ಉತ್ತರ ಕನ್ನಡ: 10 ದಿನದಲ್ಲಿ ಕೊರೊನಾಕ್ಕೆ 171 ಬಲಿ!
ಕಾರವಾರ, ಮೇ 25; ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿನ ಸಂಖ್ಯೆ ಹೆಚ್ಚಳದೊಂದಿಗೆ ಸಾವಿನ ಪ್ರಮಾಣವೂ ಹೆಚ್ಚಾಗಿರುವುದು ಎಲ್ಲರಲ್ಲೂ ಆತಂಕ ಸೃಷ್ಟಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 10 ದಿನದಲ್ಲಿ 171 ಮಂದಿ ಸೋಂಕಿತರು ಬಲಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಯ ಪಟ್ಟಿಯಲ್ಲಿದೆ. ಇನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಒಂದೆಡೆ ಹೆಚ್ಚಿನ ಗಮನವನ್ನು ಕೊಡುತ್ತಿದ್ದರು ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಮಾತ್ರ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಕಳೆದ ಹತ್ತು ದಿನದಲ್ಲಿ 171 ಜನರು ಸೋಂಕಿಗೆ ಬಲಿಯಾಗಿದ್ದು ಜಿಲ್ಲೆಯ ಜನರನ್ನು ಇನ್ನಷ್ಟು ಆತಂಕ ಪಡುವಂತೆ ಮಾಡಿದೆ. ಮೇ 14ರಂದು 8 ಜನ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾಗಿದ್ದರೆ, 15 ರಂದು 8, 16 ರಂದು 21, 17 ರಂದು 15, 18 ರಂದು 27, 19 ರಂದು 11, 20 ರಂದು 16, ಮೇ 21 ರಂದು 16, 22 ರಂದು 21, 23 ರಂದು 18 ಹಾಗೂ 24ರಂದು 10 ಸೋಂಕಿತರು ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಶಿರಸಿ ಹಾಗೂ ದಾಂಡೇಲಿ ತಾಲೂಕು ಒಳಗೊಂಡು ಹಳಿಯಾಳದಲ್ಲಿ ತಲಾ 33 ಮಂದಿ ಕೊರೊನಾ ಸೋಂಕಿಗೆ ಬಲಿಯಾಗುವ ಮೂಲಕ ಜಿಲ್ಲೆಯಲ್ಲಿಯೇ ಅತಿಹೆಚ್ಚು ಸೋಂಕಿತರು ಮೃತಪಟ್ಟ ತಾಲೂಕುಗಳಾಗಿವೆ.

ಯಾವ ತಾಲೂಕಿನಲ್ಲಿ ಎಷ್ಟು?
ಜಿಲ್ಲೆಯಲ್ಲಿ ಮುಂಡಗೋಡದಲ್ಲಿ 21, ಕಾರವಾರದಲ್ಲಿ 23, ಹೊನ್ನಾವರದಲ್ಲಿ 19, ಭಟ್ಕಳದಲ್ಲಿ 10, ಅಂಕೋಲಾದಲ್ಲಿ 13, ಸಿದ್ದಾಪುರದಲ್ಲಿ 6, ಜೊಯಿಡಾದಲ್ಲಿ 9, ಯಲ್ಲಾಪುರದಲ್ಲಿ ಇಬ್ಬರು ಸೋಂಕಿತರು ಬಲಿಯಾಗಿದ್ದಾರೆ. ಇನ್ನು ಕುಮಟಾ ಪಟ್ಟಣದಲ್ಲಿ ಮಾತ್ರ ಕಳೆದ ಹತ್ತು ದಿನಗಳಲ್ಲಿ ಸೋಮವಾರ (ಮೇ 24) ಒಬ್ಬರು ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ
ಕಳೆದ 8 ದಿನದಿಂದ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಸಾವಿನ ಸಂಖ್ಯೆ ದಾಖಲಾಗುತ್ತಿದೆ. ದಿನೇ ದಿನೇ ಸಾವಿನ ಸಂಖ್ಯೆ ಯಥಾ ಸ್ಥಿತಿಯಲ್ಲಾಗುತ್ತಿದ್ದು, ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ವಾರ್ಡಿನಲ್ಲಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೇ ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು
ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎನ್ನಲಾಗಿದ್ದು, ಗುಣಮುಖ ಆಗುತ್ತಿರುವವರ ಸಂಖ್ಯೆ ಹೊಸ ಸಂಖ್ಯೆಗಿಂತ ಹೆಚ್ಚಾಗಿದೆ. ಆದರೆ ಸಾವಿನ ಸಂಖ್ಯೆ ಮಾತ್ರ ಕಡಿಮೆಯಾಗದೇ ಅದೇ ಸ್ಥಿತಿಯಲ್ಲಿದೆ. ಈ ಬಗ್ಗೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಇನ್ನಷ್ಟು ಆಸಕ್ತಿ ವಹಿಸಿ ಜನರ ಸಾವಿನ ಪ್ರಮಾಣ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
Recommended Video

ಜಿಲ್ಲಾಡಳಿತ ವಿಫಲವಾಯಿತೇ?
ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಪಾಸಿಟಿವಿಟಿ ರೇಟ್ನಲ್ಲಿ ಹೆಚ್ಚಿದ್ದು, ಜಿಲ್ಲಾಡಳಿತದ ತಡವಾದ ತೀರ್ಮಾನವೇ ಸೋಂಕಿನ ಹೆಚ್ಚಳಕ್ಕೆ ಕಾರಣವಾಯಿತೇ? ಎನ್ನುವ ಮಾತು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೊರೊನಾ ಪ್ರಕರಣ ಕಡಿಮೆ ಇರುವ ವೇಳೆಯಲ್ಲಿಯೇ ಜಿಲ್ಲೆಗೆ ಮಹಾರಾಷ್ಟ್ರ ಹಾಗೂ ಬೆಂಗಳೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಇನ್ನು ಹೊರ ಊರಿನಿಂದ ಬಂದವರು ಮದುವೆ, ಕಾರ್ಯಕ್ರಮಗಳಿಗೆ ತಿರುಗಾಟ ಮಾಡುವುದಲ್ಲದೇ, ಯಾರ ಭಯವಿಲ್ಲದೇ ಊರೆಲ್ಲ ಸುತ್ತಾಟ ನಡೆಸಿದ್ದರು. ಇದು ಸೋಂಕು ಗ್ರಾಮೀಣ ಪ್ರದೇಶದಲ್ಲೂ ಹರಡಲು ಪ್ರಮುಖ ಕಾರಣವಾಗಿತ್ತು. ಆ ವೇಳೆಯೇ ಜಿಲ್ಲಾಡಳಿತ ಹೊರ ಊರಿನಿಂದ ಬಂದವರಿಗೆ ಸೀಲ್ ಹಾಕಿ ಕ್ವಾರಂಟೈನ್ ಮಾಡಿದ್ದರೆ ಸೋಂಕಿನ ಪ್ರಮಾಣ ಹಾಗೂ ಸಾವಿನ ಪ್ರಮಾಣವನ್ನ ಕಡಿಮೆ ಮಾಡಬಹುದಿತ್ತು.
ಹೋಂ ಕ್ವಾರಂಟೈನ್ಗೆ ಹೆಚ್ಚಿನ ಒತ್ತು ನೀಡಿದ್ದು ಸಾಂಸ್ಥಿತ ಕ್ವಾರಂಟೈನ್ ಕೇಂದ್ರ ತೆರೆಯುವಲ್ಲಿ ನಿಧಾನ ಮಾಡಿದರು. ಸೋಂಕಿನ ಪ್ರಮಾಣ ಹೆಚ್ಚಳವಾದ ನಂತರ ಗಡಿಯಲ್ಲಿ ಭದ್ರತೆ ಹಾಕಿ ಹೊರ ಊರಿನಿಂದ ಬಂದವರಿಗೆ ಸೀಲ್ ಹಾಕುವ, ಹೋಂ ಕ್ವಾರಂಟೈನ್ ಬಯಸದೇ ಇರುವವರು ಕೋವಿಡ್ ಕೇರ್ ಸೆಂಟರ್ನಲ್ಲಿ ಇರಲು ಆದೇಶಿಸಿದ್ದು, ಜಿಲ್ಲಾಡಳಿತದ ಆದೇಶ ಗಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತಾಗಿತ್ತು ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.












Click it and Unblock the Notifications