ಕರ್ನಾಟಕದ ವಾದಕ್ಕೆ ಮನ್ನಣೆ ನೀಡುತ್ತದೆಯೇ ಮೇಲುಸ್ತುವಾರಿ ಸಮಿತಿ?
ಬೆಂಗಳೂರು, ಸೆಪ್ಟೆಂಬರ್ 19: ಸೋಮವಾರ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಬಂದೋಬಸ್ತ್ ಹೆಚ್ಚಿಸಿದ್ದಾರೆ. ತಮಿಳುನಾಡು ಹೆಚ್ಚುವರಿ ನೀರಿನ ಬಿಡುಗಡೆ ನಿರೀಕ್ಷೆಯಲ್ಲಿದ್ದರೆ, ಸೆ.20ರ ನಂತರ ನೀರು ಬಿಡುವ ಪ್ರಮಾಣ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕರ್ನಾಟಕ ಇದೆ.
ಸಮಿತಿಯ ಎರಡನೇ ಸಭೆ ಇದಾಗಿದೆ. ಎರಡೂ ರಾಜ್ಯಗಳಿಂದ ಸಮರ್ಪಕ ಮಾಹಿತಿ ಇಲ್ಲದ ಕಾರಣ ಕೇಂದ್ರ ಜಲ ಸಂಪನ್ಮೂಲ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ಸಮಿತಿಯು ಯಾವುದೇ ಗಟ್ಟಿ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮೂಲಗಳ ಪ್ರಕಾರ ಸಮಿತಿಯು ತೀರ್ಪನ್ನು ಮುಂದಕ್ಕೆ ಹಾಕುವ ಹಾಗೂ ಎರಡೂ ರಾಜ್ಯಗಳಿಂದ ಇನ್ನೂ ಹೆಚ್ಚಿನ ಮಾಹಿತಿ ಕೇಳುವ ಸಾಧ್ಯತೆ ಇದೆ.[ಕಾವೇರಿ ವಿವಾದ : ಮಂಡ್ಯದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ]

ಕರ್ನಾಟಕದ ಬೇಡಿಕೆಗಳು ಏನು?
ಕರ್ನಾಟಕ ರಾಜ್ಯವು ತನ್ನ ವಾದವನ್ನು ಪುಷ್ಟೀಕರಿಸುವಂತೆ ಹೊಸ ಮಾಹಿತಿಗಳನ್ನು ನೀಡಿ, ನೀರಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲು ಯತ್ನಿಸುತ್ತದೆ.
ತಜ್ಞರ ಸಮಿತಿಯು ಜಲಾಶಯಗಳಿಗೆ ಭೇಟಿ ನೀಡಿ, ವಾಸ್ತವಾಂಶ ತಿಳಿಯಲಿ ಎಂದು ಅಗ್ರಹಿಸುತ್ತದೆ. ಹೆಚ್ಚಿನ ನೀರು ಬಿಡುವುದರಿಂದ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರದಲ್ಲಿ ಕೃಷಿ ಸಮಸ್ಯೆ ಹೆಚ್ಚಾಗುತ್ತದೆ ಎಂಬ ಅಂಶ ಗಮನಕ್ಕೆ ತರುತ್ತದೆ.
ಸೆಪ್ಟೆಂಬರ್ 17ಕ್ಕೆ ನಾಲ್ಕು ಪ್ರಮುಖ ಜಲಾಶಯಗಳ ಮಟ್ಟ 30 ಟಿಎಂಸಿ ಅಡಿಗಿಂತ ಕಡಿಮೆ ಆಗಿದೆ. 45.05 ಟಿಎಂ ಸಿ ಅಡಿ ಸಾಮರ್ಥ್ಯದ ಕೆಆರ್ ಎಸ್ ನಲ್ಲಿ 8.85 ಟಿಎಂಸಿ ಅಡಿ, 35.76 ಟಿಎಂಸಿ ಅಡಿ ಸಾಮರ್ಥ್ಯದ ಹೇಮಾವತಿಯಲ್ಲಿ 6.82 ಟಿಎಂಸಿ ಅಡಿ ಹಾಗೂ ಹಾರಂಗಿ, ಕಬಿನಿ ಜಲಾಶಯಗಳಲ್ಲಿ ಶೇ 50, ಶೇ 49ರಷ್ಟು ಕೊರತೆಯಿದ್ದು, 4.08 ಟಿಎಂಸಿ ಅಡಿ ಹಾಗೂ 7.75 ಟಿಎಂಸಿ ಅಡಿ ನೀರು ಮಾತ್ರ ಇದೆ.[ಎಲ್ಲರ ಕಣ್ಣು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಮೇಲೆ]

ಸರಕಾರ ಸಿದ್ಧಪಡಿಸಿದ ಮಾಹಿತಿ ಪ್ರಕಾರ ಕಾವೇರಿ ಕೊಳ್ಳದ ಜಲಾಶಯದಲ್ಲಿರುವ ನೀರಿನ ಪ್ರಮಾಣ 48 ಪಟ್ಟಣ, 632 ಹಳ್ಳಿಗಳಿಗೆ ಕುಡಿಯುವ ಉದ್ದೇಶಕ್ಕೆ ಮಾತ್ರ ಸಾಕಾಗುತ್ತದೆ.
ಹೆಚ್ಚಿದೆ ಪೊಲೀಸ್ ಭದ್ರತೆ
ಸುಪ್ರೀಂ ಕೋರ್ಟ್ ಸೆ.20ರವರೆಗೆ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಅದ್ದರಿಂದ ಅಂಥ ಘಟನೆ ಮರುಕಳಿಸದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿಡಲು ಕೇಂದ್ರ ಪಡೆ ಪಹರೆಯನ್ನು ಮುಂದುವರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದವರನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ. "ನಮ್ಮ ಬಳಿ ಹದಿಮೂರು ಕೇಂದ್ರ ತುಕಡಿಗಳಿವೆ. ಜತೆಗೆ ನಗರ ಪೊಲೀಸರಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಯಾರಾದರೂ ಕಾನೂನು ಕೈಗೆ ತೆಗೆದುಕೊಂಡರೆ ತಕ್ಷಣ ಬಂಧಿಸಲಾಗುವುದು ಎಂದು ಹೆಚ್ಚುವರಿ ಕಮಿಷನರ್ ಚರಣ್ ರೆಡ್ಡಿ ತಿಳಿಸಿದ್ದಾರೆ.[ಕಾವೇರಿ ವಿವಾದ : ಸೆ.19ರಂದು ಹೊಸೂರು-ಕರ್ನಾಟಕ ಗಡಿ ಬಂದ್]

ತಮಿಳುನಾಡು ಪೊಲೀಸರಿಗೆ ಪ್ರಶಂಸೆ
ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ 'ಕಾವೇರಿ'ದ ಪರಿಸ್ಥಿತಿ. ಕರ್ನಾಟಕ ರಿಜಿಸ್ಟ್ರೇಷನ್ ನ ವಾಹನ ಕಂಡರೆ ಏನು ಗತಿಯೋ ಎಂದು ಆತಂಕ ಪಡುವಂತಿದ್ದರೆ, ಕರ್ನಾಟಕದ ಸ್ಥಿತಿಯಲ್ಲೂ ಅಂಥ ವ್ಯತ್ಯಾಸವಿಲ್ಲ. ಸನ್ನಿವೇಶ ಹೀಗಿರಬೇಕಾದರೆ, ತಮಿಳುನಾಡು ಪೊಲೀಸರು ಮದುರೈನಿಂದ ಮೂನ್ನೂರೈವತ್ತಕ್ಕೂ ಹೆಚ್ಚು ಕಿಲೋಮೀಟರ್ ದೂರ ಕರ್ನಾಟಕದ ವಾಹನಗಳಿಗೆ ರಕ್ಷಣೆ ನೀಡಿದ್ದು, ಈ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.[ಕಾವೇರಿ ವಿವಾದ : ಪಕ್ಷ, ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ?]
ಬೆಂಗಳೂರಿನ ಜೋಯಲ್ ಬಿಂದು ಎಂಬುವರು ತಮಿಳುನಾಡಿನ ಪೊಲೀಸರ ಸಹಾಯದ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಜತೆಗೆ ಇತರ ಹದಿನೈದು ಕಾರುಗಳಿಗೂ ತಮಿಳುನಾಡು ಪೊಲೀಸರು ರಕ್ಷಣೆ ನೀಡಿದ್ದನ್ನು ಸ್ಮರಿಸಿದ್ದಾರೆ. ಓಣಂಗಾಗಿ ಕೊಲ್ಲಂಗೆ ತೆರಳಿದ್ದ ಅವರು, ಕುಟುಂಬದ ಜತೆಗೆ ವಾಪಸ್ ಬರುವ ದಾರಿಯಲ್ಲಿ ಮದುರೈನಿಂದ ಬೆಂಗಳೂರಿಗೆ ತಲುಪುವವರೆಗೆ ಏಳೆಂಟು ಪೊಲೀಸ್ ವ್ಯಾನ್ ನಲ್ಲಿ ಬಂದ ತಮಿಳುನಾಡು ಪೊಲೀಸರು ರಕ್ಷಣೆ ನೀಡಿದ್ದಾರೆ.












Click it and Unblock the Notifications