ಹೈಕಮಾಂಡ್ ಒಪ್ಪಿದರೆ ಯೋಗೇಶ್ವರ್ ಅವರಿಗೆ ಸ್ವಾಗತ ಕೋರುತ್ತೇವೆ, ಕಾಂಗ್ರೆಸ್ ಮುಖಂಡರು
Recommended Video

ತಮ್ಮ ಇದುವರೆಗಿನ ರಾಜಕೀಯ ಜೀವನದಲ್ಲಿ ಒಂದು ಪಕ್ಷದಲ್ಲಿ ನೆಲೆಕಾಣದೇ, ಪಕ್ಷಾಂತರ ಮಾಡುತ್ತಲೇ ಇರುವ ಚನ್ನಪಟ್ಟಣದ ಮಾಜಿ ಶಾಸಕ ಮತ್ತು ಬಿಜೆಪಿ ಮುಖಂಡ ಸಿ ಪಿ ಯೋಗೇಶ್ವರ್ ಮತ್ತೆ ಇನ್ನೊಂದು ಪಕ್ಷಕ್ಕೆ ಜಂಪ್ ಆಗಲಿದ್ದಾರಾ?
ಈ ರೀತಿಯ ಸುದ್ದಿ ಚನ್ನಪಟ್ಟಣ ಬ್ಲಾಕ್ ಮಟ್ಟದಲ್ಲಿ ಹರಿದಾಡುತ್ತಿದೆ. ಯಾವುದೇ ಪಕ್ಷದ ಚಿಹ್ನೆಯಿರಲಿ, ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ಬರುತ್ತಿದ್ದ ಯೋಗೇಶ್ವರ್ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ದ ಸೋಲು ಅನುಭವಿಸಿದ್ದರು.
ಇದಾದ ನಂತರ, ಎರಡು ಕ್ಷೇತ್ರದಿಂದ ಗೆದ್ದಿದ್ದ ಕುಮಾರಸ್ವಾಮಿ, ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಚುನಾವಣೆಯ ಸಂದರ್ಭದಲ್ಲಿ ನೇರವಾಗಿ ತಮ್ಮ ರಾಜಕೀಯ ವಿರೋಧಿ ಡಿ ಕೆ ಶಿವಕುಮಾರ್ ವಿರುದ್ದ ಹರಿಹಾಯ್ದಿದಿದ್ದ ಯೋಗೇಶ್ವರ್ , ಚುನಾವಣೆಯಲ್ಲಿ ಸೋತ ನಂತರವೂ ಬಿಜೆಪಿ ಪಕ್ಷದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಆಪರೇಶನ್ ಕಮಲದ ಸುದ್ದಿ ಬಲವಾಗಿ ಹರಿದಾಡುತ್ತಿದ್ದ ಸಂದರ್ಭದಲ್ಲೂ, ಯೋಗೇಶ್ವರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದರು. ಆದರೆ, ಪಕ್ಷದೊಳಗೆ ಅದೇನು ಬೆಳವಣಿಗೆ ನಡೆಯಿತೋ, ಯೋಗೇಶ್ವರ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ನಂತರ ಕಾಣಿಸಿಕೊಳ್ಳಲಿಲ್ಲ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ನೀಡಿದ ಕುತೂಹಲಕಾರಿ ಹೇಳಿಕೆ, ಮುಂದೆ ಓದಿ..

ಬಿಜೆಪಿ ಅಭ್ಯರ್ಥಿ ಕೈಕೊಟ್ಟಾಗ
ಕುಮಾರಸ್ವಾಮಿಯವರಿಂದ ತೆರವಾಗಿದ್ದ ರಾಮನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳಲ್ಲಿ ಮೊದಲು ಯೋಗೇಶ್ವರ್ ಹೆಸರೂ ಕೇಳಿಬಂದಿತ್ತು. ಆದರೆ, ತಾವು ಸ್ಪರ್ಧಿಸುವುದಿಲ್ಲ ಎನ್ನುವ ಸ್ಪಷ್ಟನೆಯನ್ನೂ ಅವರು ನೀಡಿದ್ದರು. ಇದಾದ ನಂತರ, ಬಿಜೆಪಿ ತಮ್ಮ ಅಭ್ಯರ್ಥಿಯನ್ನಾಗಿ ಎಲ್ ಚಂದ್ರಶೇಖರ್ ಅವರ ಹೆಸರನ್ನು ಸೂಚಿಸಿತ್ತು.

ಡಿಕೆಶಿ ಸಹೋದರರ ರಾಜಕೀಯ ದಾಳ
ಆದರೆ, ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್, ಚುನಾವಣೆಗೆ 48ಗಂಟೆ ಇರಬೇಕಾದರೆ ಕಣದಿಂದ ಹಿಂದಕ್ಕೆ ಸರಿದಿದ್ದರು. ಡಿಕೆಶಿ ಸಹೋದರರ ರಾಜಕೀಯ ದಾಳಕ್ಕೆ ಬಿಜೆಪಿ ನಿಬ್ಬೆರಗಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಈ ಘಟನೆ ಪಕ್ಷಕ್ಕೆ ತೀವ್ರ ಇರಿಸುಮುರಿಸು ಉಂಟುಮಾಡಿತ್ತು. ಇಷ್ಟೆಲ್ಲಾ ವಿದ್ಯಮಾನ ನಡೆದರೂ ಯೋಗೇಶ್ವರ್ ಯಾವುದಕ್ಕೂ ತಲೆಹಾಕಿರಲಿಲ್ಲ. ಇದು ಬಿಜೆಪಿ ಮುಖಂಡರ ಕೋಪಕ್ಕೆ ಕಾರಣವಾಗಿತ್ತು.

ಡಿ ಕೆ ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ
ಹೊಸ ವರ್ಷದಲ್ಲಿ ಮೊದಲ ಬಾರಿಗೆ ತನ್ನ ಸಹೋದರ ಡಿ ಕೆ ಸುರೇಶ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ವ್ಯಾಪ್ತಿಯ ಚನ್ನಪಟ್ಟಣದ ಕಾಂಗ್ರೆಸ್ ಘಟಕಕ್ಕೆ ಡಿಕೆಶಿ ಬರೆದ ಪತ್ರವನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಜಿಲ್ಲಾ ಕಾಂಗ್ರೆಸ್ ಮುಖಂಡರು, ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಎಲ್ಲರಿಗೂ ಪಕ್ಷದ ಬಾಗಿಲು ತೆರೆದಿದೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಜೊತೆಗೆ, ಬಿಜೆಪಿಯ ಕೆಲವು ಮುಖಂಡರೂ ಸಂಪರ್ಕದಲ್ಲಿದ್ದಾರೆಂದು ಹೇಳಿದ್ದಾರೆ.

ಹೈಕಮಾಂಡ್ ಒಪ್ಪಿದರೆ ನಾವು ಯೋಗೇಶ್ವರ್ ಅವರಿಗೆ ಸ್ವಾಗತ ಕೋರುತ್ತೇವೆ
ಸದ್ಯ ಬಿಜೆಪಿಯಲ್ಲಿರುವ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು ಹೈಕಮಾಂಡಿಗೆ ಬಿಟ್ಟ ವಿಚಾರ. ಹೈಕಮಾಂಡ್ ಒಪ್ಪಿದರೆ ನಾವು ಯೋಗೇಶ್ವರ್ ಅವರಿಗೆ ಸ್ವಾಗತ ಕೋರುತ್ತೇವೆ. ಇದಕ್ಕೆ ನಮ್ಮ ವಿರೋಧವಿಲ್ಲ ಎಂದು ಚನ್ನಪಟ್ಟಣ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ವೀರೇಗೌಡ ನೀಡಿರುವ ಹೇಳಿಕೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
ಈ ಹಿಂದೆ, ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ರಾಮನಗರಿಂದ ಬೆಂಗಳೂರಿನ ವರೆಗೆ ಬಿಜೆಪಿ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು, ಆದರೆ, ಅಲ್ಲಿನ ಬಿಜೆಪಿಯ ಪ್ರಮುಖಮುಖಂಡ ಯೋಗೇಶ್ವರ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಅವರ ಅನುಪಸ್ಥಿತಿ ನಾನಾ ಚರ್ಚೆಗಳಿಗೆ ಕಾರಣವಾಗಿತ್ತು.












Click it and Unblock the Notifications