ದರ್ಶನ್-ಸುದೀಪ್ಗೆ ಸಿಎಂ ಆಗುವ ಕೆಪಾಸಿಟಿ ಇದೆ, ಯಶ್ ರಾಜಕೀಯಕ್ಕೆ ಬರಲ್ಲ: ನಿರ್ಮಾಪಕ ಕೆ.ಮಂಜು
ತಮಿಳುನಾಡಿನಲ್ಲಿ ನಟ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಅಕ್ಕಪಕ್ಕದ ರಾಜ್ಯಗಳಲ್ಲೂ ಅದರ ಸಂಚಲನ ಶುರುವಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ವಿಜಯ್ ಅವರಂತೆ ಯಾವ ನಟನಿಗೆ ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವ ಸಾಮರ್ಥ್ಯವಿದೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿವೆ. ಈ ಕುರಿತು ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಕೆ. ಮಂಜು ಅವರು ಮಾತನಾಡಿದ್ದು, ಕನ್ನಡದ ಮೂವರು ನಟರ ಹೆಸರನ್ನು ಸೂಚಿಸಿದ್ದಾರೆ.
ಜನ ಬದಲಾವಣೆ ಬಯಸುತ್ತಿದ್ದಾರೆ
ಖಾಸಗಿ ವಾಹಿನಿ ಸಂದರ್ಶನದಲ್ಲಿ ಮಾತನಾಡಿರುವ ನಿರ್ಮಾಪಕ ಕೆ. ಮಂಜು, ಇಂದಿನ ಜನತೆ ಮತ್ತು ಯುವಜನರು ಮೊದಲಿನಂತೆ ಇಲ್ಲ, ಅವರು ಸಾಕಷ್ಟು ಬದಲಾಗಿದ್ದಾರೆ. ಇಂದಿನ ನಾಯಕರನ್ನು ನೋಡಿ ನೋಡಿ ಜನರಿಗೆ ಸಾಕಾಗಿದೆ. ಯುವಜನತೆಗೆ ಬುದ್ಧಿ ಇದೆ, ಅವರು ಹೊಸ ಬದಲಾವಣೆಯನ್ನು ಬಯಸುತ್ತಿದ್ದಾರೆ. ಸಿನಿಮಾದವರು ಮುಂದೆ ಬಂದರೆ ಖಂಡಿತವಾಗಿ ಜನ ಗೆಲ್ಲಿಸುತ್ತಾರೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾದವರಿಗೆ ಆಡಳಿತ ನಡೆಸಲು ಬರುವುದಿಲ್ಲ ಎಂಬ ಮಾತನ್ನು ಅಲ್ಲಗಳೆದಿರುವ ಅವರು, ವಿಧಾನಸಭೆಯ ಮಾದರಿಯಲ್ಲೇ ಫಿಲ್ಮ್ ಚೇಂಬರ್ ಕಾರ್ಯಕಲಾಪಗಳು ನಡೆಯುವುದರಿಂದ ನಟರಿಗೆ ಆಡಳಿತದ ಅನುಭವ ಇರುತ್ತದೆ ಎಂದು ಹೇಳಿದ್ದಾರೆ.

ಮೂವರು ನಟರಿಗೆ ಸಿಎಂ ಆಗುವ ಅರ್ಹತೆ ಇದೆ
ಕರ್ನಾಟಕದ ನಟರ ಕುರಿತು ಮಾತನಾಡುತ್ತಾ ಕೆ. ಮಂಜು ಅವರು ದರ್ಶನ್, ಸುದೀಪ್ ಮತ್ತು ಉಪೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ನನ್ನ ಪ್ರಕಾರ ದರ್ಶನ್ ಹಾಗೂ ಸುದೀಪ್ ಅವರಿಗೆ ಸಿಎಂ ಆಗುವ ಎಲ್ಲ ಸಾಮರ್ಥ್ಯವಿದೆ. ಈಗಾಗಲೇ 'ಪ್ರಜಾಕೀಯ' ಪಕ್ಷದ ಮೂಲಕ ಗುರುತಿಸಿಕೊಂಡಿರುವ ಉಪೇಂದ್ರ ಅವರಿಗೂ ಆಡಳಿತ ನಡೆಸುವ ಅರ್ಹತೆ ಇದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಾಮರ್ಥ್ಯವಿದ್ದರೂ, ಅವರು ಸದ್ಯಕ್ಕೆ ರಾಜಕೀಯಕ್ಕೆ ಬರುವವರಲ್ಲ ಎಂದು ಮಂಜು ತಿಳಿಸಿದ್ದಾರೆ.
ಧೈರ್ಯ ಮಾಡಿದರೆ ಗೆಲುವು ನಿಶ್ಚಿತ
"ಸಿಎಂ ಆಗುತ್ತೇನೆ ಎಂದು ಕೇವಲ ಕನಸು ಕಾಣುವುದಕ್ಕಿಂತ, ಜನರ ಸೇವೆ ಮಾಡುತ್ತೇನೆ ಎಂಬ ಧೈರ್ಯದೊಂದಿಗೆ ಮುಂದೆ ಬರುವುದು ಮುಖ್ಯ" ಎಂದು ಕೆ. ಮಂಜು ಹೇಳಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್ ಅಂತಹ ಸಾಹಸ ಮಾಡಿದ್ದರಿಂದಲೇ ಯಶಸ್ಸು ಕಂಡಿದ್ದಾರೆ. ಈಗ ಪವನ್ ಕಲ್ಯಾಣ್ ಕೂಡ ರಾಜಕೀಯಕ್ಕೆ ಬಂದಿಲ್ವಾ? ಚಿರಂಜೀವಿ, ಕಮಲ್ ಹಾಸನ್ ಯಾಕೆ ಆಗ್ಲಿಲ್ಲ ಅಂದ್ರೆ ಧೈರ್ಯ ಮಾಡಲಿಲ್ಲ. ಇದಕ್ಕೆ ಧೈರ್ಯ ಬೇಕು ಅಷ್ಟೇ. ರಜನಿಕಾಂತ್ ಅಂತಹ ನಟರು ಮೊದಲೇ ಧೈರ್ಯ ಮಾಡಿದ್ದರೆ ಯಾವತ್ತೋ ಮುಖ್ಯಮಂತ್ರಿಯಾಗುತ್ತಿದ್ದರು ಎಂದೂ ಅಭಿಪ್ರಾಯಪಟ್ಟಿದ್ದಾರೆ.
ದಳಪತಿ ವಿಜಯ್ ಅವರು ಕೇವಲ ಎರಡು ವರ್ಷಗಳಲ್ಲಿ ಪಕ್ಷ ಕಟ್ಟಿ ಸಾಧಿಸಿದ ಗೆಲುವು ಪ್ರಾದೇಶಿಕ ಪಕ್ಷಗಳ ಶಕ್ತಿಯನ್ನು ತೋರಿಸಿಕೊಟ್ಟಿದೆ. ವಿಜಯ್ ಅವರು ತಮ್ಮ ಆಡಳಿತವನ್ನು ಸರಿಯಾಗಿ ನಿಭಾಯಿಸಿದರೆ ಮುಂದಿನ ಹತ್ತು ವರ್ಷ ಅವರೇ ಅಧಿಕಾರದಲ್ಲಿರುತ್ತಾರೆ ಎಂದು ಮಂಜು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲೂ ಈ ಬದಲಾವಣೆ ಸಾಧ್ಯವಿದ್ದು, ನಟರು ರಾಜಕೀಯಕ್ಕೆ ಬರಲು ಇರುವ ಭಯವನ್ನು ಬಿಟ್ಟು ಮುಂದೆ ಬರಬೇಕು ಎಂದು ಅವರು ಕರೆ ನೀಡಿದ್ದಾರೆ.













Click it and Unblock the Notifications