ಕಾಂಗ್ರೆಸ್ ಶಾಸಕನನ್ನು ಬಿಗಿದಪ್ಪಿದ ಬಿಜೆಪಿ ಫೈರ್ಬ್ರಾಂಡ್: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ!
ಕಾರವಾರ, ಜೂನ್ 24: ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲಾ ಕೇಂದ್ರಕ್ಕೆ ಅಧಿಕಾರಿಗಳ ಸಭೆ ನಡೆಸಲು ಆಗಮಿಸಿದ್ದ ಸಂಸದ ಅನಂತ್ ಕುಮಾರ್ ಹೆಗಡೆ ಇದೇ ವೇಳೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದ ಶಾಸಕ ಸತೀಶ್ ಸೈಲ್ ಅವರನ್ನು ಬಿಗಿದಪ್ಪಿ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇದೀಗ ಬಿಗಿದಪ್ಪಿ ಮುಗುಳ್ನಕ್ಕ ಫೋಟೋವೊಂದು ವೈರಲ್ ಆಗಿದ್ದು, ಹಲವು ರಿತಿಯ ರಾಜಕೀಯ ವಿಶ್ಲೇಷಣೆಗೆ ಕಾರಣವಾಗಿದೆ.
ಸಂಸದ ಅನಂತ್ ಕುಮಾರ್ ಹೆಗಡೆ ಹೆಗಡೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ದೀಶಾ ಸಭೆಗೆ ಆಗಮಿಸಿದ್ದರು. ಚುನಾವಣೆ ವೇಳೆಯೂ ಎಲ್ಲಿಯೂ ಕಾಣಿಸಿಕೊಳ್ಳದ ಅವರು ಚುನಾವಣೆ ಬಳಿಕವೂ ಇದೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಸಭೆ ನಡೆಸಿದ್ದರು.

ವಿಚಿತ್ರ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಅಂಕೋಲಾಗೆ ಆಗಮಿಸಿದಾಗಲೂ ಅನಂತ್ ಕುಮಾರ್ ಹೆಗಡೆ ಕಾಣಿಸಿಕೊಂಡಿರಲಿಲ್ಲ. 2018ರಲ್ಲಿ ತಾವು ಟಿಕೆಟ್ ಕೊಡಿಸಿದ್ದ ಅಭ್ಯರ್ಥಿಗಳು ತಮ್ಮ ವಿರುದ್ಧವೇ ತಿರುಗಿಬಿದ್ದ ಕಾರಣ 2023ರಲ್ಲಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಅವರಿಗೆ ನೀಡದಂತೆ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ. ಕೊನೆಗೂ ಅವರಿಗೆ ಟಿಕೆಟ್ ನೀಡಿದ ಕಾರಣ ಚುನಾವಣೆ ವೇಳೆ ಪ್ರಚಾರಕ್ಕೂ ಆಗಮಿಸಿರಲಿಲ್ಲ.
ಅಲ್ಲದೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಬಳಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಐದು ಸ್ಥಾನದಿಂದ ಕೇವಲ ಎರಡು ಸ್ಥಾನ ಮಾತ್ರ ಪಡೆಯುವಂತಾಗಿತ್ತು. ಆದರೆ ಇದೀಗ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಎದುರಾದ ಶಾಸಕ ಸತೀಶ್ ಸೈಲ್ ಅವರನ್ನು ಬಿಗಿದಪ್ಪಿ ಮುಗಳ್ನಗೆಯೊಂದಿಗೆ ಅಭಿನಂದಿಸಿದ್ದಾರೆ.

ಸಭೆ ಬಳಿಕ ಅನಂತ್ ಕುಮಾರ್ ಹೆಗಡೆ ಅವರ ಕಾರಲ್ಲಿ ಶಾಸಕ ಸತೀಶ್ ಸೈಲ್ ಎಲ್ಲರ ಮುಂದೆಯೇ ಐ.ಬಿ ಗೆ ಭೋಜನಕ್ಕೆ ತೆರಳಿದ್ದು ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿದೆ. ಇದು ಬಿಜೆಪಿಗರಿಗೂ ಒಂದು ರೀತಿಯ ಶಾಕ್ ನೀಡಿದಂತಾಗಿದೆ. ಎಂದೂ ಈ ರೀತಿ ಅಭಿನಂದಿಸದವರೂ ಈ ಬಾರಿ ಅಪ್ಪುಗೆಯ ಅಭಿನಂದನೆ ಸಲ್ಲಿಸಿರುವುದು ಹಲವು ರಿತಿಯ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದೆ.
ಅದರಲ್ಲಿಯೂ ಮಾಜಿ ಶಾಸಕಿ ರೂಪಾಲಿ ನಾಯ್ಕ ಸೋಲಿಸಿದ್ದ ಶಾಸಕ ಸತೀಶ್ ಸೈಲ್ ಅವರನ್ನು ಈ ರೀತಿ ಅಭಿನಂದಿಸಿದ್ದು ಬಿಜೆಪಿಗರಿಗೆ ಇರಿಸುಮುರಿಸಾಗುವಂತೆ ಮಾಡಿದೆ. ಅಲ್ಲದೆ ಅನಂತ್ ಕುಮಾರ್ ಹೆಗಡೆ ಚುನಾವಣೆಯಲ್ಲಿ ಎದುರಾಳಿಗಳಿಗೆ ಬೆಂಬಲ ನೀಡಿದ್ದರು ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇನ್ನು ಅನಂತ್ ಕುಮಾರ್ ಹೆಗಡೆಗೆ ಈ ಹಿಂದೆ ಸತೀಶ್ ಸೈಲ್ ಲೋಕಸಭಾ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿ ಬಾಹ್ಯ ಬೆಂಬಲ ನೀಡಿದ್ದು ಅವರಿಬ್ಬರ ಪರಸ್ಪರ ಸ್ನೇಹವಿದ್ದು, ಮುಂದೆ ನಡೆಯುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ಅಪ್ಪುಗೆಯ ದೋಸ್ತಿ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಅಲ್ಲದೆ ಸಂಸದ ಅನಂತ್ ಕುಮಾರ್ ಹೆಗಡೆ ಇನ್ನೊಮ್ಮೆ ಲೋಕಸಭಾ ಚುನಾವಣೆಯಲ್ಲಿ ನಿಲ್ಲಲು ಪ್ರಯತ್ನ ಮಾಡುತ್ತಿದ್ದಾರೆಯೇ ಹೇಗೆ ಮತ್ತು ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ರಾಜಕೀಯ ಮುಗಿಸುವ ಇದು ಹುನ್ನಾರವೇ...? ಬಿಜೆಪಿ ಕಾರ್ಯಕರ್ತರಲ್ಲಿ ಸಂಶಯದ ಪ್ರಶ್ನೆಯಾಗಿ ಉಳಿದಿದೆ.
ಒಟ್ಟಾರೆ ಬಿಜೆಪಿ ಫೈರ್ ಬ್ರಾಂಡ್ ಖ್ಯಾತಿಯ ಅನಂತ್ ಕುಮಾರ್ ಹೆಗಡೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಬಿಗಿದಪ್ಪುಗೆ ಮೂಲಕ ಅಭಿನಂದನೆ ಸಲ್ಲಿಸಿರುವುದು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಕೂತುಹಲದ ಜೊತೆಗೆ ಚರ್ಚೆಗೂ ಕಾರಣವಾಗಿದೆ.












Click it and Unblock the Notifications