ಕರ್ನಾಟಕದ ಮುಂದಿನ ಸಿ.ಎಂ ಯಾರು, ಕಾಂಗ್ರೆಸ್ನಲ್ಲೇ ಗುಸುಗುಸು!
ಮುಡಾ ಹಗರಣದ ಆರೋಪದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ. ಇದೀಗ ಕಾಂಗ್ರೆಸ್ಗೆ ಮುಜುಗರ ತರುವ ಕೆಲಸವನ್ನು ಕಾಂಗ್ರೆಸ್ ನಾಯಕರೇ ಮಾಡುತ್ತಿದ್ದು, ಮುಂದಿನ ಮುಖ್ಯಮಂತ್ರಿ ನಾನಾಗ್ತೀನಿ, ನಾನಾಗ್ತೀನಿ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆಗಳನ್ನು ಕೊಡುವುದು ನೋಡುತ್ತಿದ್ದರೆ. ನಿಜಕ್ಕೂ ಕಾಂಗ್ರೆಸ್ನೊಳಗೇ ಒಂದು ಪ್ರತಿಪಕ್ಷವಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಈಗಾಗಲೇ ಗೃಹ ಸಚಿವ ಜಿ. ಪರಮೇಶ್ವರ ಅವರು ಮುಂದಿನ ಮುಖ್ಯಮಂತ್ರಿಯಾಗಲು ನಾನು ಸಹ ಸಿದ್ಧನಿದ್ಧೆನೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಮುಡಾ ಹಗರಣದಿಂದ ಇದೇ ಮೊದಲ ಬಾರಿ ತೀವ್ರ ಮುಜುಗರಕ್ಕೆ ಒಳಗಾಗಿರುವ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಹೇಳುತ್ತಿದ್ದಾರೆ. ಆರೋಪದಿಂದ ಮುಕ್ತರಾಗಲು ಹರಸಾಹಸಪಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ನಾನು ರಾಜಕೀಯ ಮಾಡಿದ್ದೇನೆ. ನನ್ನನ್ನು ರಾಜಕೀಯ ಭ್ರಷ್ಟನನ್ನಾಗಿ ಮಾಡಲು ಬಿಜೆಪಿ ಮುಂದಾಗಿದೆ. ಮುಡಾದ 14 ಸೈಟುಗಳನ್ನು ಬೇಕಾದರೆ, ಹಿಂದಿರುಗಿಸುತ್ತೇನೆ ಎಂದೂ ಸಿ.ಎಂ ಸಿದ್ದರಾಮಯ್ಯ ಅವರು ಹೇಳಿದ್ದು, ಹೇಗಾದರೂ ಮಾಡಿ ಈ ಪ್ರಕರಣದಿಂದ ಪಾರಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶತಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ಅವರದೇ ಪಕ್ಷದ ನಾಯಕರು ಮುಂದಿನ ಮುಖ್ಯಮಂತ್ರಿಯ ವಿಷಯವನ್ನು ಚರ್ಚೆಯ ಮುನ್ನೆಲೆಗೆ ತರುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ಗೂ ಮುಜುರವನ್ನುಂಟು ಮಾಡುತ್ತಿದೆ.

ನಾನೇ ಮುಂದಿನ ಸಿ.ಎಂ ಎನ್ನುತ್ತಿದ್ದಾರೆ ಸಚಿವರು!
ಕಾಂಗ್ರೆಸ್ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದಕ್ಕಿಂತ, ನಾನೇ ಮುಂದಿನ ಮುಖ್ಯಮಂತ್ರಿ ಎನ್ನುವ ವಿಷಯವೇ ಜೋರಾಗಿದೆ. ಹೌದು ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಲು ಕಾಂಗ್ರೆಸ್ ನಾಯಕರು ತಾ ಮುಂದು, ನಾ ಮುಂದು ಎಂದು ಬರುತ್ತಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಒಮ್ಮೆ ದೆಹಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ಹಲವು ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆದಿದೆ. ಇದರ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಗೆ ಕಾಂಗ್ರೆಸ್ನ ಪ್ರಮುಖ ನಾಯರಕು ಭೇಟಿ ಮಾಡಿ ಚರ್ಚೆ ಮಾಡುವುದು ಹೆಚ್ಚಾಗುತ್ತಿದೆ.
ಈ ನಡುವೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೈಕಮಾಂಡ್ ಯಾವುದೇ ಜವಾಬ್ದಾರಿ ನೀಡಿದರೂ, ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ದೆಹಲಿಯ ಕಾಂಗ್ರೆಸ್ ನಾಯಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದ ಪರಮೇಶ್ವರ್ ಅವರು ಜೋಶ್ನಲ್ಲೇ ರಾಜ್ಯಕ್ಕೆ ಹಿಂದಿರುಗಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಾನು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದೇನೆ ಎಂದು ಸಹ ಅವರು ಹೇಳಿದ್ದರು. ಇದೀಗ ಕಾಂಗ್ರೆಸ್ನ ಹಿರಿಯ ನಾಯಕ ಆರ್.ವಿ.
ದೇಶಪಾಂಡೆ ಅವರು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚನೆ ನೀಡಿದರೆ, ನಾನು ಮುಂದಿನ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದರ ನಡುವೆ ವಿವಾದಗಳಿಂದ ಹೆಚ್ಚು ಸುದ್ದಿಯಾಗುವ ಸಚಿವ ರಾಜಣ್ಣ ಅವರು ಸಹ ಹೊಸ ಬಾಂಬ್ ಸಿಡಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿ, ಚರ್ಚೆಗೆ ಕಾರಣರಾಗಿದ್ದರು.

ಡಿ.ಕೆಶಿಗೆ ಸ್ಥಾನ ತಪ್ಪಿಸಲು ಸರ್ಕಸ್ ?
ರಾಜ್ಯದಲ್ಲಿ ಯಾರೇ ಮುಂದಿನ ಮುಖ್ಯಮಂತ್ರಿಯಾದರೂ ಸಹ ಡಿ.ಕೆ ಶಿವಕುಮಾರ್ ಅವರನ್ನು ಮಾತ್ರ ಮುಂದಿನ ಮುಖ್ಯಮಂತ್ರಿಯಾಗಲು ಬಿಡಬಾರದು ಎಂದು ಒಂದು ಬಣ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷ ಹಾಗೂ ಡಿ.ಕೆ ಶಿವಕುಮಾರ್ ಅವರು ಎರಡೂವರೆ ವರ್ಷ ಸಿ.ಎಂ ಆಗಿರಲಿದ್ದಾರೆ ಎಂದು ಚರ್ಚೆಯಾಗುತ್ತಿತ್ತು. ಆದರೆ, ಮುಂದೆ ಈ ವಿಷಯವನ್ನು ಚರ್ಚೆ ಮಾಡಬಾರದು (ಮುಖ್ಯಮಂತ್ರಿ ಬದಲಾವಣೆ) ಎಂದು ತಾಕೀತು ಮಾಡಿತ್ತು. ಹೀಗಾಗಿ, ಈ ವಿಷಯ ತಣ್ಣಗಾಗಿತ್ತು. ಇದೀಗ ಮುಡಾ ಹಗರಣ ಕಾವು ಹೆಚ್ಚಾದ ಬೆನ್ನಲ್ಲೇ ಮುಂದಿನ ಸಿ.ಎಂ ಚರ್ಚೆಯನ್ನು ಕಾಂಗ್ರೆಸ್ ನಾಯಕರೇ ಮಾಡಿದ್ದಾರೆ.
ಟ್ವೀಟ್ ಮಾಡಿ ವ್ಯಂಗ್ಯವಾಡಿದ ಯತ್ನಾಳ್
ಬಿಜೆಪಿಯ ಪ್ರಮುಖ ನಾಯಕ ಹಾಗೂ ಶಾಸಕ ಬಸನಗೌಡ ಯತ್ನಾಳ್ ಅವರು ಸಹ ರಾಜ್ಯದಲ್ಲಿ ಮುಂದಿನ ಸಿ.ಎಂ ಬದಲಾವಣೆಯ ಬಗ್ಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.
ರಾಜ್ಯದ ಮುಂದಿನ ಮುಖ್ಯಮಂತ್ರಿಗಳು
ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್,ಡಾ ಜಿ.ಪರಮೇಶ್ವರ್,ಮಲ್ಲಿಕಾರ್ಜುನ ಖರ್ಗೆ,ಈಗ ಶ್ರೀ ಆರ್.ವಿ.ದೇಶಪಾಂಡೆ ಇದ್ದಾರೆ. ಸಿದ್ದರಾಮಯ್ಯ ಅವರನ್ನು ಬದಲಿಸಿ ಹೊಸ ಸಿ.ಎಂ. ಆಗುವ ಆಕಾಂಕ್ಷಿಗಳ ಪಟ್ಟಿ ದಿನೇ ದಿನೇ ಬೆಳೆಯುತ್ತಲೇ ಇದೆ. ರಾಜ್ಯದ ಅಭಿವೃದ್ಧಿಗೆ ದುಡಿಯುವುದಕ್ಕಿಂತ ವೈಯಕ್ತಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಆಡಳಿತ, ಕಾನೂನು ಸುವ್ಯವಸ್ಥೆ ನಿಷ್ಕ್ರಿಯವಾಗಿದೆ. ಇದು ಈ ಸರ್ಕಾರದ ಕಥೆ, ವ್ಯಥೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications