ಯಾರನ್ನು ಬೆಂಬಲಿಸುವುದು? ಲಿಂಗಾಯತರಲ್ಲಿ ಮೂಡಿದ ಗೊಂದಲ
ಬೆಂಗಳೂರು, ಏಪ್ರಿಲ್ 13: ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸು ಮಾಡಿದ ಬಳಿಕ ಸಮುದಾಯದೊಳಗೆ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಲಿಂಗಾಯತಯೇತರ ಸಮುದಾಯದ ಕಾಂಗ್ರೆಸ್ ನಾಯಕನ ನೇತೃತ್ವದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದುವರೆಗೂ ಸಮುದಾಯದ ಬಹುಪಾಲು ಭಾಗವು ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿದೆ. ರಾಜ್ಯ ವಿಧಾನಸಭೆ ಚುನಾವಣೆ ಒಂದು ತಿಂಗಳು ಬಾಕಿ ಇರುವಂತೆ, ರಾಜ್ಯದ ಅತಿ ದೊಡ್ಡ ಸಮುದಾಯದಲ್ಲಿ ಸಂದೇಹಗಳು ಮೂಡತೊಡಗಿವೆ.
ಜಾತಿ ಲೆಕ್ಕಾಚಾರದಲ್ಲಿ ಈ ಬಾರಿಯ ಕರ್ನಾಟಕ ಚುನಾವಣೆ ಏಕೆ ಭಿನ್ನ?
ಲಿಂಗಾಯತ ಮತ್ತು ವೀರಶೈವ ಸಮುದಾಯಗಳನ್ನು ಪ್ರತ್ಯೇಕಿಸುವುದನ್ನು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ಮುಖಂಡ ಬಿ.ಎಸ್. ಯಡಿಯೂರಪ್ಪ ವಿರೋಧಿಸಿದ್ದಾರೆ. ವೀರಶೈವ ಮತ್ತು ಲಿಂಗಾಯತ ಒಂದೇ. ಎರಡೂ ಹಿಂದೂ ಧರ್ಮಕ್ಕೆ ಸೇರಿಕೊಂಡಿರುವಂತಹವು ಎಂದು ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.
ಪ್ರಸ್ತುತದ ಬೆಳವಣಿಗೆಗಳ ಕುರಿತು ಅರಿವಿರುವ ಜನರು ಮತ್ತು ಸಮೂಹಗಳು ಸಿದ್ದರಾಮಯ್ಯ ಅವರ ನಡೆಯನ್ನು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಂಡು ವ್ಯಾಖ್ಯಾನಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಗಿಲಾಗಿ ಲಿಂಗಾಯತ ಸಮುದಾಯದ ಕೆಲವು ಮುಖಂಡರು ಚುನಾವಣೆಯಲ್ಲಿ ಕಾಂಗ್ರೆಸ್ಅನ್ನು ಬೆಂಬಲಿಸುವಂತೆ ಕರೆ ನೀಡಿರುವುದು ಜನರಲ್ಲಿ ಮತ್ತು ಚುನಾವಣಾ ತಜ್ಞರಲ್ಲಿ ಕುತೂಹಲ ಮೂಡಿಸಿದೆ.
'ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವುದು ಸಮುದಾಯವನ್ನು ಒಡೆಯುವ ಪ್ರಯತ್ನ. ಅಲ್ಲದೆ, ಹಿಂದುಳಿದ ವರ್ಗಗಳ ನಾಯಕರಾಗಿರುವ (ಅಹಿಂದ) ಸಿದ್ದರಾಮಯ್ಯ ಇದರಿಂದ ಲಿಂಗಾಯತರನ್ನು ಒಲಿಸಿಕೊಳ್ಳುವುದು ಸಾಧ್ಯವಿಲ್ಲ' ಎನ್ನುವುದು ಲಿಂಗಾಯತ ಚಳವಳಿಯ ಐತಿಹಾಸಿಕ ನೆಲೆ ಎನಿಸಿಕೊಂಡಿರುವ ಬಸವಕಲ್ಯಾಣದಲ್ಲಿ ಚಹಾ ಅಂಗಡಿ ನಡೆಸುತ್ತಿರುವ ವ್ಯಕ್ತಿ ಮತ್ತು ಅವರ ಸ್ನೇಹಿತರ ಬಳಗದ ಅಭಿಪ್ರಾಯ.
ಬಸವಣ್ಣನ ಕ್ರಾಂತಿಯೂ, ಮಾ ಶೀಲಾಳ ಭ್ರಾಂತಿಯೂ!
ಪ್ರತ್ಯೇಕ ಧರ್ಮ ಸ್ಥಾಪನೆಗೆ ಒತ್ತಾಯಿಸಿ 2017ರ ಜುಲೈನಲ್ಲಿ ಮೊದಲ ಸಮಾವೇಶ ನಡೆದ ಬೀದರ್ಗೆ ಬಂದರೆ, ನಗರದಲ್ಲಿ ರೆಸ್ಟೊರೆಂಟ್ ನಡೆಸುವ ಮಧ್ಯಮ ವಯಸ್ಕರೊಬ್ಬರು ಲಿಂಗಾಯತ ಚಳವಳಿಯಲ್ಲಿನ ಕೊರತೆಗಳತ್ತ ಬೊಟ್ಟು ಮಾಡುತ್ತಾರೆ.
'ನಗರದಲ್ಲಿ ನಡೆದ ಲಿಂಗಾಯತ ಸಮಾವೇಶ ರಾಜಕೀಯ ಪ್ರೇರಿತವೇ ಹೊರತು ಆ ಕ್ಷಣದಲ್ಲಿ ಜನಸಾಮಾನ್ಯರಿಂದ ಶುರುವಾದದ್ದಲ್ಲ. ಈ ವಿವಾದವು ಲಿಂಗಾಯತ ಧರ್ಮಗುರುಗಳು ಮತ್ತು ರಾಜಕಾರಣಿಗಳ ಸೃಷ್ಟಿ' ಎಂದು ಅವರು ದೂರುತ್ತಾರೆ.
ಒಂದು ಚಳವಳಿಗೆ ಸಾರ್ವಜನಿಕ ಬೆಂಬಲ ಹೇಗೆ ಬೆಂಬಲ ವ್ಯಕ್ತವಾಗುತ್ತದೆ ಎಂಬುದಕ್ಕೆ ಅವರು ಮಂಡಲ್ ಆಯೋಗದ ಚಳವಳಿಯನ್ನು ನೆನಪಿಸಿಕೊಳ್ಳುತ್ತಾರೆ.
ಕಾಂಗ್ರೆಸ್ಗೆ ಮತ ಹಾಕಿ ಎಂಬ ಸ್ವಾಮೀಜಿಗಳ ಕರೆಯ ಕುರಿತು ಪ್ರಶ್ನೆ ಮುಂದಿಟ್ಟರೆ, 'ಅವರ ಅನುಯಾಯಿಗಳು ಮತ್ತು ಶಿಷ್ಯರು ಮಾತ್ರ ಅದನ್ನು ಅನುಸರಿಸುತ್ತಾರೆ, ಮತದಾರರಲ್ಲ' ಎಂದು ಉತ್ತರಿಸುತ್ತಾರೆ.
ಲಿಂಗಾಯತ ಮತ್ತು ವೀರಶೈವ ಸಮುದಾಯಗಳ ನಡುವಣ ಸಾಂಸ್ಕೃತಿಕ ವಿಭಿನ್ನತೆಗಳ ಬಗ್ಗೆ ಹಾಗೂ ಹಿಂದೂ ಧರ್ಮ ಮತ್ತು ಲಿಂಗಾಯತ ಸಮುದಾಯದ ಕೆಲವು ವ್ಯತ್ಯಾಸಗಳ ಬಗ್ಗೆ ಸಮುದಾಯದಲ್ಲಿ ಗೊಂದಲ ಸೃಷ್ಟಿಯಾಗಿರುವುದು ನಿಜ.
ಸಿದ್ದು ಪ್ರತ್ಯೇಕ ಲಿಂಗಾಯತ ತಂತ್ರಕ್ಕೆ ಅಮಿತ್ ಶಾ ವೀರಶೈವ ಪ್ರತಿತಂತ್ರ?
ಪ್ರತ್ಯೇಕ ಧರ್ಮದ ವಿವಾದ ಈ ಚುನಾವಣೆಯಲ್ಲಿ ತಕ್ಷಣ ರಾಜಕೀಯ ಲಾಭ ಉಂಟು ಮಾಡಲಿದೆ ಎಂದು ನಿರೀಕ್ಷಿಸುವುದು ಆತುರವಾಗುತ್ತದೆ. ಕಳೆದ ಚುನಾವಣೆಗಳಂತೆಯೇ ಈ ಬಾರಿ ಕೂಡ ಚುನಾವಣೆ ಗೆಲ್ಲಬಲ್ಲ ಅಭ್ಯರ್ಥಿಯ ಸಾಮರ್ಥ್ಯ, ಜಾತಿ, ಹಣದ ಶಕ್ತಿಯೇ ನಿರ್ಣಾಯಕವಾಗಲಿದೆ.
ಜನರು ಎದುರಿಸುತ್ತಿರುವ ಪ್ರಸ್ತುತದ ಸನ್ನಿವೇಶದ ಕುರಿತು ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಲ್ಲಿ ಏಕೆ ಗೊಂದಲ ಇದೆ ಎಂಬುದನ್ನು ಧಾರವಾಡದ ರಾಜ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಹರೀಶ್ ಕುಮಾರ್ ವಿವರಿಸುತ್ತಾರೆ.
'ಬೌದ್ಧಿಕ ವಲಯದಲ್ಲಿ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಆದರೆ ತಳಮಟ್ಟದಲ್ಲಿ ವ್ಯಕ್ತಿಯು ಲಿಂಗಾಯತನೇ ಅಥವಾ ವೀರಶೈವನೇ ಎಂಬ ಬಗ್ಗೆಯೇ ಗೊಂದಲಗಳು ಉಳಿದುಕೊಂಡಿವೆ. ಹೆಚ್ಚಿನ ಜನರು ತಾವು ಲಿಂಗಾಯತರು ಎಂದು ಹೇಳಿಕೊಳ್ಳುತ್ತಾರೆ' ಎನ್ನುತ್ತಾರೆ ಅವರು.
ಪ್ರತ್ಯೇಕ ಧರ್ಮದ ವಿವಾದವು ಚುನಾವಣಾ ವಿಷಯವಾಗುವುದರ ಬಗ್ಗೆ ವಿಶ್ಲೇಷಿಸುವ ಅವರು, 'ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾಪನೆಯ ಕಾಂಗ್ರೆಸ್ ಉದ್ದೇಶ ರಾಜಕೀಯ ಲಾಭದ ಗುರಿಯಷ್ಟೇ ಅಲ್ಲ, ಅದು ಸ್ವತಃ ಅಭಿಪ್ರಾಯಗಳನ್ನು ಪರಿವರ್ತಿಸುತ್ತದೆ ಎಂಬುದೂ ಆಗಿದೆ' ಎನ್ನುತ್ತಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಈ ವಿವಾದ ಈಗಲೂ ಬೌದ್ಧಿಕ ಚರ್ಚೆಯಾಗಿಯೇ ಉಳಿದಿದೆ. ಉದಾಹರಣೆಗೆ, ಜೈನ್ ಆಗಲಿ ಅಥವಾ ಸಿಖ್ ಆಗಲಿ, ಪ್ರತಿ ಧರ್ಮವೂ ತಮ್ಮ ಚಿಂತನಾ ಲಹರಿಯಲ್ಲಿ ತಮ್ಮನ್ನು ಪ್ರತ್ಯೇಕಿಸಿಕೊಂಡಿರುತ್ತಾರೆ. ಬಳಿಕ, ಆಲೋಚನೆಗಳು ಪ್ರಬುದ್ಧತೆ ಪಡೆದು, ಬೆಳೆದು, ಒಂದು ಆಕಾರ ಪಡೆದು ಕೊನೆಗೆ ಬಲಗೊಳ್ಳುವ ಪ್ರಕ್ರಿಯೆ ನಡೆಯುತ್ತದೆ ಎಂದು ಅಭಿಪ್ರಾಯಪಡುತ್ತಾರೆ.
'ಇದು ರಾಜಕೀಯ ನಿರ್ಧಾರ ಎನ್ನುವುದು ಎಲ್ಲರಿಗೂ ತಿಳಿದಿದೆ. ಅವರು (ಕಾಂಗ್ರೆಸ್) ಸಮುದಾಯಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಗಡಿಬಿಡಿಯ ಕ್ರಮ ತೆಗೆದುಕೊಂಡಿದೆ ಎನ್ನುವುದು ನನಗೆ ವೈಯಕ್ತಿಕವಾಗಿ ಅನಿಸುತ್ತಿದೆ' ಎಂದು ಅವರು ಹೇಳುತ್ತಾರೆ.
99 ಉಪಜಾತಿಗಳನ್ನು ಒಳಗೊಂಡಿರುವ ಲಿಂಗಾಯತ ಸಮುದಾಯ ಪ್ರತ್ಯೇಕ ಧರ್ಮ ವಿಚಾರದ ಕೃತಜ್ಞತೆಗಾಗಿ ಕಾಂಗ್ರೆಸ್ ಪರವಾಗಿ ಹೋಗಲಿದೆಯೇ? ಸಮುದಾಯವನ್ನು ಒಡೆಯುವ ತಂತ್ರವೆಂದು ಅದನ್ನು ಪರಿಗಣಿಸಲಿದ್ದಾರೆಯೇ? ಅಥವಾ ಲಿಂಗಾಯತರಲ್ಲಿನ ಗೊಂದಲಗಳು ಕಾಂಗ್ರೆಸ್ಗೆ ಲಾಭವಾಗಲಿದೆಯೇ? ಸಿದ್ದರಾಮಯ್ಯ ಅವರು ನಡೆಸಿರುವ ಲಿಂಗಾಯತ ಧರ್ಮದ ದೊಡ್ಡ ಆಟದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಚುನಾವಣಾ ಫಲಿತಾಂಶ ಮಾತ್ರವೇ ಬಹಿರಂಗಪಡಿಸಲಿದೆ.