸದಬುಟ್ಟಿ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಅದರಂತೆಯೇ ತಾಲೂಕಿನ ಮಾರುಕೇರಿ ಹಾಗೂ ಶಿರಾಲಿ ಗ್ರಾಮ ಪಂಚಾಯತ್ನಿಂದ ಮಾರುಕಟ್ಟೆಯಲ್ಲಿ 100 -200 ರೂಪಾಯಿಗೆ ಸಿಗುವ ಕಸದಬುಟ್ಟಿಗಳಿಗೆ ಬರೋಬ್ಬರಿ 950 ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ. ಈ ಮೂಲಕ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿರುವ ಶಂಕೆ ಇದೆ. ಈ ಬಗ್ಗೆ ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರಾದ ನಾರಾಯಣ ಶರಾಫ್ ಆಗ್ರಹಿಸಿದ್ದಾರೆ.

ಶಿರಾಲಿ ಗ್ರಾಮ ಪಂಚಾಯಿತಿಯಿಂದ ದಂಧೆ
ಇನ್ನು ತಾಲೂಕಿನ ಶಿರಾಲಿ ಗ್ರಾಮ ಪಂಚಾಯಿತಿಯಿಂದ ಎರಡು ಪ್ರತ್ಯೇಕ ಬಿಲ್ ಮೂಲಕ 195 ಕಸದ ಬುಟ್ಟಿಗಳನ್ನು ಖರೀದಿಸಲಾಗಿದೆ. ಇದಕ್ಕಾಗಿ 1,85,250 ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ತೆರಿಗೆ ಸೇರಿ 950 ರೂಪಾಯಿ ದರಕ್ಕೆ ಹೊನ್ನಾವರದ ಕವಲಕ್ಕಿಯಲ್ಲಿರುವ ಶಕ್ತಿ ಎಂಟರ್ಪ್ರೈಸಸ್ ಹಾಗೂ ಪವರ್ ಸೊಲ್ಯೂಶನ್ ಹೆಸರಿನ ಸಂಸ್ಥೆಯವರು ಈ ಕಸದಬುಟ್ಟಿಗಳನ್ನು ಪೂರೈಸಿದ್ದಾರೆ.

ಗುಣಮಟ್ಟವಲ್ಲದ ಬುಟ್ಟಿಗಳ ಖರೀದಿ
ಮಾರುಕೇರಿ ಗ್ರಾಮ ಪಂಚಾಯತ್ನಲ್ಲಿಯೂ ಸಹ ಇದಕ್ಕೆ ಪೈಪೋಟಿಯಾಗಿ ದರ ನೀಡಿ ಸುಮಾರು 101 ಬುಟ್ಟಿಗಳನ್ನು ಖರೀದಿಸಿದೆ. ಅಲ್ಲದೆ ಬುಟ್ಟಿಗಳು ಕೂಡ ತೀರಾ ದೊಡ್ಡದಾಗಿಯೂ ಇಲ್ಲ. ಹೇಳುವಂತಹ ಗುಣಮಟ್ಟವೂ ಇಲ್ಲ. ಆದರೂ ಪಂಚಾಯತ್ ಅಧಿಕಾರಿಗಳು ಈ ರೀತಿ ಹೆಚ್ಚಿಗೆ ಹಣವನ್ನು ಕೊಟ್ಟು ಕಸದ ಬುಟ್ಟಿಗಳನ್ನು ಖರೀದಿ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಟೆಂಡರ್ ಕರೆಯುವ ಮೂಲಕ ಖರೀದಿ ಪ್ರಕ್ರಿಯೆ
ಈ ಬಗ್ಗೆ ಪಂಚಾಯತ್ ಉಪಾಧ್ಯಕ್ಷರನ್ನು ಕೇಳಿದರೆ ದುಬಾರಿ ವೆಚ್ಚದಲ್ಲಿ ಕಸದ ಬುಟ್ಟಿಗಳನ್ನು ಖರೀದಿಸಿರುವುದು ತಮಗೆ ಗೊತ್ತಿಲ್ಲ. ಗುಣಮಟ್ಟದ ಆಧಾರದಲ್ಲಿ ಟೆಂಡರ್ ಕರೆದು ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ನಮ್ಮ ಪಂಚಾಯಿತಿ ಪಿಡಿಓ ಕೂಡ ಉತ್ತಮರಿದ್ದು, ಈ ರಿತಿ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಅವ್ಯವಹಾರ ಆಗಿದ್ದರೆ ಸೂಕ್ತ ತನಿಖೆ ನಡೆಸಲಿ. ಈ ಮೂಲಕ ಸತ್ಯಾಸತ್ಯತೆ ಎಲ್ಲರಿಗೂ ತಿಳಿಯುತ್ತದೆ ಎಂದು ಶಿರಾಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭಾಸ್ಕರ್ ದಯಿಮನೆ ತಿಳಿಸಿದ್ದಾರೆ.
ದುಬಾರಿ ಬುಟ್ಟಿಗಳ ಖರೀದಿ ಕೇವಲ ಶಿರಾಲಿ ಹಾಗೂ ಮಾರುಕೇರಿ ಗ್ರಾಮ ಪಂಚಾಯತ್ ಮಾತ್ರವಲ್ಲದೇ, ಜಿಲ್ಲೆಯ ಇತರೆ ಪಂಚಾಯಿತಿಗಳಲ್ಲೂ ಖರೀದಿ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಕಸದಬುಟ್ಟಿ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಬಯಲಿಗೆ ಬೀಳಲಿದೆ.












Click it and Unblock the Notifications