6ನೇ ಗೆಲುವಿನ ಉತ್ಸಾಹದೊಂದಿಗೆ ಅನಂತ್ ಕುಮಾರ್ ಹೆಗಡೆ ನಾಮಪತ್ರ
ಕಾರವಾರ, ಏಪ್ರಿಲ್ 02 : 'ನಮ್ಮ ವಿಚಾರಧಾರೆ, ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕಾಗಿ ಮತ ಹಾಕುವಂತೆ ಕೇಳುತ್ತೇವೆ' ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ 2019ರ ಲೋಕಸಭಾ ಚುನಾವಣೆಗೆ ಅವರು ಮಂಗಳವಾರ ನಾಮಪತ್ರವನ್ನು ಸಲ್ಲಿಸಿದರು. ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಇತರ ನಾಯಕರ ಜೊತೆ ಅವರು ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, 'ಇದು ನನ್ನ ವೈಯಕ್ತಿಕ ಚುನಾವಣೆಯಲ್ಲ. ಸಭ್ಯತೆ ಮತ್ತು ಸಂಸ್ಕಾರ ಇರುವ ಜನ ಮಾತ್ರ ಪಕ್ಷ, ನಾಯಕನಿಗಾಗಿ ಮತ ಕೇಳುತ್ತಾರೆ. ವೈಯಕ್ತಿಕ ಪ್ರತಿಷ್ಠೆ ಹೆಚ್ಚಾಗಿರುವ ಅಭ್ಯರ್ಥಿ ತನಗಾಗಿ ಮತ ಕೇಳುತ್ತಾನೆ' ಎಂದರು.
'ರಾಹುಲ್ ಗಾಂಧಿ ಕೇರಳಕ್ಕೆ ಹೋಗಿ ಸ್ಪರ್ಧೆ ಮಾಡುತ್ತಿರುವುದು ತೀರಾ ಹಾಸ್ಯಾಸ್ಪದವಾಗಿದೆ. ಅಮೇಥಿಯಲ್ಲಿ ಗೆಲ್ಲುವ ವಿಶ್ವಾಸವಿಲ್ಲದೇ ಇನ್ನೊಂದು ಕ್ಷೇತ್ರ ಹುಡುಕಿಕೊಂಡು ಹೋಗಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ರಾಜಕೀಯ ದಿವಾಳಿತನ ತೋರಿಸುತ್ತಿದೆ' ಎಂದು ಟೀಕಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಜೆಪಿ ಭದ್ರಕೋಟೆ
ಉತ್ತರ ಕನ್ನಡ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಅನಂತ್ ಕುಮಾರ್ ಹೆಗಡೆ ಅವರು 6 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದು 5 ಬಾರಿ ಗೆಲುವು ಸಾಧಿಸಿದ್ದಾರೆ. 6ನೇ ಗೆಲುವಿನ ಉತ್ಸಾಹದೊಂದಿಗೆ ಮಂಗಳವಾರ ನಾಮಪತ್ರವನ್ನು ಸಲ್ಲಿಸಿದ್ದಾರೆ.

ಪ್ರಭಾವಿ ನಾಯಕ
ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಕರ್ನಾಟಕ ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿದ್ದಾರೆ. ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಅವರು ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕೇಂದ್ರ ಸಚಿವರಾದ ಬಳಿಕ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಿದೆ.

ಹೆಚ್ಚು ಪೈಪೋಟಿ ನಿರೀಕ್ಷೆ
ಅನಂತ್ ಕುಮಾರ್ ಹೆಗಡೆ ಅವರು 2009ರ ಚುನಾವಣೆಯಲ್ಲಿ 22,769 ಮತಗಳ ಅಂತರದಿಂದ ಗೆದ್ದಿದ್ದರು. 2014ರ ಚುನಾವಣೆಯಲ್ಲಿ ಈ ಅಂತರ 1,40,700 ಮತಗಳಿಗೆ ಏರಿಕೆಯಾಗಿದೆ. ಈ ಭಾರಿ ಅವರನ್ನು ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಒಂದಾಗಿವೆ.

ಆನಂದ್ ಅಸ್ನೋಟಿಕರ್ ಅಭ್ಯರ್ಥಿ
ಉತ್ತರ ಕನ್ನಡ ಕ್ಷೇತ್ರವನ್ನು ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಆನಂದ್ ಅಸ್ನೋಟಿಕರ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. ಅನಂತ್ ಕುಮಾರ್ ಹೆಗಡೆ ಅವರಿಗೆ ಹೋಲಿಕೆ ಮಾಡಿದರೆ ಆನಂದ್ ಅಸ್ನೋಟಿಕರ್ ಪ್ರಬಲ ಅಭ್ಯರ್ಥಿಯಲ್ಲ ಎಂಬ ಮಾತುಗಳಿವೆ.











Click it and Unblock the Notifications