ವಾಸ್ತವತೆಯ ಅರಿವಾಗಿದೆ, ನನ್ನನ್ನು ಕ್ಷಮಿಸಿ: ಬಿಎಸ್ವೈ
ಬೆಂಗಳೂರು, ಡಿ 4: ಯಾವುದೋ ಕೆಟ್ಟ ಗಳಿಗೆಯಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡೆ. ನಾನೇ ಕಟ್ಟಿ ಬೆಳಿಸಿದ ನನ್ನ ಮಾತೃ ಪಕ್ಷ ಬಿಜೆಪಿಯನ್ನು ತೊರೆದು ತಪ್ಪು ಮಾಡಿದೆ ಎನ್ನುವ ವಾಸ್ತವತೆಯ ಅರಿವಾಗಿದೆ. ರಾಜ್ಯದ ಜನತೆಯಲ್ಲಿ ಕ್ಷಮೆ ಕೋರುತ್ತಿದ್ದೇನೆಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ರಾಜ್ಯದ ಮೂಲೆ ಮೂಲೆಗೆ ಇನ್ನೇನು ಕೆಲವೇ ದಿನಗಳಲ್ಲಿ ಬಿಜೆಪಿ ಮುಖಂಡರ ಜೊತೆ ಪ್ರವಾಸ ಮಾಡಿ ಜನತೆಗೆ ವಾಸ್ತವತೆಯನ್ನು ಮನದಟ್ಟು ಮಾಡಿ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದಾರೆ. (ಅಧಿಕೃತವಾಗಿ ಒಂದುಗೂಡಿದ ಬಿಜೆಪಿ ಮತ್ತು ಕೆಜೆಪಿ)
ನಾನು ಯಾವುದೇ ಬೇಡಿಕೆ ಇಡದೇ ಬೇಷರತ್ತಾಗಿ ಬಿಜೆಪಿ ಜೊತೆ ಕೆಜೆಪಿ ವಿಲೀನ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ. ಕೆಜೆಪಿ ಮುಖಂಡರ ಜೊತೆ ಚರ್ಚಿಸಿ ಈ ನಿರ್ಧಾರವನ್ನು ತೆಗೆದು ಕೊಂಡಿದ್ದೇನೆ. ಪ್ರತಿಪಕ್ಷದ ನಾಯಕನ ಹುದ್ದೆಯಾಗಲೀ ಅಥವಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.
ನನ್ನ ಈ ಕ್ಷಣದ ಉದ್ದೇಶ ಇಷ್ಟೇ. ನನ್ನಿಂದ ತಪ್ಪಾಗಿದೆ, ಪಕ್ಷಕ್ಕೂ ಹಿನ್ನಡೆಯಾಗಿದೆ. ಈ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗ ಬೇಕಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ 19 ಸ್ಥಾನ ನನ್ನ ನಾಯಕತ್ವದಲ್ಲಿ ಗೆದ್ದಿದ್ದೆವು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಇಪ್ಪತ್ತು ಸ್ಥಾನವನ್ನು ಗೆಲ್ಲುವುದು ನನ್ನ ಸದ್ಯದ ಗುರಿ ಎಂದು ಯಡಿಯೂರಪ್ಪ ಹೇಳಿದ್ದಾರೆ. (ಬಿಜೆಪಿಗೆ ಮರಳುವ ಯಡಿಯೂರಪ್ಪ ಮುಂದಿರುವ ಸವಾಲುಗಳು!)
ಯಡಿಯೂರಪ್ಪ ಮನದಾಳದ ಮಾತು, ಸ್ಲೈಡಿನಲ್ಲಿ...

ಸ್ಥಾನಮಾನ ಬಯಸಿಲ್ಲ
ನನ್ನ ಜೊತೆ ಇರುವ ಕೆಜೆಪಿ ಮುಖಂಡರಿಗೂ ನಾನು ಯಾವುದೇ ಸ್ಥಾನಮಾನ ನೀಡಬೇಕೆಂದು ಬೇಡಿಕೆ ಇಟ್ಟಿಲ್ಲ. ಪಕ್ಷಕ್ಕಾಗಿ ಆತ್ಮಸಾಕ್ಷಿಯಾಗಿ ದುಡಿದು ಸೂಕ್ತ ಸ್ಥಾನಮಾನ ಪಡೆದುಕೊಳ್ಳಿ ಎಂದಿದ್ದೇನೆ. ಪುರಸಭಾ ಸದಸ್ಯನಾಗಿದ್ದ ನಾನು ಮುಖ್ಯಮಂತ್ರಿಯಾಗಲು ನನ್ನ ಪಕ್ಷ ಕಾರಣ. ಬಿಜೆಪಿಗೆ ನನಗೆ ಎಲ್ಲವನ್ನೂ ನೀಡಿದೆ. ಆದರೆ, ಯಾವುದೋ ತಪ್ಪು ಗಳಿಗೆಯಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡೆ, ಈ ಬಗ್ಗೆ ನನಗೆ ವಿಷಾದವಿದೆ.

ರಾಜ್ಯ ನಾಯಕರೂ ಕಾರಣ
ನಾನು ಮತ್ತೆ ಪಕ್ಷಕ್ಕೆ ಮರಳಲು ಕೇಂದ್ರ ನಾಯಕರ ಜೊತೆ, ರಾಜ್ಯ ನಾಯಕರೂ ಪ್ರಮುಖ ಕಾರಣ. ಬಿಜೆಪಿಯಲ್ಲಿರುವ ಶೇ.90ರಷ್ಟು ಮುಖಂಡರು ನಾನು ಮತ್ತೆ ಪಕ್ಷಕ್ಕೆ ಮರಳ ಬೇಕೆಂದು ಪ್ರಯತ್ನಿಸುತ್ತಲೇ ಇದ್ದರು. ರಾಷ್ಟೀಯ ಪಕ್ಷ ಎಂದ ಮೇಲೆ, ಕೆಲವೊಂದು ಅಸಮಾಧನವಿರುವುದು ಸಹಜ. ಪಕ್ಷ ಮತ್ತು ರಾಜ್ಯದ ಒಳಿತಿಗಾಗಿ ಅದನ್ನೆಲ್ಲಾ ಮರೆತು ಜನತೆಯ ಮುಂದೆ ಹೋಗುತ್ತೇವೆ.

ವಿಲೀನ ಪ್ರಕ್ರಿಯೆ
ಬಿಜೆಪಿ ಜೊತೆ ಕೆಜೆಪಿ ವಿಲೀನ ಪ್ರಕ್ರಿಯೆ ಇನ್ನು ಎರಡು - ಮೂರು ದಿನದಲ್ಲಿ ಪೂರ್ಣಗೊಳ್ಳಲಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಕೆಜೆಪಿ ಕಡೆಯಿಂದ ವಿಲೀನ ಸಂಬಂಧ ಪತ್ರವನ್ನು ಸಲ್ಲಿಸಲಾಗಿದೆ. ಬಿಜೆಪಿ ಮುಖಂಡರೂ ಸ್ಪೀಕರ್ ಅವರನ್ನು ಭೇಟಿಯಾಗಿ ಪತ್ರ ಸಲ್ಲಿಸಲಿದ್ದಾರೆ.

ರಾಜ್ಯ ಪ್ರವಾಸ
ಕಾರಣಾಂತರದಿಂದ ನನ್ನ ಜೊತೆ ವಿರಸಗೊಂಡಿದ್ದ ಬಿಜೆಪಿ ನಾಯಕರನ್ನು ಜೊತೆಗೆ ಕರೆದುಕೊಂಡು ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಈ ಮೂಲಕ ರಾಜ್ಯದ ಜನತೆಗೆ ಸ್ಪಷ್ಟ ಸಂದೇಶವನ್ನೂ ನೀಡುತ್ತೇನೆ. ನಮ್ಮಿಂದಾದ ತಪ್ಪನ್ನು ಕ್ಷಮಿಸಿ, ರಾಜ್ಯದ ಅಭಿವೃದ್ದಿಗಾಗಿ ಮತ್ತೆ ಬಿಜೆಪಿಯನ್ನು ಆಶೀರ್ವದಿಸಿ ಎಂದು ಕೋರುತ್ತೇವೆ.

ರಾಜ್ಯದಲ್ಲಿ ಸರಕಾರವೇ ಇಲ್ಲ
ಕಳೆದ ಏಳೆಂಟು ತಿಂಗಳಿನಿಂದ ರಾಜ್ಯದಲ್ಲಿ ಸರಕಾರವೇ ಇಲ್ಲ. ರೈತರ, ಜನಸಾಮಾನ್ಯರ ಕಷ್ಟವನ್ನು ಕೇಳುವವರೇ ಇಲ್ಲ. ಸಿದ್ದು ಸರಕಾರ ನಿಷ್ಪ್ರಯೋಜಕವಾಗಿದೆ, ಆಡಳಿತ ವ್ಯವಸ್ಥೆ ಗೊತ್ತುಗುರಿಯಿಲ್ಲದೇ ಸಾಗುತ್ತಿದೆ. ಇದಕ್ಕೆಲ್ಲಾ ಕಡಿವಾಣ ಹಾಕಲೇ ಬೇಕು. ನಾನು ಮತ್ತೆ ರಾಜ್ಯ ಪ್ರವಾಸ ಮಾಡಿ, ವಿರೋಧಿಗಳಿಗೆ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ.












Click it and Unblock the Notifications