ಗುರುವಾರ ಬೆಳಿಗ್ಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ
ಬೆಂಗಳೂರು, ಮೇ 16: ಯಡಿಯೂರಪ್ಪ ಅವರು ನಾಳೆ ಬೆಳಿಗ್ಗೆ 9:30 ಕ್ಕೆ ಕರ್ನಾಟಕದ ಮುಖ್ಯಮಮತ್ರಿ ಆಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಅಧಿಕೃತವಾಗಿ ರಾಜ್ಯಪಾಲರ ಕಚೇರಿಯಿಂದ ಯಾವುದೇ ಸೂಚನೆ ಹೊರಬಿದ್ದಿಲ್ಲ.
ಯಡಿಯೂರಪ್ಪ ಅವರು ನಾಳೆ (ಗುರುವಾರ) ಬೆಳಿಗ್ಗೆ 9:30 ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಕರ್ನಾಟಕ ಬಿಜೆಪಿಯ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಆಗಿತ್ತು ಆದರೆ ಈಗ ಅದು ಡಿಲೀಟ್ ಆಗಿದೆ. ಹಾಗಾಗಿ ನಾಳೆ ಯಡಿಯೂರಪ್ಪ ಅವರು ನಾಮಪತ್ರ ಸ್ವೀಕರಿಸುತ್ತಾರೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಅನುಮಾನ ಮೂಡಿದೆ.
ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸಹ ನಾಳೆ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು ಆ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಇದು ಸಹ ಅನುಮಾನ ಮೂಡಿಸಿದೆ.
ಡಿಜಿ-ಐಜಿಪಿ ನೀಲಮಣಿ ರಾಜು ಅವರು ನಾಳೆ ಪೊಲೀಸ್ ಭದ್ರತೆ ಹೆಚ್ಚಿಸಲು ಆದೇಶ ನೀಡಿದ್ದಾರೆ ಎಂದು ಹೇಳಲಾದ ಆದೇಶ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು ಆದರೆ ಇದು ನಕಲಿ ಎಂದು ನೀಲಮಣಿ ರಾಜು ಅವರ ಕಚೇರಿ ಸ್ಪಷ್ಟಪಡಿಸಿದೆ.

ಇತ್ತಕಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಇಂದೂ ಸಹ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಕೇಳಿದ್ದವು, ಆ ನಂತರ ಶಾಸಕರ 'ಕುದುರೆ ವ್ಯಾಪಾರ'ಕ್ಕೆ ಹೆದರಿ ರೆಸಾರ್ಟ್ನತ್ತ ಮುಖ ಮಾಡಿದ್ದರು.












Click it and Unblock the Notifications