ಇಳಿದ ಮಲಪ್ರಭಾ ಮುನಿಸು, ಮಹಾರಾಷ್ಟ್ರದ ಜಲಾಶಯಗಳ ಹರಿವು ಹೇಗಿದೆ?
ಬೆಂಗಳೂರು, ಆಗಸ್ಟ್ 10: ಉತ್ತರ ಕರ್ನಾಟಕದಲ್ಲಿ ಮಹಾ ಮಳೆಯು ಮುಂದುವರೆದಿದ್ದು, ಕಡಿಮೆಯಾಗುವಂತಹ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದ್ದು ಹೊರಹರಿವು 85 ಸಾವಿರ ಕ್ಯೂಸೆಕ್ಸದಿಂದ ಹತ್ತು ಸಾವಿರಕ್ಕೆ ಇಳಿದಿದೆ.ಖಾನಾಪುರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು 45 ಸಾವಿರ ಕ್ಯೂಸೆಕ್ಸಕ್ಕೆ ಇಳಿದಿದೆ.
37.7 ಟಿ ಎಮ್ ಸಿ ಸಾಮರ್ಥ್ಯದ ಡ್ಯಾಮಿನಲ್ಲಿ ಈಗ 35 ಟಿ ಎಮ್ ಸಿ ನೀರು ಸಂಗ್ರಹವಾಗಿದೆ. ಹೊರಹರಿವು 85 ಸಾವಿರದಿಂದ ಒಂದು ಲಕ್ಷದವರೆಗೂ ತಲುಪಿದ್ದರಿಂದ ಮುನವಳ್ಳಿ,ಬಸರಗಿ,ಶಿಂಧೋಗಿ,ಅರಟಗಲ್,ತೊರಗಲ್ಲ,ಹಾಲೊಳ್ಳಿ,ಸುನ್ನಾಳ,ತೊರಗಲ್ಲ,ರಾಮದುರ್ಗ ನಗರದ ಭಾಗಶಃ ಪ್ರದೇಶ,ಸುರೇಬಾನ,ಹಂಪಿಹೊಳಿ,ಹಲಗತ್ತಿ,ಕಿಲಬನೂರು ಮುಂತಾದ ಹಳ್ಳಿಗಳು ಜಲಾವೃತ್ತಗೊಂಡಿವೆ.
ಅಬ್ಬಾ, ನೀರು ತುಂಬಿದ ಸೇತುವೆ ಮೇಲೇ ಬಸ್ ಸಂಚಾರ
ಚಿಕ್ಕೋಡಿ,ಕಾಗವಾಡ,ಅಥಣಿ,ರಾಯಬಾಗ,ಗೋಕಾಕ,ರಾಮದುರ್ಗ ತಾಲೂಕುಗಳ ನೂರಾರು ಗ್ರಾಮಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಅನೇಕ ನಗರ ಮತ್ತು ಹಳ್ಳಿಗಳಲ್ಲಿಯ ಸಾಮಾನ್ಯ ಜನಜೀವನ ಅಸ್ತವ್ಯಸ್ಥಗೊಂಡಿದೆ.
ಮಲಪ್ರಭೆಯ ಹೊರ ಹರಿವು ಕಡಿಮೆಯಾಗಿದೆ
ಮಲಪ್ರಭೆಯ ಹೊರಹರಿವು ಕಡಿಮೆಯಾಗಿದ್ದರಿಂದ ಶನಿವಾರ,ರವಿವಾರ ಈ ಪ್ರದೇಶಗಳಿಂದ ನೀರು ಹಿಂದೆ ಸರಿಯುವ ಸಾಧ್ಯತೆಯಿದೆ.
ಹುಕ್ಕೇರಿ ತಾಲೂಕಿನ ಹಿಡ್ಕಲ್ ಜಲಾಶಯಕ್ಕೆ ಮಹಾರಾಷ್ಟ್ರದ ಪ್ರದೇಶದಿಂದ 97 ಸಾವಿರ ಕ್ಯೂಸೆಕ್ಸ ಹರಿದು ಬರುತ್ತಿದ್ದು ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಬಾಗಲಕೋಟೆಗೆ ಎಲ್ಲಿಂದ ನೀರು ಬರುತ್ತಿದೆ
ಧೂಪದಾಳ ವೆಯರ್ ದಿಂದ 26500, ಬಳ್ಳಾರಿ ನಾಲಾದಿಂದ 18000,ಹಿರಣ್ಯಕೇಶಿಯಿಂದ 45 ಸಾವಿರ ಕ್ಯೂಸೆಕ್ಸ ಸೇರಿ ಒಟ್ಟು ಸುಮಾರು ಎರಡು ಲಕ್ಷ ಕ್ಯೂಸೆಕ್ಸ ನೀರು ಬಾಗಲಕೋಟೆಯತ್ತ ಹರಿಯುತ್ತಿದೆ.
ಹಿಡ್ಕಲ್ ಜಲಾಶಯದಲ್ಲಿ ಎಷ್ಟು ನೀರಿದೆ?
51 ಟಿ ಎಮ್ ಸಿ ಸಾಮರ್ಥ್ಯದ ಹಿಡ್ಕಲ್ ಜಲಾಶಯದಲ್ಲಿ 48.5 ಟಿ ಎಮ್ ಸಿ., 4 ಟಿ ಎಮ್ ಸಿ ಸಾಮರ್ಥ್ಯದ ಮಾರ್ಕಂಡೆಯ ಡ್ಯಾಮಿನಲ್ಲಿ 3.3 ಟಿ ಎಮ್ ಸಿ .ನೀರು ನಿಂತಿದೆ.
ಹಿಡ್ಕಲ್ ಜಲಾಶಯದಿಂದ ಇಂದು ಶುಕ್ರವಾರ ಮುಂಜಾನೆ 87 ಸಾವಿರ ಕ್ಯೂಸೆಕ್ಸ ಇತ್ತು.ಸಂಜೆಯವರೆಗೆ ಮತ್ತೆ 97 ಸಾವಿರಕ್ಕೆ ಹೆಚ್ಚಿದೆ. ಮಹಾರಾಷ್ಟ್ರದ ಅಂಬೋಲಿ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯು ಮತ್ತೆ ಹೆಚ್ಚಿದ್ದರಿಂದ ಒಳಹರಿವು ಹೆಚ್ಚಿದೆ.
ಹಿಡ್ಕಲ್ ಡ್ಯಾಮಿನ ಮುಕ್ಕಾಲು ಭಾಗದಷ್ಟು ಜಲಾನಯನ ಪ್ರದೇಶವು ಮಹಾರಾಷ್ಟ್ರದಲ್ಲಿಯೇ ಇದೆ.
ಮಹಾರಾಷ್ಟ್ರದ ಜಲಾಶಯಗಳಿಂದ ಬರುವ ನೀರಿನ ಪ್ರಮಾಣ ಏರಿಕೆ
ಇನ್ನು ಮಹಾರಾಷ್ಟ್ರದ ಕೊಯ್ನಾ,ವಾರ್ಣಾ ಮತ್ತಿತರ ಜಲಾಶಯಗಳಿಂದ ರಾಜಾಪುರ ಡ್ಯಾಮ್ ಮೂಲಕ ಕರ್ನಾಟಕವನ್ನು ಪ್ರವೇಶಿಸುತ್ತಿರುವ ನೀರಿನ ಪ್ರಮಾಣವು 3.5 ಲಕ್ಷ ಕ್ಯೂಸೆಕ್ಸ.ಇದರೊಂದಿಗೆ ಕರ್ನಾಟಕದ ಕೃಷ್ಣಾ ತೀರದಲ್ಲಿ ಸುರಿಯುತ್ತಿರುವ ಮಳೆಯ ನೀರೂ ಸಹ ಸೇರುತ್ತಿದೆ.
ಮಲಪ್ರಭೆ,ಘಟಪ್ರಭೆ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿರುವದರಿಂದ ಇಡೀ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆಪೀಡಿತವಾಗಿವೆ.