ಉತ್ತರ ಕನ್ನಡ ಜಿಲ್ಲೆಯ 662 ದೇವಾಲಯಗಳು ಆರ್ಟಿಐ ವ್ಯಾಪ್ತಿಗೆ
ಕಾರವಾರ, ಡಿಸೆಂಬರ್ 17: ದೇವಸ್ಥಾನದ ಆಡಳಿತದಲ್ಲೂ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ. ಮಾಹಿತಿ ಹಕ್ಕು ಅಧಿನಿಯಮಕ್ಕೆ ದೇವಾಲಯಗಳು ಒಳಪಡಲಿದೆ ಎನ್ನುವ ಆದೇಶ ಹೊರಡಿಸಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಒಟ್ಟು 662 ದೇವಾಲಯಗಳಿಗೆ ಮಾಹಿತಿ ಹಕ್ಕು ಅಧಿಕಾರಿಗಳನ್ನು ಜಿಲ್ಲಾಡಳಿತ ನೇಮಿಸಿ ಕ್ರಮ ಕೈಗೊಂಡಿದೆ.
ರಾಜ್ಯ ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳು ಮಾಹಿತಿ ಹಕ್ಕು ಅಧಿನಿಯಮ-2005ರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗ ಇತ್ತೀಚಿಗೆ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿತ್ತು.
ವಿಶೇಷ ಸುದ್ದಿ: ನೆಚ್ಚಿನ ಗೋಕರ್ಣದಲ್ಲಿ ತರಕಾರಿ ಬೆಳೆದು ಮಾದರಿಯಾದ ವಿದೇಶಿ ಜೋಡಿ
ಇದರ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಈ ಹಿನ್ನಲೆಯಲ್ಲಿ ಎಲ್ಲಾ ಜಿಲ್ಲಾಡಳಿತಕ್ಕೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಿಗೆ ಮಾಹಿತಿ ಹಕ್ಕು ಅಧಿಕಾರಿಗಳನ್ನ ನೇಮಿಸುವಂತೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎ ವರ್ಗದ 9, ಬಿ ವರ್ಗದ 8 ಹಾಗೂ ಸಿ ವರ್ಗದ 645 ದೇವಸ್ಥಾನಗಳಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಯನ್ನು ನೇಮಿಸಿ ಆದೇಶಿಸಿದ್ದಾರೆ.
ಶಿರಸಿಯ ಮಾರಿಕಾಂಬ ದೇವಾಲಯ
ಶಿರಸಿಯ ಮಾರಿಕಾಂಬ, ಇಡಗುಂಜಿ ಮಹಾಗಣಪತಿ, ಮ್ಹಾತೋಬಾರ ಮುರ್ಡೇಶ್ವರ, ಭಟ್ಕಳದ ಅಳ್ವೆಕೋಡಿ ದುರ್ಗಾಪರಮೇಶ್ವರಿ, ಶಿರಸಿ ತಾಲೂಕಿನ ಮಂಜುಗುಣಿಯ ಶ್ರೀವೆಂಕಟರಮಣ, ಶಿರಸಿ ನಗರದ ರಾಯರಪೇಟೆಯ ಮಹಾಗಣಪತಿ ಶಂಕರ ದೇವಸ್ಥಾನ, ಕುಮಟಾ ಬಾಡ ಕಾಂಚಿಕಾ ಪರಮೇಶ್ವರಿ, ಭಟ್ಕಳದ ಚನ್ನಪಟ್ಟಣ ಹನುಮಂತ ದೇವಸ್ಥಾನ ಹಾಗೂ ಭಟ್ಕಳ ಕಡವಿನಕಟ್ಟೆಯ ದುರ್ಗಾಪರಮೇಶ್ವರಿ ದೇವಸ್ಥಾನಗಳು ಎ ವರ್ಗದಲ್ಲಿ ಬರಲಿವೆ.
ಯಾನದ ಮಹಾಮ್ಮಾಯಿ ದೇವಸ್ಥಾನ
ಶಿರಸಿ ತಾಲೂಕಿನ ಬನವಾಸಿಯ ಮಧುಕೇಶ್ವರ, ಭಟ್ಕಳದ ಸೋಡಿಗದ್ದೆ ಮಹಾಸತಿ, ಕುಮಟಾದ ಬರ್ಗಿ ಮಹಾಲಿಂಗೇಶ್ವರ ದೇವಸ್ಥಾನ, ಕಾರವಾರದ ಬಾಡ ಮಹಾದೇವ ವಿನಾಯಕ ದೇವಸ್ಥಾನ, ಗೋಕರ್ಣದ ಭದ್ರಕಾಳಿ, ತಾಮ್ರಗೌರಿ ದೇವಸ್ಥಾನ, ಮಹಾಗಣಪತಿ ದೇವಸ್ಥಾನ ಹಾಗೂ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಶಾಂತಾದುರ್ಗಾ, ಯಾನದ ಮಹಾಮ್ಮಾಯಿ ದೇವಸ್ಥಾನಗಳು ಬಿ ವರ್ಗದಲ್ಲಿ ಬರಲಿವೆ.
ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನೇಮಕ
ಇನ್ನು ಸಿ ವರ್ಗಕ್ಕೆ ಕಾರವಾರದ 50, ಅಂಕೋಲಾದ 59, ಕುಮಟಾದ 100, ಹೊನ್ನಾವರದ 103, ಭಟ್ಕಳದ 45, ಶಿರಸಿಯ 60, ಸಿದ್ದಾಪುರದ 50, ಯಲ್ಲಾಪುರದ 67, ಮುಂಡಗೋಡಿನ 21, ಹಳಿಯಾಳದ 72 ಹಾಗೂ ಜೊಯಿಡಾದ 18 ದೇವಸ್ಥಾನಗಳು ಈಗ ಮಾಹಿತಿ ಹಕ್ಕಿನಡಿ ಸೇರ್ಪಡೆಗೊಂಡಿದೆ. ಎ ವರ್ಗದಲ್ಲಿ ಬರುವ ಶಿರಸಿಯ ಮಾರಿಕಾಂಬ ದೇವಸ್ಥಾನ ಹಾಗೂ ಹೊನ್ನಾವರದ ಇಡಗುಂಜಿ ದೇವಸ್ಥಾನಗಳಿಗೆ ರಿಸೀವರ್ಗಳನ್ನು ನ್ಯಾಯಾಲಯ ನೇಮಕ ಮಾಡಿರುವುದರಿಂದ ಅವರು ಕೂಡಲೇ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ನೇಮಿಸುವಂತೆ ಆದೇಶಿಸಲಾಗಿದೆ.
ಕಾರ್ಯಪ್ರವೃತ್ತರಾಬೇಕು
ಇನ್ನು ಸಿ ವರ್ಗದ ವ್ಯಾಪ್ತಿಗೆ ಬರುವ ದೇವಸ್ಥಾನಗಳಿಗೆ ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ಗಳು ಮಾಹಿತಿ ಹಕ್ಕು ಅಧಿಕಾರಿಗಳನ್ನು ನೇಮಿಸಿ, ನೇಮಕಗೊಂಡವರು ಕೂಡಲೇ ಕಾರ್ಯಪ್ರವೃತ್ತರಾಗಿ ದೇವಾಲಯದ ಮುಂಭಾಗದಲ್ಲಿ ಸಾರ್ವಜನಿಕರ ಮಾಹಿತಿ ಅಧಿಕಾರಿಗಳು, ಸಹಾಯಕ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ವಿವರಗಳುಳ್ಳ ಮಾಹಿತಿ ಫಲಕವನ್ನು ಹಾಕುವಂತೆ ಸೂಚಿಸಲಾಗಿದೆ.
Recommended Video
ಮಾಹಿತಿ ಹಕ್ಕು ಅಧಿಕಾರಿ ನೇಮಿಸುವಂತೆ ಸೂಚನೆ
‘ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಕೂಡಲೇ ಎ, ಬಿ, ಸಿ ವರ್ಗದ ದೇವಸ್ಥಾನಗಳಿಗೆ ಮಾಹಿತಿ ಹಕ್ಕು ಅಧಿಕಾರಿ ನೇಮಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಜಿಲ್ಲಾಡಳಿತ ಸರ್ಕಾರದ ಆದೇಶವನ್ನು ಪಾಲಿಸಿದೆ. ಎಲ್ಲಾ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿಗೆ ಆದೇಶ ಕಳುಹಿಸಲಾಗಿದೆ. ಸಾರ್ವಜನಿಕರು ಯಾವುದಾದರೂ ದೇವಸ್ಥಾನದ ಮಾಹಿತಿ ಪಡೆಯಲು ಇಚ್ಛಿಸಿದರೆ ಇನ್ಮುಂದೆ ಆದೇಶ ಮಾಡಿರುವ ಅಧಿಕಾರಿಗಳಿಂದ ಪಡೆಯಬಹುದಾಗಿದೆ' ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.