Government Jobs: 2.7 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ, ನೌಕರಿ ಗ್ಯಾರಂಟಿ ಬಗ್ಗೆ ಹೊಸ ಸುದ್ದಿ
ರಾಜ್ಯ ಕಾಂಗ್ರೆಸ್ ಸರ್ಕಾರವು ಈಗಾಗಲೇ ತನ್ನ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಜನರಿಂದ ಮೆಚ್ಚುಗೆ ಪಡೆದಿದೆಯಾದರೂ ಇತ್ತೀಚೆಗೆ ಗೃಹಲಕ್ಷ್ಮಿ ಯೋಜನೆಯಿಂದಾಗಿ ಬಹಳಷ್ಟು ಟೀಕೆಗೆ ಗುರಿಯಾಗಿದೆ. ಇನ್ನು ರಾಜ್ಯದಲ್ಲಿ 2.7 ಲಕ್ಷ ಸರ್ಕಾರಿ ಹುದ್ದೆಗಳ ನೇಮಕಾತಿ ವಿಚಾರದಲ್ಲೂ ಸರ್ಕಾರ ವಿಳಂಬ ತೋರುತ್ತಿದೆ ಎಂದು ಇತ್ತೀಚೆಗೆ ಉದ್ಯೋಗಾಕಾಂಕ್ಷಿಗಳು ಬೀದಿಗಳಿದು ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಆರ್.ಅಶೋಕ್, ಯುವಕರಿಗೆ ಉದ್ಯೋಗ ಭಾಗ್ಯ, ನೌಕರಿ ಗ್ಯಾರೆಂಟಿ ಯಾವಾಗ ಕೊಡುತ್ತೀರಿ? ಎಂದು ಕೇಳಿದ್ದಾರೆ.
"ಖಾಲಿ ಹುದ್ದೆಗಳಿವೆ, ಆದರೆ ಪರೀಕ್ಷೆಗಳಿಲ್ಲ. ಪರೀಕ್ಷೆಗಳು ನಡೆದರೆ ಫಲಿತಾಂಶಗಳಿಲ್ಲ. ಫಲಿತಾಂಶ ಹೊರಬಿದ್ದರೆ ನೇಮಕಾತಿ ಇಲ್ಲ. ಯುವಜನತೆಯ ಇಂಥ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಒಂದೇ ಭರವಸೆ. ಆದ್ದರಿಂದ ಯುವ ಸಮುದಾಯ ಈ ಬಾರಿ ನುಡಿದಂತೆ ನಡೆಯುವ ಕಾಂಗ್ರೆಸ್ಗೆ ಮತ ನೀಡಿ" ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿದ ಮಾತು ಎಲ್ಲಿ ಹೋಯಿತು? ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

"ನಾನು ಮಾತು ಕೊಡಲ್ಲ, ಕೊಟ್ಟರೆ ತಪ್ಪಲ್ಲ" ಎಂದು ವೇದಿಕೆಗಳ ಮೇಲೆ ಬುರುಡೆ ಭಾಷಣ ಬಿಡುತ್ತೀರಲ್ಲ ಸಿಎಂ ಸಿದ್ದರಾಮಯ್ಯನವರೇ ಚುನಾವಣೆ ಸಂದರ್ಭದಲ್ಲಿ ನಾಡಿನ ಯುವಕರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಕೊಟ್ಟ ಮಾತು ಏನಾಯಿತು? ರಾಜ್ಯದಲ್ಲಿ ಖಾಲಿ ಇರುವ 2.7 ಲಕ್ಷ ಸರ್ಕಾರಿ ಹುದ್ದೆಗಳನ್ನ ಯಾವಾಗ ಭರ್ತಿ ಮಾಡುತ್ತೀರಿ? ಯುವಕರಿಗೆ ಉದ್ಯೋಗ ಭಾಗ್ಯ ಹಾಗೂ ನೌಕರಿ ಗ್ಯಾರಂಟಿ ಯಾವಾಗ ಕೊಡುತ್ತೀರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
43 ಇಲಾಖೆಗಳಲ್ಲಿ ಹುದ್ದೆ ಖಾಲಿ
ವಚನ ಭ್ರಷ್ಟ ಕರ್ನಾಟಕ ಕಾಂಗ್ರೆಸ್ 2025ನೇ ಸಾಲಿನಲ್ಲಿ ಒಂದೇ ಒಂದು ನೇಮಕಾತಿ ಮಾಡಿಲ್ಲ. ಉದ್ಯೋಗ ನೇಮಕಾತಿಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಟ್ಟು 43 ಇಲಾಖೆಗಳಲ್ಲಿ 2.76 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಒಂದೇ ವರ್ಷದಲ್ಲಿ ಭರ್ತಿ ಮಾಡುತ್ತೇವೆ ಎಂದಿದ್ದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ಎರಡೂವರೆ ವರ್ಷ ಕಳೆದರೂ ನೇಮಕಾತಿಯನ್ನೇ ಪ್ರಾರಂಭಿಸಿಲ್ಲ ಎಂದು ಜೆಡಿಎಸ್ ಪಕ್ಷ ಕೂಡ ಗುಡುಗಿದೆ.
ಸರ್ಕಾರ ಎಸ್ಡಿಎ, ಯುಪಿಎಸ್ಸಿ ಹುದ್ದೆ ಸೇರಿದಂತೆ ಅನೇಕ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೈಗೊಂಡಿಲ್ಲ. ಪರೀಕ್ಷೆಗೆ ಸಿದ್ಧತೆ ನಡೆಸಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ನೇಮಕಾತಿಗಾಗಿ ಆಗ್ರಹಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನೊಂದ ಉದ್ಯೋಗಾಕಾಂಕ್ಷಿಗಳು ಹಾಗೂ ಯುವಜನತೆ ಬೀದಿಗಿಳಿದು ಪ್ರತಿಭಟನೆ ಮಾಡುವಂತಾಗಿದೆ ಎಂದು ಆರೋಪ ಮಾಡಿದೆ. ಇತ್ತೀಚೆಗೆ ವಿವಿಧ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.












Click it and Unblock the Notifications