ನಿರ್ಣಾಯಕ ಘಟ್ಟದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ: ಅಸಲಿಗೆ ಅಂದು ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದೇನು!
ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸ್ಥಾನ ಯಾರಿಗೆ ದಕ್ಕಲಿದೆ. ಸಿದ್ದರಾಮಯ್ಯನವರಿಗೋ ಅಥವಾ ಇನ್ನೊಬ್ಬರಿಗೋ? ಸಿದ್ದರಾಮಯ್ಯ ಹೂಡುತ್ತಿರುವ ತಂತ್ರಗಾರಿಕೆಗೆ, ಅವರ ವಿರೋಧಿಗಳು ಹಣೆಯುತ್ತಿರುವ ತಿರುಮಂತ್ರ ವರ್ಕೌಟ್ ಆಗುತ್ತೋ ಎನ್ನುವುದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರದ್ದು ಒಂದು ಬಣ, ಇನ್ನೊಂದು, ಅವರನ್ನು ವಿರೋಧಿಸುತ್ತಿರುವವರದ್ದು. ಒಂದು ಲೆಕ್ಕದಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸೆ ಕಾಂಗ್ರೆಸ್ಸಿಗರು ಎನ್ನುವುದು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯನವರು, ವಿರೋಧ ಪಕ್ಷದ ನಾಯಕನ ಸ್ಥಾನದ ಆಕಾಂಕ್ಷಿ ಕೂಡಾ.. ಆದರೆ, ಈ ಹುದ್ದೆ ಅಷ್ಟು ಸಲೀಸಾಗಿ ಸಿಗದೇ ಇರುವುದಕ್ಕೆ ಇರುವ ತಡೆಗೋಡೆಗಳೆಂದರೆ ಮೂಲ ಕಾಂಗ್ರೆಸ್ಸಿಗರು.
ಈ ವಿಚಾರ, ದಿನದಿಂದ ದಿನಕ್ಕೆ ರಾಜ್ಯ ಕಾಂಗ್ರೆಸ್ ನಲ್ಲಿ ದೊಡ್ಡ ಕಂದಕವನ್ನು ಹುಟ್ಟು ಹಾಕುತ್ತಿದೆ ಎನ್ನುವುದನ್ನು ಅರಿತ ಸೋನಿಯಾ ಮೇಡಂ, ತುರ್ತಾಗಿ ಮಧುಸೂಧನ್ ಮಿಸ್ತ್ರಿ ಅವರನ್ನು ವೀಕ್ಷಕರನ್ನಾಗಿ ಕಳುಹಿಸಿತ್ತು. ಅಸಲಿಗೆ ಕೆಪಿಸಿಸಿ ಕಚೇರಿಯಲ್ಲಿ ಅಂದು ನಡೆದಿದ್ದೇನು?

ಬೆಂಗಳೂರಿಗೆ ಬಂದ ಮಧುಸೂಧನ್ ಮಿಸ್ತ್ರಿ
ಸೋನಿಯಾ ಗಾಂಧಿಯವರ ಅಣತಿಯಂತೆ ಬೆಂಗಳೂರಿಗೆ ಬಂದ ಮಿಸ್ತ್ರಿ ಅವರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿದೆ. ಅದರಂತೇ, ಕೆಪಿಸಿಸಿ ಕಚೇರಿಯಲ್ಲಿ ಹತ್ತು ಹಲವಾರು ಮುಖಂಡರ ಅಭಿಪ್ರಾಯವನ್ನು ಪಡೆದುಕೊಂಡರು. ದಿನೇಶ್ ಗುಂಡೂರಾವ್ ವಿದೇಶದಲ್ಲಿ ಇರುವುದರಿಂದ, ಡಿ ಕೆ ಶಿವಕುಮಾರ್ ಜೈಲಿನಲ್ಲಿ ಇರುವುದರಿಂದ, ಇಬ್ಬರು ಮುಖಂಡರ ಅಭಿಪ್ರಾಯವನ್ನು ಮಿಸ್ತ್ರಿಗೆ ಪಡೆಯಲು ಸಾಧ್ಯವಾಗಲಿಲ್ಲ.

ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ
ಅದರಲ್ಲಿ, ಹೇಗೂ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯನವರ ಪರವಾಗಿಯೇ ಇರುವುದು ಎನ್ನುವುದು ಕಾಂಗ್ರೆಸ್ ನಲ್ಲಿ ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು, ಡಿಕೆಶಿ, ಅತ್ಯಂತ ಸ್ಪಷ್ಟ ನಿಲುವನ್ನೇನೂ ಹೊಂದಿರಲಿಲ್ಲ. ವೀಕ್ಷಕರ ಮುಂದೆ, ಹೆಚ್ಚಿನ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಆದರೆ, ತಮ್ಮ ಅಭಿಪ್ರಾಯವನ್ನು ತೋಡಿಕೊಳ್ಳಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉತ್ಸುಕತೆ ತೋರಿರಲಿಲ್ಲ. ಆದರೆ, ಮಿಸ್ತ್ರಿ ವೈಯಕ್ತಿಕವಾಗಿ ಕರೆಮಾಡಿದ್ದರಿಂದ ರಮೇಶ್ ಕುಮಾರ್, ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇವರೂ, ಯಾರ ಪರವಾಗಿ ಎನ್ನುವುದು ಗೊತ್ತಿರುವ ವಿಚಾರ.

ಸಿದ್ದರಾಮಯ್ಯನವರ ಜೊತೆಗೂ ಮಧುಸೂಧನ್ ಮಿಸ್ತ್ರಿ ಮಾತುಕತೆ
ಮಧುಸೂಧನ್ ಮಿಸ್ತ್ರಿ ಸಿದ್ದರಾಮಯ್ಯನವರ ಜೊತೆಗೂ ಮಾತುಕತೆ ನಡೆಸಿದರು. ಶಾಸಕಾಂಗ ನಾಯಕನ ಸ್ಥಾನ, ವಿರೋಧ ಪಕ್ಷದ ನಾಯಕನ ಸ್ಥಾನ, ಜೊತೆಗೆ, ದಿನೇಶ್ ಗುಂಡೂರಾವ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿ ಎಂದು ಸಿದ್ದು ವಾದ ಮಂಡಿಸಿದ್ದಾರೆ ಎನ್ನುವ ಮಾಹಿತಿಯಿದೆ. ಎಲ್ಲವೂ ಬೇಕು ಎಂದರೆ ಹೇಗೆ ಎನ್ನುವ ಮಿಸ್ತ್ರಿ ಪ್ರಶ್ನೆಗೆ ಸಿದ್ದರಾಮಯ್ಯ ಸೂಕ್ತ ಉತ್ತರ ನೀಡಿದ್ದಾರೆ.

ಸಿಎಲ್ಪಿ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಒಬ್ಬರನ್ನೇ ತರಲು ಸಾಧ್ಯವಿಲ್ಲ
ಒಂದು ಹಂತದಲ್ಲಿ, "ಸಿಎಲ್ಪಿ ಹಾಗೂ ವಿಪಕ್ಷ ನಾಯಕನ ಸ್ಥಾನಕ್ಕೆ ಒಬ್ಬರನ್ನೇ ತರಲು ಸಾಧ್ಯವಿಲ್ಲ. ಜೊತೆಗೆ ಕೆಪಿಸಿಸಿ ಅಧ್ಯಕ್ಷರು ಇವರೇ ಇರಬೇಕೆಂದು ಹೇಳುತ್ತಿದ್ದೀರಾ, ಇದು ಹೇಗೆ ಸಾಧ್ಯ" ಎಂದು ಮಿಸ್ತ್ರಿ ಪ್ರಶ್ನಿಸಿದರು. ಅದಕ್ಕೆ ಬೇಕಿದ್ದಲ್ಲಿ, " ದಿನೇಶ್ ಗುಂಡೂರಾವ್ ಅವರನ್ನು ಬದಲಿಸಿ" ಎಂದು ಸಿದ್ದರಾಮಯ್ಯ ಹೇಳಿದರು ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ.

ಸಿದ್ದರಾಮಯ್ಯ ಅಥವಾ ಎಚ್.ಕೆ.ಪಾಟೀಲ್
ತಮ್ಮ ಪರವಾಗಿರುವ ಶಾಸಕರ ಸಹಿ ಹಾಕಿರುವ ಪತ್ರವನ್ನು ಸಿದ್ದರಾಮಯ್ಯ ನೀಡಲು ಮುಂದಾದಾಗ, ಪ್ರಮುಖರನ್ನು ಮಿಸ್ತ್ರಿ ಪ್ರತ್ಯೇಕವಾಗಿ ಕರೆದು ಮಾತನಾಡಿಸಿದ್ದಾರೆ ಎನ್ನುವ ಮಾಹಿತಿಯಿದೆ. ಉಪಚುನಾವಣೆ ಮತ್ತು ಇದರ ಫಲಿತಾಂಶದ ಮೇಲೆ ಸರಕಾರದ ಭವಿಷ್ಯ ನಿಂತಿರುವುದರಿಂದ, ಹೈಕಮಾಂಡ್ ಶೀಘ್ರ ಒಂದು ನಿರ್ಧಾರಕ್ಕೆ ಬರಲಿದೆ ಎನ್ನುವ ಮಾಹಿತಿಯಿದೆ. ಸಿದ್ದರಾಮಯ್ಯ ಅಥವಾ ಎಚ್.ಕೆ.ಪಾಟೀಲ್ ನಡುವೆ ಯಾರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಲಭಿಸಲಿದೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.












Click it and Unblock the Notifications