ನಿಗಮ ಮಂಡಳಿ ಪಟ್ಟಿ ಫೈನಲ್ ಕುರಿತು ಮಹತ್ವದ ಹೇಳಿಕೆ ನೀಡದ ಡಿ ಕೆ ಶಿವಕುಮಾರ್
ಬೆಂಗಳೂರು,ಡಿಸೆಂಬರ್ 18: ನಾನು ಹಾಗೂ ಮುಖ್ಯಮಂತ್ರಿಗಳು ದೆಹಲಿಗೆ ತೆರಳುತ್ತಿದ್ದು, ನಿಗಮ ಮಂಡಳಿ ನೇಮಕ ಪಟ್ಟಿ ಅಂತಿಮ ಮಾಡಿಸಿಕೊಂಡು ಬರುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ದೆಹಲಿಗೆ ಪ್ರಯಾಣ ಬೆಳೆಸುವ ಮುನ್ನ ಸದಾಶಿವನಗರ ನಿವಾಸದ ಬಳಿ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಿಗಮ ಮಂಡಳಿ ನೇಮಕ ವಿಚಾರವಾಗಿ ಈಗಾಗಲೇ ಸಭೆ ಮಾಡಿ ಪಟ್ಟಿ ಕಳುಹಿಸಿಕೊಟ್ಟಿದ್ದೇವೆ. ಈ ಮಧ್ಯೆ ಬೇರೆ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಕಾರಣ ಅದು ಅಂತಿಮವಾಗಿಲ್ಲ. ಈಗ ದೆಹಲಿಯಲ್ಲಿ ಈ ಪಟ್ಟಿ ಅಂತಿಮವಾಗಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಭೇಟಿಗೆ ಪ್ರಧಾನಮಂತ್ರಿಗಳು ಸಮಯಾವಕಾಶ ನೀಡಿದ್ದಾರಂತಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, ಅವರು ಹೋಗಿ ಭೇಟಿ ಮಾಡುತ್ತಾರೆ ಎಂದು ತಿಳಿಸಿದರು. ಇನ್ನೂ ಇದೇ 21ಕ್ಕೆ ಸಿಡಬ್ಲ್ಯೂಸಿ ಸಭೆ ವಿಚಾರವಾಗಿ ಮಾತನಾಡಿ, ಇಲ್ಲೂ ಇದೆ ನಾಗ್ಪುರದಲ್ಲೂ ಇದೆ ಎಂದು ತಿಳಿಸಿದರು.
ನಿಗಮ, ಮಂಡಳಿ ನೇಮಕ ಪಟ್ಟಿಯನ್ನು ನಾವು ನಮ್ಮ ಹೈಕಮಾಂಡ್ ನಾಯಕರಿಗೆ ರವಾನಿಸಿದ್ದು, ಅದಕ್ಕೆ ಅಂಕಿತ ಪಡೆಯಬೇಕಾಗಿದೆ. ಹೀಗಾಗಿ ರಾಜ್ಯದ ನಾಯಕರು ದೆಹಲಿಗೆ ತೆರಳುತ್ತಿದ್ದೇವೆ. ದೆಹಲಿ ನಾಯಕರು ನಮ್ಮನ್ನು ಕರೆದಿಲ್ಲ. ನಾವೇ ಅಲ್ಲಿಗೆ ಹೋಗುತ್ತಿದ್ದೇವೆ. ಎಐಸಿಸಿ ಅಧ್ಯಕ್ಷರು ನಮ್ಮ ಗ್ಯಾರಂಟಿ ಯೋಜನೆಗಳ ಜಾರಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕ ಸಂಬಂಧ ನಿರ್ದೇಶನ ನೀಡಿದ್ದಾರೆ. ತಿಂಗಳಲ್ಲಿ ತಾಲೂಕು ಮಟ್ಟದಲ್ಲಿ ಸಮಿತಿ ಮಾಡಲು ಪ್ರಸ್ತಾವನೆ ಸಲ್ಲಿಸಲು ಶಾಸಕರಿಗೆ ಸೂಚಿಸುತ್ತೇವೆ.
ನಾರಾಯಣ ಗೌಡರ ಭೇಟಿ ವಿಚಾರವಾಗಿ ಕೇಳಿದಾಗ, ನಾರಾಯಣಗೌಡರು ಕನ್ನಡದಲ್ಲಿ ನಾಮಫಲಕ ಹಾಕಲು ಹೋರಾಟ ಮಾಡುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರು ಹೋರಾಟಗಾರರು, ಹೋರಾಟ ಮಾಡುವುದು ಸಹಜ. ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶ ಇದೆ. ಯಾರೋ ಅವರ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ಹೋರಾಟಗಾರರಿಗೆ ನಾವು ಎಷ್ಟು ಗೌರವ ನೀಡಬೇಕೋ ಅದನ್ನು ನೀಡಲೇಬೇಕು. ಅವರುಗಳ ಹೋರಾಟದಿಂದ ಕನ್ನಡ ಉಳಿಯುತ್ತಿದೆ. ಅವರಿಗೆ ರಾಜಕೀಯ ಬೇಡ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಬಾರದು ಎಂದು ಆಯುಕ್ತರಿಗೆ ಹೇಳಿದ್ದೇನೆ" ಎಂದು ತಿಳಿಸಿದರು.

ಸಂಸತ್ ಭದ್ರತಾ ವೈಫಲ್ಯ ಪ್ರಕರಣದಲ್ಲಿ ಪ್ರತಾಪ್ ಸಿಂಹ ಅವರನ್ನು ಟ್ರ್ಯಾಪ್ ಮಾಡಲಾಗುತ್ತಿದೆಯೇ ಎಂದು ಕೇಳಿದ ಪ್ರಶ್ನೆಗೆ, "ಅವರನ್ನು ಯಾರು ಟ್ರ್ಯಾಪ್ ಮಾಡುತ್ತಾರೆ? ಪ್ರತಾಪ್ ಸಿಂಹ ಅವರೇನೂ ಸಣ್ಣ ಹುಡುಗನಲ್ಲ, ನಾನೂ ಹುಡುಗನಲ್ಲ. ಇದು ನಮ್ಮ ಜವಾಬ್ದಾರಿ ಅಷ್ಟೇ" ಎಂದು ತಿಳಿಸಿದರು.












Click it and Unblock the Notifications