ಮತಯಾಚನೆಗೆ ತೆರಳಿದ್ದ 'ಅನರ್ಹ'ನಿಗೆ ಗ್ರಾಮಸ್ಥರಿಂದ ಮುಖಭಂಗ; ಕಾಲ್ಕಿತ್ತ ಶಿವರಾಮ್ ಹೆಬ್ಬಾರ್
ಶಿರಸಿ, ನವೆಂಬರ್ 27: ಯಲ್ಲಾಪುರ ಕ್ಷೇತ್ರದ ಉಪಚುನಾವಣೆಯ ಮತಯಾಚನೆಗೆಂದು ತೆರಳಿದ್ದ ಬಿಜೆಪಿ ಅಭ್ಯರ್ಥಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ತಾಲೂಕಿನ ಅಜ್ಜರಣಿ ಗ್ರಾಮದಲ್ಲಿ ನಡೆದಿದೆ.
ಪ್ರಚಾರಕ್ಕೆಂದು ತೆರಳಿದಾಗ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಈ ಹಿಂದೆ ಕಾಂಗ್ರೆಸ್ ನಿಂದ ಬಂದು ಮತ ಕೇಳಿದ್ರಿ. ಈಗ ಬಿಜೆಪಿಯಿಂದ ಮತ ಕೇಳಲು ಬಂದಿದ್ದೀರಿ. ಕಳೆದ ಬಾರಿ ಬಿಜೆಪಿಯ ಬಗ್ಗೆ ಎಷ್ಟೆಲ್ಲ ಮಾತನಾಡಿದ್ರಿ. ಈಗ ಅವರ ಪರವಾಗಿಯೇ ಮಾತನಾಡಿ ಗೊಂದಲ ಸೃಷ್ಟಿಸುತ್ತಿದ್ದೀರಿ. ನೀವು ಕಾಂಗ್ರೆಸ್ ನಲ್ಲೇ ಇದ್ದಿದ್ದರೆ ನಾವು ಮತ ಹಾಕುತ್ತಿದ್ದೆವು. ಯಾಕೆ ಹೀಗೆ ಮಾಡಿದ್ರಿ?' ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರನ್ನು ಹೆಬ್ಬಾರ್ ಸಮಾಧಾನಪಡಿಸಲು ಯತ್ನಿಸಿದರಾರೂ ಫಲ ನೀಡಲಿಲ್ಲ. ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಹೆಬ್ಬಾರ್ ಸ್ಥಳದಿಂದ ವಾಪಾಸ್ ತೆರಳಿದ್ದಾರೆ.

ಶಿವರಾಮ ಹೆಬ್ಬಾರ್ 2013 ಹಾಗೂ 2018ರಲ್ಲಿ ಕಾಂಗ್ರೆಸ್ ನಿಂದ ಯಲ್ಲಾಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು. ಇತ್ತೀಚಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ಪೀಕರ್ ಅವರಿಂದ ಅನರ್ಹತೆಗೊಳಗಾಗಿದ್ದರು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ತೀರ್ಪಿನನ್ವಯ ಈಗ ಚುನಾವಣೆಗೆ ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷಕ್ಕೂ ರಾಜೀನಾಮೆ ನೀಡಿದ್ದ ಅವರು ಬಿಜೆಪಿಯಿಂದ ಸ್ಪರ್ಧೆಗಿಳಿದಿದ್ದಾರೆ.











Click it and Unblock the Notifications