ಗುಜರಾತ್ ಇವಿಎಂನಲ್ಲಿ ರಾಜ್ಯ ಚುನಾವಣೆ ಯಾಕೆ? ಗೌಡರ ಸಂಶಯ
ಹಾಸನ, ಮಾ 18: ಇವಿಎಂ (ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಮೇಲಿನ ಸಂಶಯ ಕಮ್ಮಿಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಬ್ಯಾಲೆಟ್ ಪೇಪರ್ ನಲ್ಲೇ ಚುನಾವಣೆ ನಡೆಸುವುದು ಸೂಕ್ತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿಕೆಯ ನಡುವೆ, ಇವಿಎಂ ಮೇಲೆ ಮಾಜಿ ಪ್ರಧಾನಿ ದೇವೇಗೌಡರು ಸಂಶಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಗೌಡ್ರು, ಗುಜರಾತ್ ಚುನಾವಣೆ ಮುಗಿದು ಇನ್ನೂ ಮೂರು ತಿಂಗಳು ಮುಗಿದಿಲ್ಲ, ಆಗಲೇ, ಅಲ್ಲಿ ಬಳಸಲಾದ ಇವಿಎಂಗಳನ್ನು ರಾಜ್ಯ ಚುನಾವಣೆಗೆ ಕಳುಹಿಸಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗೌಡ್ರು ಹೇಳಿದ್ದಾರೆ.
ಚುನಾವಣಾ ಆಯೋಗದ ಕಾನೂನಿನ ಪ್ರಕಾರ ಬೇರೊಂದು ರಾಜ್ಯಗಳಲ್ಲಿ ಬಳಸಲಾದ ಇವಿಎಂ ಅನ್ನು ಮೂರು ತಿಂಗಳಿನೊಳಗೆ ಇನ್ನೊಂದು ರಾಜ್ಯದ ಚುನಾವಣೆಗೆ ಬಳಸುವಂತಿಲ್ಲ. ಆದರೂ, ಚುನಾವಣಾ ಆಯೋಗ ರಾಜ್ಯದ ಚುನಾವಣೆಗೆ ಈಗಾಗಲೇ ಇವಿಎಂ ಅನ್ನು ಕರ್ನಾಟಕಕ್ಕೆ ಕಳುಹಿಸಿದೆ.

ಉತ್ತರಪ್ರದೇಶದಲ್ಲಿ ನಡೆದ ಚುನಾವಣೆಯ ನಂತರ ಇವಿಎಂ ಮೇಲೆ ಸಂಶಯ ಹೆಚ್ಚಾಗಲಾರಂಭಿಸಿತು. ಗುಜರಾತ್, ಹಿಮಾಚಲ ಪ್ರದೇಶದ ಇಲೆಕ್ಷನ್ ನಂತರ ಅದು ಇನ್ನೂ ಹೆಚ್ಚಾಯಿತು. ಚುನಾವಣಾ ಆಯೋಗ ಜನಸಾಮಾನ್ಯರಲ್ಲಿ ಮತ್ತು ರಾಜಕೀಯ ಮುಖಂಡರಿಗೆ ಇರುವ ಸಂಶಯವನ್ನು ದೂರಮಾಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಗೌಡ್ರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಯಾವುದೇ ಒಂದು ಅಸೆಂಬ್ಲಿ ಕ್ಷೇತ್ರದ ನಲವತ್ತು ಬೂತ್ ಗಳಲ್ಲಿನ ಇವಿಎಂನಲ್ಲಿ ಒಂದು ಪಕ್ಷದ ಪರವಾಗಿ ಮತಬೀಳುವ ಹಾಗೆ ಮಾಡಿದರೆ ಸಾಕಲ್ಲವೇ, ಅದು ಇಡೀ ಕ್ಷೇತ್ರದ ರಾಜಕೀಯ ಚಿತ್ರಣವನ್ನೇ ಬದಲಿಸಿ ಬಿಡುತ್ತದೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡರು ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಮತ್ತು ವೈಎಸ್ಆರ್ ಪಕ್ಷ ಜಂಟಿಯಾಗಿ ಮಂಡಿಸಲಿರುವ ಅವಿಶ್ವಾಸ ಗೊತ್ತುವಳಿಯಿಂದ ನರೇಂದ್ರ ಮೋದಿ ಸರಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಎನ್ಡಿಎ ಸರಕಾರಕ್ಕೆ ಅಗತ್ಯವಾದ ಬಹುಮತವಿದೆ, ಆದರೆ, ಬಿಜೆಪಿ ವಿರುದ್ದ ಧ್ವನಿಎತ್ತಲು ಇದು ಸಹಕಾರಿಯಾಗಬಹುದು ಎಂದು ಗೌಡ್ರು ಹೇಳಿದ್ದಾರೆ.












Click it and Unblock the Notifications