ಯಲ್ಲಾಪುರದಲ್ಲಿ ಅಪಘಾತ: ಧರ್ಮಸ್ಥಳಕ್ಕೆ ಹೊರಟ್ಟಿದ್ದ ಕುಟುಂಬ ದುರ್ಮರಣ
ಯಲ್ಲಾಪುರ, ಮಾರ್ಚ್ 06: ಹಳಿಯಾಳದಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಮಾರುತಿ ಓಮ್ನಿ ಕಾರಿಗೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ಓಮ್ನಿಯಲ್ಲಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಓಮ್ನಿಗೆ ಗುದ್ದಿದ ನಂತರ ಬೈಕ್ ಸವಾರನ ಮೇಲೆ ಬಸ್ ಹರಿದಿದ್ದು, ಆತ ಕೂಡಾ ಮೃತಪಟ್ಟಿದ್ದಾನೆ.
ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಗುಡ್ಡಾಪುರದ ಬಳಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಹಳಿಯಾಳದ ದೇವು ಜಾಧವ್ (35), ಶಶಿಕಲಾ ದೇವಮ್ಮ (42), ಅಕ್ಷತಾ ದೇವಮ್ಮ(22) ಹಾಗೂ ಶಾರದಾ (55) ಎಂದು ಗುರುತಿಸಲಾಗಿದೆ. ಮೃತ ಬೈಕ್ ಸವಾರನ ಬಗ್ಗೆ ವಿವರ ತಿಳಿದು ಬಂದಿಲ್ಲ.
ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿದ್ದ ದೇವಣ್ಣ (45) ಜ್ಯೋತಿ(19) ಅನಿಲ್ (12) ಅವರನ್ನು ಪೊಲೀಸರು ಗ್ರಾಮಸ್ಥರ ಸಹಾಯದಿಂದ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಒಂದೇ ಕುಟುಂಬದ ಒಟ್ಟು ಏಳು ಜನರು ಹಳಿಯಾಳದಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಓಮ್ನಿ ಕಾರಿನಲ್ಲಿ ತೆರುಳುತ್ತಿದ್ದಾಗ ಮಂಗಳೂರಿನಿಂದ ಗೋಕಾಕ್ಗೆ ತೆರಳುತ್ತಿದ್ದ ಖಾಸಗಿ ಬಸ್ ಗುದ್ದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಗಣೇಶ್ ಟ್ರಾವೆಲ್ಸ್ ಗೆ ಸೇರಿರುವ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಲ್ಲಾಪುರ ಪೊಲೀಸರು ಪ್ರಕರಣದಾಖಲಿಸಿಕೊಂಡಿದ್ದಾರೆ.