ಮುಖ್ಯಮಂತ್ರಿ ಬೊಮ್ಮಾಯಿ 'ಅನೈತಿಕ ಪೊಲೀಸ್ಗಿರಿ' ಬೆಂಬಲಿಸಿರುವುದು ಖಂಡನೀಯ!
ಬೆಂಗಳೂರು, ಅ 15: ನೈತಿಕ ಪೊಲೀಸ್ಗಿರಿ ಬೆಂಬಲಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟಿದ್ದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. "ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಾಗುತ್ತದೆ. ಪರಸ್ಪರರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆಗಳು ಇದ್ದೇ ಇರುತ್ತವೆ. ಸಾಮಾಜಿಕವಾಗಿ ಸಾಮರಸ್ಯವನ್ನು ಕಾಪಾಡಲು ನಾವೆಲ್ಲರೂ ಪ್ರಯತ್ನ ಪಡಬೇಕು. ನೈತಿಕತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಪ್ರತಿಯೊಬ್ಬರದ್ದು ಹೊಣೆಗಾರಿಕೆ ಇದೆ" ಎಂದು ಇತ್ತೀಚೆಗೆ ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೈತಿಕ ಪೊಲೀಸ್ಗಿರಿ ಬೆಂಬಲಿಸುವಂತೆ ಮಾತನಾಡಿದ್ದರು.
ನೈತಿಕ ಪೊಲೀಸ್ಗಿರಿ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಅವರ ಹೇಳಿಕೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸಂವಿಧಾನಕ್ಕೆ ಬದ್ಧರಾಗಿ ರಾಜ್ಯದ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ನೋಡುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿಯನ್ನು ಬೆಂಬಲಿಸಿ ಒಂದು ವರ್ಗದ ಜನರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದ್ದಾರೆ.

ಕೋಮುವಾದಿ ಸಂಘಟನೆಗಳಿಂದ ಅನೈತಿಕ ಪೋಲಿಸ್ ಗಿರಿ
ರಾಜ್ಯದಲ್ಲಿ ಬಿಜೆಪಿ ಗೂಂಡಾರಾಜ್ಯ ಸೃಷ್ಟಿಸುತ್ತಿದ್ದು ಸಮಾಜದ ಶಾಂತಿ ಮತ್ತು ಸಹಬಾಳ್ವೆಗೆ ಧಕ್ಕೆ ತರುತ್ತಿದೆ. ಕೋಮುವಾದಿ ಸಂಘಟನೆಗಳಿಂದ ಅಲ್ಪಸಂಖ್ಯಾತರು, ವಿದ್ಯಾರ್ಥಿಗಳು, ಮಹಿಳೆಯರು, ಯುವ ಜನರ ಮೇಲೆ ನಡೆಯುತ್ತಿರುವ ಅನೈತಿಕ ಪೋಲಿಸ್ ಗಿರಿಯನ್ನು ಬಸವರಾಜ ಬೊಮ್ಮಾಯಿ ಅವರು ಮಂಗಳೂರಿನಲ್ಲಿ ಸಮರ್ಥಿಸಿದ ಬೆನ್ನೆಲ್ಲಾ ಇದರಿಂದ ಹುರುಪುಗೊಂಡ ಹಿಂದೂ ಮಹಾಸಭಾ, ಆಯುಧಪೂಜೆ ನೆಪವಿಟ್ಟುಕೊಂಡು ಶಸ್ತ್ರಾಸ್ತ್ರಗಳನ್ನು ಹಂಚಿದೆ. ಈ ಸಂಘಟನೆಗಳ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತಿರುವುದೇ ಇದಕ್ಕೆಲ್ಲ ಮುಖ್ಯ ಕಾರಣ. ಆದ್ದರಿಂದ ಸಮಾಜಘಾತುಕ ಸಂಘಟನೆಗಳ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಸಿಎಂ ಬೊಮ್ಮಾಯಿ ಧೋರಣೆ ಖಂಡನೀಯ ಎಂದು ಯುವ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಘೋಷಣೆ ಕೂಗಿದರು.

ಸಿಎಂ ಬೊಮ್ಮಾಯಿ ಕೋಮುವಾದಿಗಳ ಪರ!
ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಕೃತಿ ದಹಿಸಿ ಕೈ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಇದೇ ವೇಳೆ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ "ಈ ಹಿಂದೆ ಗೃಹ ಸಚಿವರಾಗಿದ್ದ ಬೊಮ್ಮಾಯಿ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಎಲ್ಲರನ್ನು ರಕ್ಷಣೆ ಮಾಡುವುದು ಅವರ ಜವಾಬ್ದಾರಿ. ಆದರೆ ಸಂಘ ಪರಿವಾರದವರು ನಡೆಸುವ ಕಾನೂನು ಬಾಹಿರ, ಸಮಾಜದ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ನಡಾವಳಿಕೆಯನ್ನು ಬಹಿರಂಗವಾಗಿ ಬೆಂಬಲಿಸಿ ತಾವು ಕೋಮುವಾದಿಗಳ ಪರ ಎಂದು ಬಹಿರಂಗವಾಗಿ ಒಪ್ಪಿಕೊಂಡಿರುವುದನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ" ಎಂದು ಆರೋಪಿಸಿದ್ದಾರೆ.

ಬೊಮ್ಮಾಯಿ ಕೇವಲ ಸಂಘ ಪರಿವಾದವರ ಸಿಎಂ
"ಮಂಗಳೂರು, ಬೆಂಗಳೂರು, ಕಲಬುರಗಿ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಯುತ್ತಿದ್ದು, ಇದನ್ನು ಮುಖ್ಯಮಂತ್ರಿಯಾದವರು ಖಂಡಿಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಆದರೆ ಅವರೇ ಇದನ್ನು ಸಮರ್ಥಿಸಿಕೊಂಡು ಮಾತನಾಡಿರುವುದು ಆತಂಕಕಾರಿ ಬೆಳವಣಿಗೆ. ಇದರಿಂದ ಸಾಮರಸ್ಯದ ಸಂಸ್ಕೃತಿಗೆ ಆತಂಕ ಎದುರಾಗಿದೆ. ಕೇವಲ ಸಂಘ ಪರಿವಾದವರ ಮುಖ್ಯಮಂತ್ರಿಯಂತೆ ಬಸವರಾಜ ಬೊಮ್ಮಾಯಿ ಅವರು ವರ್ತಿಸಿದ್ದಾರೆ" ಎಂದು ರಕ್ಷಾ ರಾಮಯ್ಯ ಆರೋಪಿಸಿದ್ದಾರೆ.
Recommended Video

ಅನೈತಿಕ ಪೊಲೀಸ್ಗಿರಿಯನ್ನು ಸಹಿಸುವುದಿಲ್ಲ!
ಪ್ರತಿಯೊಂದು ಸಂವಿಧಾನಬದ್ಧವಾಗಿ ನಡೆಯಬೇಕು. ನೈತಿಕ ಪೊಲೀಸ್ ಗಿರಿ ಸರ್ಕಾರದ ಜವಾಬ್ದಾರಿಯಲ್ಲ. ಕಾನೂನಿನ ಪ್ರಕಾರ ಜನರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಅನೈತಿಕ ಪೊಲೀಸ್ ಗಿರಿ ಮನೆಗೆ ಮಾತ್ರ ಸೀಮಿತ ವಾಗಿರಬೇಕು. ರಸ್ತೆಯಲ್ಲಿ ಇದನ್ನು ಪ್ರದರ್ಶಿಸುವುದು, ಹಾದಿ ಬೀದಿಯಲ್ಲಿ ಜನರಿಗೆ ಧರ್ಮಬೋಧನೆ ಮಾಡುವುದು ಸರಿಯಲ್ಲ. ಇದನ್ನು ನಾವು ಸಹಿಸುವುದಿಲ್ಲ ಎಂದು ರಕ್ಷಾ ರಾಮಯ್ಯ ಎಚ್ಚರಿಕೆ ನೀಡಿದರು. ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಸೇರಿದಂತೆ ಪ್ರತಿಭಟನೆಯಲ್ಲಿ ಅನೇಕರು ಭಾಗವಹಿಸಿದ್ದರು.












Click it and Unblock the Notifications