ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ? ಬಿಎಸ್ವೈ ಸ್ಪಷ್ಟನೆ
ಬೆಂಗಳೂರು/ರಾಯಚೂರು, ಆಗಸ್ಟ್ 11: ಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಹೈಕಮಾಂಡ್ ಬಲವಂತದಿಂದ ಕೆಳಗಿಳಿಸಿದರು ಎನ್ನುವ ಸುದ್ದಿಯ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆಯನ್ನು ನೀಡಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಪಕ್ಷದ ಶಾಸಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಯಡಿಯೂರಪ್ಪ ಅಕ್ಷರಶಃ ಕಣ್ಣೀರು ಹಾಕಿದ್ದರು. ಹಿರಿಯ ಜೀವಕ್ಕೆ ಬಿಜೆಪಿ ವರಿಷ್ಠರು ನೋವುಂಟು ಮಾಡಿದರು ಎಂದು ವಿರೋಧ ಪಕ್ಷದ ಮುಖಂಡರೂ ಆ ವೇಳೆ ಬೇಸರವನ್ನು ವ್ಯಕ್ತ ಪಡಿಸಿದ್ದರು.
ತಮ್ಮನ್ನು ವರಿಷ್ಠರು ಕಡೆಗಣಿಸುತ್ತಿದ್ದಾರೆ ಎನ್ನುವ ಸುದ್ದಿಗೂ ಸ್ಪಷ್ಟನೆಯನ್ನು ನೀಡಿದ ಬಿಎಸ್ವೈ, ನನಗೆ ಪಕ್ಷದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತಿದೆ. ಕಾಂಗ್ರೆಸ್ ಅವರು ವೃಥಾ ಆರೋಪವನ್ನು ಮಾಡುತ್ತಿದ್ದಾರೆ.
ಮಂತ್ರಾಲಯ ರಾಘವೇಂದ್ರಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆಯಲು ಯಡಿಯೂರಪ್ಪನವರು ಕುಟುಂಬ ಸಮೇತ ಅಲ್ಲಿಗೆ ತೆರಳಿದ್ದರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನನಗೆ ಯಾವುದೇ ಒತ್ತಡವಿರಲಿಲ್ಲ ಎಂದು ಬಿಎಸೈ ಸ್ಪಷ್ಟ ಪಡಿಸಿದ್ದಾರೆ.

ನಾನೇ ಸ್ವಇಚ್ಚೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು
ಯಡಿಯೂರಪ್ಪನವರು ದೊಡ್ಡ ನಾಯಕರು, ಆದರೆ ಅವರನ್ನು ಅವಮಾನ ಮಾಡಿ ಸಿಎಂ ಸ್ಥಾನದಿಂದ ಕೆಳಗಿಳಿಸಲಾಯಿತಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಯಡಿಯೂರಪ್ಪ, "ನಾನು ಅತ್ಯಂತ ಸ್ಪಷ್ಟವಾಗಿ ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದೇನೆ, ನಾನೇ ಸ್ವಇಚ್ಚೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ"ಎಂದು ಯಡಿಯೂರಪ್ಪನವರು ಸ್ಪಷ್ಟನೆಯನ್ನು ನೀಡಿದರು.

ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು
"ಬೇರೆಯವರಿಗೆ ಅವಕಾಶ ಸಿಗಬೇಕು ಎನ್ನುವ ಕಾರಣಕ್ಕಾಗಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅಂದಿನಿಂದ ಪಕ್ಷದ ಪರವಾಗಿ ಕೆಲಸ ಮಾಡುವುದನ್ನು ಮುಂದುವರಿಸಿದ್ದೇನೆ. ಒತ್ತಾಯ ಮಾಡಿ ನನ್ನನ್ನು ಹುದ್ದೆಯಿಂದ ಇಳಿಸಲಾಯಿತು ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು. ಇದರಲ್ಲಿ ಯಾವುದೇ ಒತ್ತಡ, ಒತ್ತಾಯ ಕೆಲಸ ಮಾಡಿಲ್ಲ"ಎಂದು ಯಡಿಯೂರಪ್ಪ ಹೇಳಿದ್ದಾರೆ.

ನನಗೆ ಸಿಕ್ಕಿರುವ ಸ್ಥಾನಮಾನ ಗೌರವ ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ
"ಯಡಿಯೂರಪ್ಪನವರನ್ನು ನಿರ್ಲ್ಯಕ್ಷ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ. ಅದೆಲ್ಲಾ ಊಹಾಪೋಹ ಸುದ್ದಿಗಳು, ಇದಕ್ಕೆ ಯಾವುದೇ ಬೆಲೆ ಕೊಡುವ ಅವಶ್ಯಕತೆಯಿಲ್ಲ. ನನಗೆ ಸಿಕ್ಕಿರುವ ಸ್ಥಾನಮಾನ ಗೌರವ ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ. ಪಕ್ಷ ಎಲ್ಲಾ ರೀತಿಯ ಜವಾಬ್ದಾರಿಯನ್ನು ನನಗೆ ನೀಡಿದೆ. ಯಾವುದೇ ಕಾರಣಕ್ಕೂ ನನಗೆ ಪಕ್ಷದಿಂದ ತೊಂದರೆಯಾಗಿಲ್ಲ"ಎಂದು ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ.

ಋಣ ತೀರಿಸುವ ಕರ್ತವ್ಯ ನನ್ನ ಮೇಲಿದೆ, ಯಡಿಯೂರಪ್ಪ
"ನನಗೆ ಎಲ್ಲಾ ರೀತಿಯ ಸಹಕಾರವನ್ನು ನನ್ನ ಪಕ್ಷ ಮತ್ತು ಕಾರ್ಯಕರ್ತರು ಕೊಟ್ಟಿದ್ದಾರೆ. ಹಾಗಾಗಿ, ಋಣ ತೀರಿಸುವ ಕರ್ತವ್ಯ ನನ್ನ ಮೇಲಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ, ಪ್ರಾಮಾಣಿಕವಾಗಿ ಆ ಕೆಲಸವನ್ನು ನಾನು ಮಾಡುತ್ತೇನೆ. ಆ ಕೆಲಸವನ್ನು ಕಾಯಾವಾಚಾ ಮನಸ್ಸಿನಿಂದ ನಿರ್ವಹಿಸುತ್ತೇನೆ"ಎಂದು ಯಡಿಯೂರಪ್ಪನವರು ಎದ್ದಿರುವ ಸುದ್ದಿಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.












Click it and Unblock the Notifications