ತುಮಕೂರು ಬಿಜೆಪಿ ಭಿನ್ನಮತಕ್ಕೆ ಸಂಧಾನ ಸೂತ್ರ ಸಿದ್ಧ!
ತುಮಕೂರು, ಜನವರಿ 16 : ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ತುಮಕೂರಿನಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ನಡುವೆ ಅಸಮಾಧಾನವಿದೆ. ಚುನಾವಣೆ ಮೇಲೆ ಇದು ಪರಿಣಾಮ ಬೀರದಂತೆ ಸಂಧಾನ ಸೂತ್ರವನ್ನು ಪಕ್ಷ ಸಿದ್ಧಪಡಿಸಿದೆ.
ಪರಿವರ್ತನಾ ಯಾತ್ರೆ ಮುಗಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಸೊಗಡು ಶಿವಣ್ಣ ಅವರು, 'ತುಮಕೂರು ಜಿಲ್ಲೆಯ ಬಿಜೆಪಿ ಅಪ್ಪ-ಮಕ್ಕಳಿಂದ ಬೆಳೆದಿಲ್ಲ. ನಾವು ಪಕ್ಷವನ್ನು ಕಟ್ಟಿ ಬೆಳೆಸಿದ್ದೇವೆ. ಪಕ್ಷದ ಕಾರ್ಯಕರ್ತರನ್ನು ಬಿಟ್ಟು ಎಂದು ಕೆಲಸ ಮಾಡು ಎಂದರೆ ನಾವು ಮಾಡುವುದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಜ್ಯೋತಿ ಗಣೇಶ್ ಅಖಾಡಕ್ಕೆ, ಶಿವಣ್ಣಗಿಲ್ಲ ಬಿಜೆಪಿ ಟಿಕೆಟ್
ತುಮಕೂರು ನಗರ ಕ್ಷೇತ್ರದಿಂದ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿ ಗಣೇಶ್ ಇಬ್ಬರೂ ಟಿಕೆಟ್ ಆಕಾಂಕ್ಷಿಗಳು. ಆದರೆ, ಇವರ ನಡುವಿನ ಅಸಮಧಾನದಿಂದ ಪಕ್ಷಕ್ಕೆ ಸೋಲಾಗಬಾರದು ಎಂದು ಪಕ್ಷದ ನಾಯಕರು ಸಂಧಾನಸೂತ್ರವೊಂದನ್ನು ಸಿದ್ಧಪಡಿಸಿದ್ದಾರೆ.
ಬಿಜೆಪಿ ವಿರುದ್ಧ ಆರೋಪ : ಸೊಗಡು ಶಿವಣ್ಣಗೆ ನೋಟಿಸ್
2013ರ ಚುನಾವಣೆಯಲ್ಲಿ ಕೆಜೆಪಿ, ಬಿಜೆಪಿ ಗೊಂದಲದಿಂದಾಗಿ ಕ್ಷೇತ್ರದಲ್ಲಿ ಮತ ವಿಭಜನೆಯಾಗಿತ್ತು. ಕಾಂಗ್ರೆಸ್ನ ಡಾ.ರಫೀಕ್ ಅಹಮದ್ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ತುಮಕೂರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ತವರು ಜಿಲ್ಲೆ. ಅಲ್ಲಿ ಗೆಲ್ಲಲು ಅವರು ತಂತ್ರವನ್ನು ರೂಪಿಸಲಿದ್ದಾರೆ ಎಂಬುದನ್ನು ಬಿಜೆಪಿ ನಾಯಕರು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
2013ರಲ್ಲಿ ಇಬ್ಬರು ಸೋತಿದ್ದರು
ಕಳೆದ ಚುನಾವಣೆಯಲ್ಲಿ ಸೊಗಡು ಶಿವಣ್ಣ ಬಿಜೆಪಿಯಿಂದ, ಜಿ.ಬಿ.ಜ್ಯೋತಿ ಗಣೇಶ್ ಕೆಜೆಪಿಯಿಂದ ತುಮಕೂರು ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಬ್ಬರೂ ಸೋಲು ಕಂಡಿದ್ದರು. ಈಗ ಜ್ಯೋತಿ ಗಣೇಶ್ ಬಿಜೆಪಿಗೆ ವಾಪಸ್ ಆಗಿದ್ದಾರೆ. ಅವರನ್ನು ತುಮಕೂರು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಮಾಡಿದ ತಕ್ಷಣದಿಂದ ಅಸಮಾಧಾನ ಭುಗಿಲೆದ್ದಿದೆ.
ಸೊಗಡು ಶಿವಣ್ಣ ಆರೋಪ
'ತುಮಕೂರಿನಲ್ಲಿ ಬಿಜೆಪಿ ಅಪ್ಪ-ಮಕ್ಕಳ ಪಕ್ಷವಾಗಿದೆ. ಅವರಿಬ್ಬರು ಬಿಜೆಪಿ ಸೇರಿಕೊಂಡು ಎಲ್ಲರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ' ಎಂದು ಸೊಗಡು ಶಿವಣ್ಣ ಜಿ.ಎಸ್.ಬಸವರಾಜು ಮತ್ತು ಅವರ ಪುತ್ರ ಜಿ.ಬಿ.ಜ್ಯೋತಿ ಗಣೇಶ್ ವಿರುದ್ಧ ಆರೋಪ ಮಾಡಿದ್ದರು.
ಪಕ್ಷದ ಸಂಧಾನ ಸೂತ್ರ
ಪಕ್ಷದ ಮೂಲಗಳ ಮಾಹಿತಿಯಂತೆ ಈ ಬಾರಿ ಜಿ.ಬಿ.ಜ್ಯೋತಿ ಗಣೇಶ್, ಸೊಗಡು ಶಿವಣ್ಣ ಇಬ್ಬರಿಗೂ ಟಿಕೆಟ್ ನೀಡುವುದಿಲ್ಲ. ಶಿವಣ್ಣ ಅವರಿಗೆ ಪರಿಷತ್ ಸ್ಥಾನ ನೀಡುವ ಕುರಿತು ಚಿಂತನೆ ನಡೆದಿದೆ. ಜಿ.ಎಸ್.ಬಸವರಾಜು ಅವರಿಗೆ ಲೋಕಸಭೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಜಿ.ಬಿ.ಜ್ಯೋತಿ ಗಣೇಶ್ ಅವರಿಗೂ ಟಿಕೆಟ್ ನೀಡದೆ ಪಕ್ಷದಲ್ಲಿ ಬೇರೆ ಹುದ್ದೆ ನೀಡುವ ಸಾಧ್ಯತೆ ಇದೆ.
ಸೂತ್ರಕ್ಕೆ ಒಪ್ಪಿಗೆ ಇದೆಯೇ?
ಜಿ.ಬಿ.ಜ್ಯೋತಿ ಗಣೇಶ್, ಸೊಗಡು ಶಿವಣ್ಣ ಇಬ್ಬರಿಗೂ ಟಿಕೆಟ್ ನೀಡುವುದಿಲ್ಲ ಎಂಬ ಸೂತ್ರವನ್ನು ಎಲ್ಲಾ ನಾಯಕರು ಒಪ್ಪಲಿದ್ದಾರೆಯೇ ಕಾದು ನೋಡಬೇಕು?. ಇಬ್ಬರಿಗೂ ಟಿಕೆಟ್ ನೀಡದಿದ್ದರೆ ಯಾರು ಅಭ್ಯರ್ಥಿ? ಎಂಬುದು ಕುತೂಹಲದ ಪ್ರಶ್ನೆ.
2013ರ ಫಲಿತಾಂಶ
ತುಮಕೂರು ನಗರ ಕ್ಷೇತ್ರ ಸದ್ಯ ಕಾಂಗ್ರೆಸ ವಶದಲ್ಲಿದೆ. ಡಾ.ರಫೀಕ್ ಅಹಮದ್ ಅವರು ಕ್ಷೇತ್ರದ ಶಾಸಕರು. 2013 ರ ಚುನಾವಣೆಯಲ್ಲಿ 43,681 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ. ಕೆಜೆಪಿಯಿಂದ ಸ್ಪರ್ಧಿಸಿದ್ದ ಜಿ.ಬಿ.ಜ್ಯೋತಿ ಗಣೇಶ್ 40,073 ಮತ ಪಡೆದಿದ್ದರು. ಸೊಗಡು ಶಿವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದರು ಮತ್ತು 13,159 ಮತ ಪಡೆದಿದ್ದರು.