ವರ್ಷಾಂತ್ಯ ವಿಶೇಷ : ಮೇ ತಿಂಗಳಿನಲ್ಲಿ ಸುದ್ದಿ ಮಾಡಿದ ವಿದ್ಯಮಾನಗಳು
ಚುನಾವಣೆ ಸರ್ಕಾರಕ್ಕೆ ಮುಖಭಂಗ : ಮೇ 05 : ಮೂರು ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು. ಮೇ 30ರೊಳಗೆ ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಯಾರಿಗೂ ಇಲ್ಲ ರಾಷ್ಟ್ರಕವಿ ಬಿರುದು : ಮೇ 07 : 'ರಾಷ್ಟ್ರಕವಿ ಬಿರುದು ಅರಸೊತ್ತಿಗೆಯ ಸಂಕೇತ. ಅದಕ್ಕೆ ಸಂವಿಧಾನದ ಯಾವುದೇ ಮಾನ್ಯತೆ ಇಲ್ಲ. ಆದ್ದರಿಂದ ಪ್ರಶಸ್ತಿ ನೀಡುವ ಸಂಸ್ಕೃತಿ ಕೊನೆಯಾಗಬೇಕು' ಎಂದು ಕೋ.ಚನ್ನಬಸಪ್ಪ ನೇತೃತ್ವದ ಆಯ್ಕೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿತು. 2014ರ ಡಿಸೆಂಬರ್ನಲ್ಲಿ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಲು ಅರ್ಹರನ್ನು ಗುರುತಿಸುವಂತೆ ಕೋ.ಚನ್ನಬಸಪ್ಪ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿತ್ತು.

ಜಯಲಲಿತಾ ಖುಲಾಸೆಗೊಳಿಸಿದ ಕೋರ್ಟ್ : ಮೇ 11 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ವಿಶೇಷ ಕೋರ್ಟ್ ನೀಡಿರುವ 4 ವರ್ಷದ ಜೈಲು ಶಿಕ್ಷೆ ತೀರ್ಪು ಪ್ರಶ್ನಿಸಿ ಜಯಲಲಿತಾ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಪ್ರಕಟಿಸಿತು. ಜಯಲಲಿತಾ ಅವರನ್ನು ಆರೋಪ ಮುಕ್ತಗೊಳಿಸಿ, ವಿಶೇಷ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿತು. ಹೈಕೋರ್ಟ್ನ ವಿಶೇಷ ಪೀಠದ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರು ತೀರ್ಪು ಪ್ರಕಟಿಸಿದರು. [ಜಯಲಲಿತಾ ಖುಲಾಸೆ]
ಬಾಂಬ್ ಸ್ಫೋಟದ ತನಿಖೆ ಎನ್ಐಎ ಹೆಗಲಿಗೆ : ಮೇ 21 : 2014ರ ಡಿಸೆಂಬರ್ 28ರಂದು ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಬಾಂಬ್ ಸ್ಫೋಟದ ತನಿಖೆಯನ್ನು ಎನ್ಐಎ ಆರಂಭಿಸಿತು. ಬೆಂಗಳೂರು ಪೊಲೀಸರು ನಡೆಸುತ್ತಿದ್ದ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬರದ ಹಿನ್ನಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ವಹಿಸಲಾಯಿತು. ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಬ್ಬರು ಮಹಿಳೆ ಮೃತಪಟ್ಟು ಮೂವರು ಗಾಯಗೊಂಡಿದ್ದರು. [ವರ್ಷಾಂತ್ಯ ವಿಶೇಷ : 2015ರ ಫೆಬ್ರವರಿಯಲ್ಲಿ ಏನಾಯ್ತು?]

ಲಾಟರಿ ಹಗರಣ ಸಿಬಿಐಗೆ : ಮೇ.26 : ಬಹುಕೋಟಿ ರೂಪಾಯಿಯ ಒಂದಂಕಿ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಲಾಟರಿ ಹಗರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಸಿಬಿಐ ತನಿಖೆಗೆ ಪಟ್ಟು ಹಿಡಿದಿದ್ದವು. [ಲಾಟರಿ : ಮಾರ್ಟಿನ್ ಕರಾಳ ಸಾಮ್ರಾಜ್ಯದಲ್ಲಿ ಒಂದು ಸುತ್ತು]
ಮೈಸೂರಿನಲ್ಲಿ ಪಟ್ಟಾಭಿಷೇಕದ ಸಂಭ್ರಮ : ಮೇ 28 : ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷೇಕದ ವಿಧಿವಿಧಾನಗಳು ಮೇ 28ರಂದು ನಡೆದವು. ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಶುಭ ಕರ್ಕಾಟಕ ಲಗ್ನದಲ್ಲಿ 22 ವರ್ಷದ ಯದುವೀರ ಅರಸ್ ಅವರಿಗೆ ಚಿನ್ನದ ಬಾಸಿಂಗ ಕಟ್ಟುವ ಮೂಲಕ ಪಟ್ಟಾಭಿಷೇಕ ನಡೆಸಲಾಯಿತು. ರಾಜ ಪೋಷಕು ತೊಟ್ಟು ಕಂಗೊಳಿಸುತ್ತಿದ್ದ ಯದುವೀರ ಅವರು 9.40ರ ಶುಭ ಕರ್ಕಾಟಕ ಲಗ್ನದಲ್ಲಿ ಬೆಳ್ಳಿಯ ಸಿಂಹಾಸನ ಏರಿದರು. [ಪಟ್ಟಾಭಿಷೇಕ ಹೇಗೆ ನಡೆಯಿತು?]













Click it and Unblock the Notifications