ವಾರ್ತಾ ಇಲಾಖೆ ಮಾಹಿತಿ ಸಂಸ್ಥೆಯಾಗಬೇಕು - ಶಾಮ್
ಬೆಂಗಳೂರು, ಮೇ. 9: ವಾರ್ತಾ ಇಲಾಖೆ ಕೇವಲ ಸುದ್ದಿ ಸಂಸ್ಥೆಯಲ್ಲ. ಅದು ಮಾಹಿತಿ ಸಂಸ್ಥೆಯಾಗಿ ಬದಲಾಗಬೇಕಿದೆ ಎಂದು ಒನ್ಇಂಡಿಯಾ ಕನ್ನಡದ ಸಂಪಾದಕ ಎಸ್.ಕೆ. ಶಾಮಸುಂದರ್ ಅಭಿಪ್ರಾಯಪಟ್ಟಿದ್ದಾರೆ.
ವಾರ್ತಾ ಇಲಾಖೆ ತನ್ನ ಅಧಿಕಾರಿಗಳಿಗೆ ಮೇ.9 ಶುಕ್ರವಾರದಂದು ನಗರದ ಐ.ಪಿ.ಪಿ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ 'ವೃತ್ತಿ ತರಬೇತಿ ಪುನರ್ಮನನ ಶಿಬಿರ' ದಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಶ್ವದಲ್ಲಿ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಲೆಂದೇ ಅಸಂಖ್ಯಾತ ವೆಬ್ಸೈಟ್ಗಳಿವೆ. ಆದರೆ ಕರ್ನಾಟಕ, ವಿವಿಧ ಇಲಾಖೆ , ಜಿಲ್ಲಾ ಮಾಹಿತಿಗಳನ್ನು ಒಂದೇ ವೇದಿಕೆಯಡಿ ವೀಕ್ಷಿಸುವ ವೆಬ್ಸೈಟ್ ಯಾವುದು ಇಲ್ಲ. ವಾರ್ತಾ ಇಲಾಖೆ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕನ್ನಡದಲ್ಲಿ ತನ್ನವೆಬ್ಸೈಟ್ನ್ನು ಅಭಿವೃದ್ಧಿ ಪಡಿಸಿದರೆ ಮಾಧ್ಯಮದವರಿಗೂ, ಕನ್ನಡಿಗರಿಗೂ ತುಂಬಾ ಸಹಾಯವಾಗುತ್ತದೆ ಎಂದು ಶಾಮಸುಂದರ್ ಹೇಳಿದರು.[ಯುನಿಕೋಡ್ ಶಿಷ್ಟತೆ ಫಲ, ಕನ್ನಡ ಎಸ್ಸೆಂಎಸ್ ಭಾಗ್ಯ]
ವಾರ್ತಾ ಇಲಾಖೆ ನವಮಾಧ್ಯಮ ತಂತ್ರಜ್ಞಾನಕ್ಕೆ ಒಂದೇ ಬಾರಿಗೆ ಬದಲಾಗುವುದು ಕಷ್ಟ. ಇಂಟರ್ನೆಟ್ ಇಂದು ಸರ್ವವ್ಯಾಪಿಯಾಗಿರುವುದರಿಂದ ಸರ್ಕಾರ ನವ ಮಾಧ್ಯಮಕ್ಕಾಗಿಯೇ ಒಂದು ಪ್ರತ್ಯೇಕ ತಂಡವನ್ನು ನಿಯೋಜಿಸುವುದು ಉತ್ತಮ ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.[ಮೊಬೈಲಿನಲ್ಲಿ ಸಂಪೂರ್ಣ ಕನ್ನಡ ಬ್ರೌಸರ್ ಬೇಕೆ]

ಪ್ರಜಾವಾಣಿಯ ಹಿರಿಯ ಉಪಸಂಪಾದಕ ಮಹಮದ್ ಇಸ್ಮಾಯಿಲ್ ಮಾತನಾಡಿ ಪ್ರಸ್ತುತ ನಾವು ಮಾಹಿತಿ ಕಾಲದಲ್ಲಿ ಇಲ್ಲ. ಮಾಹಿತಿಯನ್ನು ವಿನ್ಯಾಸ ಮಾಡುವ ಕಾಲದಲ್ಲಿದ್ದೇವೆ. ವಿವಿಧ ಇಲಾಖೆಯ ಮಾಹಿತಿಗಳನ್ನು ಕ್ರೋಢಿಕರಿಸಿ ಸುದ್ದಿಯನ್ನು ನೀಡುವಂತೆ ಬದಲಾಗಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.[ನಿಮ್ಮ ಬ್ರೌಸರ್ ನಲ್ಲಿ ಕನ್ನಡದ ಸ್ಪೆಲ್ ಚೆಕ್ಕರ್ ಹಾಕ್ಕೊಳ್ಳಿ]
ಎಲ್ಲರೂ ಧನಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡಿದ್ದಲ್ಲಿ ಯಾವುದು ಕಷ್ಟವಲ್ಲ. ಇಡೀ ವಿಶ್ವವೇ ಇಂದು ಯುನಿಕೋಡ್ ಶಿಷ್ಟತೆಯನ್ನು ಅಳವಡಿಸುತ್ತಿದೆ. ಆದರೆ ವಾರ್ತಾ ಇಲಾಖೆಯ ಅಧಿಕಾರಿಗಳು ಇನ್ನೂ ಹಳೇಯ ಕಾಲದಲ್ಲಿದ್ದಾರೆ.ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಮನಸ್ಥಿತಿಯನ್ನು ಬದಲಾಯಿಸಿ ಯುನಿಕೋಡ್ ಜಗತ್ತಿಗೆ ತೆರೆದುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯ ಪಟ್ಟರು.[ಗೂಗಲ್ ಸರ್ಚ್ನಲ್ಲಿ ಕನ್ನಡ ಟೈಪ್ ಮಾಡುವುದು ಹೇಗೆ?]
ಈ ಟಿವಿ ಕನ್ನಡ ಸುದ್ದಿ ವಾಹಿನಿಯ ಮುಖ್ಯಸ್ಥ ಜಿ.ಎನ್.ಮೋಹನ್ ಮಾತನಾಡಿ, ಸಾಮಾಜಿಕ ಜಾಲತಾಣಕ್ಕೆ ಯಾವುದೇ ಗಡಿ ಇಲ್ಲ. ಇಡೀ ವಿಶ್ವಕ್ಕೆ ಒಂದೇ ಕ್ಷಣದಲ್ಲಿ ಮಾಹಿತಿ ತಲುಪಿಸುವ ಶಕ್ತಿ ಶಕ್ತಿ ಸೋಶಿಯಲ್ ಮೀಡಿಯಾದಲ್ಲಿದೆ. ವಾರ್ತಾ ಇಲಾಖೆ ಸೋಶಿಯಲ್ ಮೀಡಿಯಾದ ಮೂಲಕ ತನ್ನ ಎಲ್ಲಾ ವಿಭಾಗದ ಮಾಹಿತಿ ನೀಡುವಂತೆ ಬದಲಾಗಬೇಕಿದೆ ಎಂದು ಅವರು ಹೇಳಿದರು.[ಕನ್ನಡ ಹಬ್ಬಕ್ಕೆ ಹೊಸ ರೂಪದಲ್ಲಿ 'ಪದ' ತಂತ್ರಾಂಶ]
ಮಾಧ್ಯಮಗಳಿಗೆ ಇಂದು ಸೋಶಿಯಲ್ ಮೀಡಿಯಾವೇ ಒಂದು ಮುಖ್ಯ ಸುದ್ದಿ ಮೂಲ. ಬಹುತೇಕ ಆಫೀಸ್ಗಳಲ್ಲಿ ಫೇಸ್ಬುಕ್ನ್ನು ನಿಷೇಧಿಸಲಾಗಿದೆ. ಆದರೆ ನಮ್ಮ ಆಫೀಸ್ನಲ್ಲಿ ಎಲ್ಲರಿಗೂ ಸೋಶಿಯಲ್ ಮೀಡಿಯಾ ಬಳಸಲು ಅನುಮತಿ ನೀಡಿದ್ದೇನೆ ಎಂದು ಜಿ.ಎನ್.ಮೋಹನ್ ಫೇಸ್ಬುಕ್ ಪ್ರಾಮುಖ್ಯತೆಯನ್ನು ವಿವರಿಸಿದರು.[ಕೊನೆಗೂ, ಯುನಿಕೋಡ್ಗೆ ಒಪ್ಪಿಗೆ ನೀಡಿದ ಸರಕಾರ]
ರಾಜ್ಯದ ಹಲವು ವಾರ್ತಾಧಿಕಾರಿಗಳಿಗೆ ಇನ್ನೂ ಯುನಿಕೋಡ್, ನುಡಿ, ಫಾಂಟ್ ವಿಚಾರಗಳ ಗೊಂದಲದಲ್ಲಿರುವ ವಿಚಾರ ಕಾರ್ಯಾಗಾರದಲ್ಲಿ ತಿಳಿದುದು ಬಂತು. ಅಧಿಕಾರಿಗಳು ಯುನಿಕೋಡ್ ಬಗ್ಗೆ ಕೇಳಿದ ಅನೇಕ ಪ್ರಶ್ನೆಗಳಿಗೆ ಶಾಮಸುಂದರ್ ಮತ್ತು ಇಸ್ಮಾಯಿಲ್ ಉತ್ತರ ನೀಡಿ, ಸರ್ಕಾರ ತನ್ನೆಲ್ಲಾ ವೆಬ್ಸೈಟ್ಗಳನ್ನು ಯೂನಿಕೋಡ್ ಶಿಷ್ಟತೆಗೆ ಬದಲಾಯಿಸಬೇಕೆಂದು ಇರ್ವರು ಆಗ್ರಹಿಸಿದರು.[ವಿಜ್ಞಾನ ವೆಬ್ ಪ್ರಪಂಚದಲ್ಲಿ ಕನ್ನಡದ 'ಶ್ರೀ' ಕಂಪು]
ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್ ವಿಶುಕುಮಾರ್, ಕ್ಷೇತ್ರ ಪ್ರಚಾರ ವಿಭಾಗದ ಜಂಟಿ ನಿರ್ದೇಶಕ ಎಂ ರವಿಕುಮಾರ್, ಆಡಳಿತ ಮತ್ತು ಚಲನಚಿತ್ರ ಜಂಟಿ ನಿರ್ದೇಶಕ ಆರ್.ಕೆ. ಶಿವರಾಮ್, ವಾಣಿಜ್ಯ ಪ್ರಚಾರ ಇಲಾಖೆಯ ಜಂಟಿ ನಿರ್ದೇಶಕಿ ಬಿ.ಆರ್.ಮಮತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮೂರು ದಿನಗಳ ಕಾಲ ನಡೆದ ಈ ಕಾರ್ಯಾಗಾರ ಇಂದು ಸಮಾಪನಗೊಂಡಿತು.[ನಾನು ತಿಳಿದ ಹಾಗೆ ಯುನಿಕೋಡ್]












Click it and Unblock the Notifications