ಐಟಿ ದಾಳಿ ಬೆದರಿಕೆಯಿಂದ ಸಚಿವ ಶ್ರೀರಾಮುಲು ಟ್ವೀಟ್ ಡಿಲೀಟ್!
ಬೆಂಗಳೂರು, ಜನವರಿ 18; ಕರ್ನಾಟಕ ಕಾಂಗ್ರೆಸ್ ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ವಿರುದ್ಧ ಟ್ವೀಟ್ ಮಾಡಿದೆ. ರಾಮುಲು ಪಕ್ಷ ಬಿಡುವರೇ @BJP4Karnataka ಎಂದು ಪ್ರಶ್ನೆ ಮಾಡಿದೆ.
ಕಾಂಗ್ರೆಸ್ #BJPvsBJP ಎಂಬ ಹ್ಯಾಷ್ ಟ್ಯಾಗ್ ಬಳಿಕ ಸಚಿಚ ಶ್ರೀರಾಮುಲು ವಿರುದ್ಧ ಟೀಕೆ ಮಾಡಿದೆ. ಮಂಗಳವಾರ ಅವರ ಖಾತೆಯಿಂದ ಒಂದು ಟ್ವೀಟ್ ಮಾಡಿ ಅದನ್ನು ಡಿಲೀಟ್ ಮಾಡಲಾಗಿತ್ತು. ಈ ಕುರಿತು ಪ್ರಶ್ನಿಸಿದೆ.
ಬಿ. ಶ್ರೀರಾಮುಲು ರೆಡ್ಡಿ ಪಕ್ಷ ಸೇರುವುದು ಯಾವಾಗ?
'ಜನಾರ್ಧನ ರೆಡ್ಡಿಯವರ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ @sriramulubjp ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್ಗೂ ಸಂಬಂಧವಿರುವಂತಿದೆ ಅಲ್ಲವೇ?' ಎಂದು ಕಾಂಗ್ರೆಸ್ ಕೇಳಿದೆ.
ಸಿಬಿಐನಿಂದ ಆಸ್ತಿ ಮುಟ್ಟುಗೋಲು; ಖಡಕ್ ಪ್ರತಿಕ್ರಿಯೆ ಕೊಟ್ಟ ಜನಾರ್ದನ ರೆಡ್ಡಿ!
'ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ? ರಾಮುಲು ಪಕ್ಷ ಬಿಡುವರೇ @BJP4Karnataka?'ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಜನಾರ್ದನ ರೆಡ್ಡಿ ಸ್ಪರ್ಧೆ ಮಾಡುವ ಕ್ಷೇತ್ರ ಘೋಷಣೆ!
ಸುದ್ದಿ ಆಗಿದ್ದು ಏಕೆ?; ಸಚಿವ ಬಿ. ಶ್ರೀರಾಮುಲು ಖಾತೆಯಿಂದ ಮಂಗಳವಾರ ಒಂದು ಟ್ವೀಟ್ ಮಾಡಲಾಗಿತ್ತು. ಜನವರಿ 17ನೇ 2023ರಂದು ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಮಹಾಜನತೆಯನ್ನು ಹೃದಯ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಲಾಗಿತ್ತು.
ಆದರೆ ಈ ಟ್ವೀಟ್ ಅನ್ನು ಕೆಲವೇ ಹೊತ್ತಿನಲ್ಲಿ ಡಿಲೀಟ್ ಮಾಡಲಾಗಿತ್ತು. ಬಿ. ಶ್ರೀರಾಮುಲು ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ನೇಹಿತರು. ಈ ಹಿನ್ನಲೆಯಲ್ಲಿ ಈ ಟ್ವೀಟ್ ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.
ಹೊಸ ಪಕ್ಷ ಸ್ಥಾಪನೆ; ಮಾಜಿ ಸಚಿವ ಜನಾರ್ದನ ರೆಡ್ಡಿ ಡಿಸೆಂಬರ್ 25ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. 'ಕರ್ನಾಟಕ ರಾಜ್ಯ ಪ್ರಗತಿ ಪಕ್ಷ' ಎಂಬ ಹೊಸ ಪಕ್ಷ ಘೋಷಣೆ ಮಾಡಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿದ್ದರು.
ಈ ಹಿಂದೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಪಕ್ಷ 'ಗೆಳೆಯನ ಅಸಮಾಧಾನವನ್ನು ಹೈಕಮಾಂಡ್ ಜೊತೆ ಮಾತಾಡಿ ನ್ಯಾಯ ಒದಗಿಸುತ್ತೇನೆ ಎಂದಿದ್ದ ತಾವು ವಿಫಲರಾದಿರಾ ಅಥವಾ ಅಧಿಕಾರದ ರುಚಿ ಕಂಡಮೇಲೆ ರಾಜಕೀಯ ಜೀವನ ರೂಪಿಸಿಕೊಟ್ಟ ಗೆಳೆಯನನ್ನೇ ಮರೆತಿರಾ ಬಿ. ಶ್ರೀರಾಮುಲು ಅವರೇ?' ಎಂದು ಕೇಳಿತ್ತು.
'ಜನಾರ್ದನ ರೆಡ್ಡಿಯವರ ಹೊಸ ಪಕ್ಷಕ್ಕೆ ಶ್ರೀರಾಮುಲು ಹೋಗುವುದು ಯಾವಾಗ?. ಸ್ನೇಹ ಮುಖ್ಯವೋ ಅಧಿಕಾರ ಮುಖ್ಯವೋ?' ಎಂದು ಟ್ವೀಟ್ ಮೂಲಕ ಶ್ರೀರಾಮುಲು ಅವರನ್ನು ಪ್ರಶ್ನೆ ಮಾಡಿದ್ದರು.
ಸ್ನೇಹ ಬೇರೆ, ರಾಜಕೀಯ ಬೇರೆ; ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ಮಾತನಾಡಿದ್ದ ಬಿ. ಶ್ರೀರಾಮುಲು, "ಜನಾರ್ದನ ರೆಡ್ಡಿ ಬುದ್ಧಿವಂತರು. ಅನುಭವ ಉಳ್ಳವರು. ಅವರು ಘೋಷಣೆ ಮಾಡಿರುವ ಹೊಸ ಪಕ್ಷ ಒಳ್ಳೆಯದೋ, ಕೆಟ್ಟದ್ದೋ ಎಂದು ನಾನು ವಿಮರ್ಶೆ ಮಾಡುವುದಿಲ್ಲ" ಎಂದು ಹೇಳಿದ್ದರು.
"ರಾಜಕಾರಣ ಮತ್ತು ಸ್ನೇಹ ಬೇರೆ-ಬೇರೆ. ನಾವು ಸ್ನೇಹಿತರಾಗಿ ಮುಂದುವರೆಯುತ್ತೇವೆ. ಜನಾರ್ದನ ರೆಡ್ಡಿ ಬಿಜೆಪಿಗೆ ಶಕ್ತಿಯಾಗಿದ್ದರು. ಅವರಿಗೂ ಪಕ್ಷ ಶಕ್ತಿಯಾಗಿ ನಿಂತಿತ್ತು" ಎಂದು ಬಿ. ಶ್ರೀರಾಮುಲು ತಿಳಿಸಿದ್ದರು.
ಹೊಸ ಪಕ್ಷ ಘೋಷಣೆ ಮಾಡಿದ್ದ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. "ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಮುಂದೆ ಹೆಜ್ಜೆ ಹಾಕುತ್ತೇನೆ" ಎಂದು ಹೇಳಿದ್ದರು.
ಜನಾರ್ದನ ರೆಡ್ಡಿ ಪತ್ನಿ ಸಹ ಪತಿಯೊಂದಿಗೆ ರಾಜಕೀಯಕ್ಕೆ ಧುಮುಕಿದ್ದಾರೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಅವರು ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಅದೇ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.