ಜೆಡಿಎಸ್ ಪಕ್ಷ ಕೊಡಗಿನಲ್ಲಿ ಅಸ್ತಿತ್ವ ಕಾಣದಿರಲು ಕಾರಣವೇನು?
ಬೆಂಗಳೂರು, ನವೆಂಬರ್ 14; ಕೊಡಗಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಗೆ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ಸಂಘಟನೆಗೊಳ್ಳುವಲ್ಲಿ ವಿಫಲವಾಗಿರುವುದು ಎದ್ದು ಕಾಣಿಸುತ್ತಿದೆ. ಜನತಾದಳ ಇಬ್ಭಾಗವಾಗುವ ಮುನ್ನ ಜನತಾದಳದ ಅಬ್ಬರ ಜೋರಾಗಿಯೇ ಇತ್ತು. ಎಂ. ಸಿ. ನಾಣಯ್ಯ ಅವರ ನಾಯಕತ್ವದಲ್ಲಿ ಒಂದಷ್ಟು ಘಟಾನುಘಟಿ ನಾಯಕರು ಪಕ್ಷವನ್ನು ಕಟ್ಟುವಲ್ಲಿ ಯಶಸ್ಸು ಕಂಡಿದ್ದರು.
ಜನತಾದಳವನ್ನು ಪ್ರತಿನಿಧಿಸುತ್ತಿದ್ದ ಎಂ. ಸಿ. ನಾಣಯ್ಯ ಅವರನ್ನು ಪಕ್ಷವು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ವಿರೋಧ ಪಕ್ಷದ ನಾಯಕ ಸ್ಥಾನ ನೀಡಿತ್ತು. ಅವರ ಹಿಂದೆ ಟಿ. ಪಿ. ರಮೇಶ್, ಶಾಂತೂ ಅಪ್ಪಯ್ಯ ಸೇರಿದಂತೆ ಹಲವು ನಾಯಕರು ಕಾಣಿಸಿಕೊಂಡಿದ್ದರು. ಜಿಲ್ಲೆಯಲ್ಲಿ ಜನತಾದಳ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡುವಷ್ಟು ಮಟ್ಟಿಗೆ ಜನತಾದಳ ಅಸ್ತಿತ್ವ ಕಂಡು ಕೊಂಡಿತ್ತು.
ಆದರೆ ಜನತಾದಳ ಇಬ್ಭಾಗವಾಗಿ ಜೆಡಿ(ಯು) ಮತ್ತು ಜೆಡಿ(ಎಸ್) ಆಗುತ್ತಿದ್ದಂತೆಯೇ ಕೊಡಗಿನ ನಾಯಕರು ಅದರಲ್ಲೂ ಜನತಾದಳದಲ್ಲಿ ಪ್ರಬಲ ನಾಯಕರಾಗಿದ್ದ ಎಂ. ಸಿ. ನಾಣಯ್ಯ ಸೇರಿದಂತೆ ಕೆಲವರು ಎರಡರ ಕಡೆಗೂ ಒಲವು ತೋರದೆ ತಟಸ್ಥರಾಗಿ ಉಳಿದು ಬಿಟ್ಟರು. ಕೆಲವು ಕಾಲ ಕೊಡಗು ದಳವಾಗಿಯೇ ಕಾಲ ತಳ್ಳಿದರು. ತದನಂತರ ಕೆಲವರು ಬೇರೆ, ಬೇರೆ ಪಕ್ಷಕ್ಕೆ ವಲಸೆ ಹೋದರು. ಅಲ್ಲಿಗೆ ಕೊಡಗಿನಲ್ಲಿ ಜನತಾದಳದ ಅಧ್ಯಾಯ ಮುಗಿದು ಹೋಯಿತು. ಒಂದು ವೇಳೆ ಆ ನಾಯಕರು ಜೆಡಿಎಸ್ ಜತೆಗೆ ನಿಂತಿದ್ದರೆ ಬಹುಶಃ ಕೊಡಗಿನಲ್ಲಿ ಇವತ್ತು ಜೆಡಿಎಸ್ಗೆ ಅಸ್ತಿತ್ವ ಸಿಗುತ್ತಿತ್ತೇನೋ?.

ಕೊಡಗಿನಲ್ಲಿ ಜೆಡಿಎಸ್ ಪ್ರವರ್ಧ ಮಾನಕ್ಕೆ ಬರಲಿಲ್ಲ
ಆ ನಂತರ ಬಿಜೆಪಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿ ಶಾಸಕರೂ ಆಗಿದ್ದ ದಂಬೆಕೋಡಿ ಮಾದಪ್ಪ ಅವರು ಬಿಜೆಪಿಯನ್ನು ಬಿಟ್ಟು ಜೆಡಿಎಸ್ ಸೇರಿದರು. ಅದೇ ಸಮಯದಲ್ಲಿ ಎ. ಕೆ. ಸುಬ್ಬಯ್ಯ ಕೂಡ ಜೆಡಿಎಸ್ನಲ್ಲಿದ್ದರು. ಆದರೆ ತದ ನಂತರದ ಬೆಳವಣಿಗೆಯಲ್ಲಿ ಜೆಡಿಎಸ್ ಬಿಜೆಪಿಯ ಪ್ರಾಬಲ್ಯದ ನಡುವೆ ಬದಿಗೆ ಸರಿದು ಹೋಯಿತು. ಕಳೆದ ಕೆಲವು ವರ್ಷಗಳಿಂದ ಸಂಕೇತ್ ಪೂವಯ್ಯ ಇತ್ತೀಚೆಗೆ ನಾಪಂಡ ಮುತ್ತಪ್ಪ ಜೆಡಿಎಸ್ನಲ್ಲಿ ಪ್ರಬಲ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುಶಃ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದರೂ ಅಚ್ಚರಿಯಿಲ್ಲ.

ಪಕ್ಷ ಸಂಘಟನೆ ಕೊರತೆ ಕಾಡುತ್ತಿದೆ
ಕೊಡಗಿನ ಮಟ್ಟಿಗೆ ಹೇಳುವುದಾದರೆ ಜೆಡಿಎಸ್ ಪಕ್ಷ ಸಂಘಟನೆಯಾಗಲೇ ಇಲ್ಲ ಎನ್ನಬೇಕು. ಜತೆಗೆ ಇಲ್ಲಿ ಪ್ರಬಲ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಹುಟ್ಟುಹಾಕುವುದು ಕಷ್ಟವಾಗಿದೆ. ಒಂದು ಕಾಲದಲ್ಲಿ ಪ್ರಾಬಲ್ಯ ಸಾಧಿಸಿದ್ದ ಕಾಂಗ್ರೆಸ್ ನಲ್ಲಿ ಒಂದಷ್ಟು ಘಟಾನುಘಟಿ ನಾಯಕರು ಇದ್ದರೂ ಇವತ್ತು ಬಿಜೆಪಿ ಮುಂದೆ ಮಂಡಿಯೂರುವಂತಾಗಿದೆ. ಹೀಗಿರುವಾಗ ಇನ್ನು ಆರು ತಿಂಗಳಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಂಘಟಿಸಿ ಗೆಲುವು ಸಾಧಿಸುವುದು ಜೆಡಿಎಸ್ಗೆ ಸುಲಭದ ಕೆಲಸವೇನಲ್ಲ. ಆದರೂ ನಾಯಕರು ಆ ನಿಟ್ಟಿನಲ್ಲಿ ತಲ್ಲೀನರಾಗಿದ್ದಾರೆ ಎನ್ನುವುದು ಸಂತಸದ ವಿಷಯವಾಗಿದೆ.

ಕಾಂಗ್ರೆಸ್ ನಲ್ಲಿರುವ ಎಂ. ಸಿ. ನಾಣಯ್ಯ
ಹಾಗೆ ನೋಡಿದರೆ ಒಂದು ಕಾಲದಲ್ಲಿ ಜನತಾದಳದ ಪ್ರಬಲ ನಾಯಕರಾಗಿದ್ದ ಎಂ. ಸಿ. ನಾಣಯ್ಯ ಅವರು ಈಗ ಕಾಂಗ್ರೆಸ್ನಲ್ಲಿದ್ದಾರೆ. ಅವತ್ತು ಜನತಾದಳದಲ್ಲಿದ್ದ ಪ್ರಭಾವಿ ನಾಯಕನಾಗಿ ಬೆಳೆಯುವ ಎಲ್ಲ ಗುಣಗಳನ್ನು ಹೊಂದಿದ್ದ ಶಶಿಧರ್ ಕಾಂಗ್ರೆಸ್ಗೆ ಬಂದಿದ್ದಾರೆ. ಆದರೆ ದುರಂತ ಏನೆಂದರೆ ಜಿಲ್ಲೆಗೆ ನಾಯಕನಾಗಿ ಪಕ್ಷವನ್ನು ಮುಂದಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದ ಶಶಿಧರ್ ಗೆ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿ ಕೈತೊಳೆದು ಕೊಂಡಿದೆ. ಅದು ಆಚೆಗಿಟ್ಟು ಜೆಡಿಎಸ್ ಬಗ್ಗೆ ಹೇಳುವುದಾದರೆ ಬಹು ಮುಖ್ಯವಾಗಿ ಕಾರ್ಯಕರ್ತರ ಕೊರತೆ ಎದ್ದು ಕಾಣಿಸುತ್ತಿದೆ.

ಪಕ್ಷಕ್ಕೆ ಆದ್ಯತೆ ನೀಡುತ್ತಿದ್ದಾರಾ ಮತದಾರರು?
ಇಲ್ಲಿ ದಕ್ಷಿಣ ಕನ್ನಡದಿಂದ ಬಂದು ನೆಲೆನಿಂತ ಅರೆಭಾಷೆ ಗೌಡ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಮಡಿಕೇರಿ ತಾಲೂಕಿನಲ್ಲಿ ಪ್ರಾಬಲ್ಯ ಜಾಸ್ತಿಯಿದೆ. ಆದರೆ ಇವರು ಜೆಡಿಎಸ್ ಅನ್ನು ಬೆಂಬಲಿಸುವ ಮನಸ್ಸನ್ನು ಅವತ್ತಿನಿಂದಲೂ ಮಾಡಿಲ್ಲ. ಮಡಿಕೇರಿ ತಾಲೂಕಿನಲ್ಲಿ ಕೊಡವೇತರರು ಅದರಲ್ಲೂ ಅರೆಭಾಷೆ ಗೌಡ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಇಲ್ಲಿ ಕೊಡವ ಸಮುದಾಯದ ಅಪ್ಪಚ್ಚು ರಂಜನ್ ಬಿಜೆಪಿಯನ್ನು ಪ್ರತಿನಿಧಿಸಿದರೆ, ವೀರಾಜಪೇಟೆ ತಾಲೂಕಿನಲ್ಲಿ ಕೊಡವ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಆದರೆ ಇಲ್ಲಿ ಗೌಡ ಸಮುದಾಯದ ಕೆ. ಜಿ. ಬೋಪಯ್ಯ ಪ್ರತಿನಿಧಿಸುತ್ತಿದ್ದಾರೆ. ಆದರೆ ಮುಖ್ಯವಾಗಿ ಜಾತಿಗಿಂತ ಹೆಚ್ಚಾಗಿ ಪಕ್ಷವನ್ನು ನೋಡಿ ಜನ ಮತ ಚಲಾಯಿಸುತ್ತಿದ್ದಾರೆ ಎಂಬುದಕ್ಕೆ ಇಲ್ಲಿನ ಶಾಸಕರ ಸತತ ಗೆಲುವು ಸಾಕ್ಷಿಯಾಗಿದೆ.

ಈ ಬಾರಿಯ ಚುನಾವಣೆ ಜೆಡಿಎಸ್ಗೆ ಬಲು ಕಠಿಣ
ಸದ್ಯದ ಮಟ್ಟಿಗೆ ಕೊಡಗಿನಲ್ಲಿ ಜಾತಿ ರಾಜಕೀಯ ನಡೆಯೋದಿಲ್ಲ ಎಂಬುದು ಸಾಬೀತಾಗಿದೆ. ಹೀಗಿರುವಾಗ ಜೆಡಿಎಸ್ ಕೊಡಗಿನಲ್ಲಿ ಯಾವ ರೀತಿಯಲ್ಲಿ ಚುನಾವಣೆಗೆ ಹೋಗಲಿದೆ. ಇಲ್ಲಿ ಯಾವ ತಂತ್ರಗಳನ್ನು ಮಾಡಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ. ಹಳೆ ಮೈಸೂರು ವ್ಯಾಪ್ತಿಯಲ್ಲಿ ಪ್ರಾಬಲ್ಯ ಸಾಧಿಸಿರುವ ಜೆಡಿಎಸ್ ಅದರ ಸುತ್ತಮುತ್ತಲಿನ ಜಿಲ್ಲೆಗಳಿಗೆ ವಿಸ್ತರಿಸದೆ ಹೋದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗಿ ಬರಬಹುದು. ಈ ಬಾರಿಯ ಚುನಾವಣೆ ಜೆಡಿಎಸ್ಗೆ ಬಲು ಕಠಿಣವಾಗಲಿದೆ. ಕಾರಣ ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಅನ್ನು ಟಾರ್ಗೆಟ್ ಮಾಡಿವೆ. ಜತೆಗೆ ಆಪರೇಷನ್ ಕಮಲದ ಭೀತಿಯೂ ಜೆಡಿಎಸ್ ಅನ್ನು ಕಾಡುತ್ತಿದೆ.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಕೊಡಗು ಸೇರಿದಂತೆ ಕರಾವಳಿ, ಮಲೆನಾಡಿನ ಕಡೆಗೆ ದಂಡೆತ್ತಿಹೋಗಿ ಅಲ್ಲಿ ಗೆಲುವು ಸಾಧಿಸುವುದು ಎಷ್ಟು ಮುಖ್ಯವಾಗಿದೆಯೋ ಅದಕ್ಕಿಂತ ಹೆಚ್ಚಿನ ಸವಾಲು ಈಗಾಗಲೇ ಪ್ರಾಬಲ್ಯ ಸಾಧಿಸಿರುವ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದಾಗಿದೆ. ಚುನಾವಣೆಗೆ ದಿನಗಳು ಹತ್ತಿರವಾದಂತೆ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ಆಗುವುದು ಖಚಿತ. ಆದರೆ ಕೊಡಗಿನ ಮಟ್ಟಿಗೆ ಹೊಸ ಬೆಳವಣಿಗಳು ಆಗುತ್ತಾ ಎಂಬುದೇ ಕುತೂಹಲವಾಗಿದೆ.












Click it and Unblock the Notifications