ಸ್ವಾಮೀಜಿ ಸಾವು: ಕೊಲ್ಲೂರು ಮೂಕಾಂಬಿಕೆ ಪೂಜೆ ಸ್ಥಗಿತ
ಉಡುಪಿ, ಜೂ 3: ನಾಡಿನ ಪ್ರಸಿದ್ದ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಸಮೀಪದಲ್ಲಿರುವ ಆಶ್ರಮವೊಂದರಲ್ಲಿ ಹಿರಿಯ ಸ್ವಾಮೀಜಿಯೊಬ್ಬರ ನಿಧನದಿಂದ ಮೂಕಾಂಬಿಕೆಯ ಪೂಜೆಗೆ ಸೋಮವಾರ (ಜೂ 2) ರಾತ್ರಿಯಿಂದ ಅಡಚಣೆಯುಂಟಾಗಿದೆ.
ದೇವಾಲಯದ ಬಳಿ ಇರುವ ನಿತ್ಯಾನಂದ ಆಶ್ರಮದ ಶ್ರೀವಿಮಲಾನಂದ ಸ್ವಾಮೀಜಿಯವರು ಸೋಮವಾರ ಅಸ್ತಂಗತರಾಗಿದ್ದರು.
ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾವು ಉಂಟಾದರೆ ಕೊಲ್ಲೂರು ದೇವಾಲಯದ ಗಡಿಯಿಂದ ಹೊರಕ್ಕೆ (ರಾಹುಕಟ್ಟೆ, ದೇಗುಲದ ಗಡಿ) ಅಂತಿಮ ಸಂಸ್ಕಾರ ಪ್ರಕ್ರಿಯೆ ನಡೆಯಬೇಕೆನ್ನುವುದು ದೇವಾಲಯದ ಪ್ರಾಚೀನ ಪದ್ದತಿ.
ಮೂಕಾಂಬಿಕೆಯ ಪೂಜಾ ವಿಧಿವಿಧಾನಗಳಿಗೆ ಯಾವುದೇ ತೊಂದರೆ ಆಗಬಾರದೆನ್ನುವುದು, ಈ ಪದ್ದತಿಯ ಹಿಂದಿರುವ ಉದ್ದೇಶ ಎನ್ನುವುದು ಕೊಲ್ಲೂರು ದೇವಾಲಯದ ಅರ್ಚಕರ ವಾದ.
ಆದರೆ, ಸೋಮವಾರ ನಿಧನ ಹೊಂದಿದ ಸ್ವಾಮೀಜಿಯವರನ್ನು ಆಶ್ರಮದ ಆವರಣದಲ್ಲೇ ಸಮಾಧಿ ಮಾಡಿದ್ದು ಈಗಿರುವ ಗೊಂದಲಕ್ಕೆ ಮೂಲ ಕಾರಣವಾಗಿದೆ. ಇದರಿಂದಾಗಿ ಸೋಮವಾರ ರಾತ್ರಿಯಿಂದ ದೇವಾಲಯದಲ್ಲಿ ಪೂಜೆ ನಡೆದಿಲ್ಲ.
ಸ್ವಾಮೀಜಿಯವರು ದೇವರಿಗೆ ಸಮಾನ, ಇವರ ಸಾವಿನಿಂದ ಸೂತಕ ಬರುವುದಿಲ್ಲ ಎನ್ನುವುದು ನಿತ್ಯಾನಂದ ಆಶ್ರಮದ ವಿಮಲಾನಂದ ಸ್ವಾಮೀಜಿಯವರ ಶಿಷ್ಯರ ಅಭಿಪ್ರಾಯ. ಎರಡೂ ಕಡೆಯವರು ಒಮ್ಮತಕ್ಕೆ ಬರದೇ ಇರುವುದರಿಂದ ಮೂಕಾಂಬಿಕೆಯ ಪೂಜೆಗೆ ಅಡಚಣೆಯುಂಟಾಗಿದೆ.
ಎಂಬತ್ತು ವರ್ಷದ ವಿಮಲಾನಂದ ಸ್ವಾಮೀಜಿಯವರು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಗವಾನ್ ನಿತ್ಯಾನಂದ ಸ್ವಾಮಿಯವರ ಅನುಯಾಯಿಗಳು. ತನ್ನ ಹದಿನೈದನೇ ವರ್ಷದಲ್ಲಿ ನಿತ್ಯಾನಂದ ಆಶ್ರಮಕ್ಕೆ ಬಂದ ಇವರು, 1961ರಲ್ಲಿ ಥಾಣೆಯಿಂದ ಕೊಲ್ಲೂರಿಗೆ ಬಂದು ನೆಲೆಸಿದ್ದರು.
2009ರಲ್ಲಿ ನಿತ್ಯಾನಂದ ಸ್ವಾಮಿಗಳ ಪಂಚಲೋಹದ ವಿಗ್ರಹವನ್ನು ಇವರು ಪ್ರತಿಷ್ಠಾಪಿಸಿದ್ದರು. ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಹೊಂದಿರುವ ಇವರ ಅಂತಿಮ ಸಂಸ್ಕಾರ ಪ್ರಕ್ರಿಯೆ ಮಂಗಳವಾರ (ಜೂ 3) ನಡೆದಿದೆ.
ದೇಗುಲದಲ್ಲಿ ಪೂಜೆ ಆರಂಭ: ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಪೂಜೆ ಮಂಗಳವಾರ (ಜೂ 3) ಸಂಜೆಯಿಂದ ಆರಂಭವಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಆಡ್ಯಂತಾಯ, ಕಾರ್ಯನಿರ್ವಹಣಾಧಿಕಾರಿ ಮಾರುತಿಯವರು ಅರ್ಚಕರ ಜೊತೆ ಮಾತುಕತೆ ನಡೆಸಿ, ಭಕ್ತರಿಗೆ ತೊಂದರೆಯಾಗ ಬಾರದೆಂದು ಪೂಜೆಯನ್ನು ಪುನರಾರಂಭಿಸಿದ್ದಾರೆ.
ಆಗಿರುವ ದೋಷಕ್ಕೆ ಪ್ರಾಯಶ್ಚಿತ್ತ ಪೂಜೆ ನಡೆಸಿ ನಿಲ್ಲಿಸಲಾಗಿದ್ದ ಪೂಜೆಯನ್ನು ಮತ್ತೆ ಆರಂಭಿಸಲಾಗಿದೆ. ದೇವಾಲಯದ ಸಂಪ್ರದಾಯಕ್ಕೆ ಚ್ಯುತಿ ಬಂದಿರುವ ಹಿನ್ನಲೆಯಲ್ಲಿ ದೇಗುಲದ ಸಭಾಮಂಟಪದಲ್ಲಿ ಬುಧವಾರ (ಮಾ 4) ಆಡಳಿತ ಮಂಡಳಿ, ಅರ್ಚಕರು, ಗ್ರಾಮಸ್ಥರು ಮತ್ತು ಭಕ್ತರ ಸಭೆಯನ್ನು ಕರೆಯಲಾಗಿದೆ ಎಂದು ಆಡ್ಯಂತಾಯ ತಿಳಿಸಿದ್ದಾರೆ.