ಚಾ.ನಗರದಲ್ಲಿ ಸಾಲಬಾಧೆಗೆ ಇಡೀ ರೈತ ಕುಟುಂಬ ಬಲಿ
ಚಾಮರಾಜನಗರ, ಏಪ್ರಿಲ್ 25 : ಒಂದು ಕಡೆ ಮಳೆಯಿಲ್ಲದೆ ಬರ, ಮತ್ತೊಂಡೆದೆ ಸಾಲದಬಾಧೆ. ಇದರ ನಡುವೆ ಸಿಕ್ಕಿ ತೊಳಲಾಡುತ್ತಿರುವ ರೈತರು ಜೀವನ ಹೇಗಪ್ಪಾ ನಡೆಸುವುದೆಂದು ಕೈಹೊತ್ತು ಕುಳಿತಿದ್ದಾರೆ. ಕೆಲವರು ಧೈರ್ಯ ಕಳೆದುಕೊಂಡು ಆತ್ಮಹತ್ಯೆ ದಾರಿಹಿಡಿಯುತ್ತಿದ್ದಾರೆ. ಇದೀಗ ಇಂತಹ ಹೃದಯ ಕಲಕುವ ಘಟನೆಯೊಂದು ತಾಲೂಕಿನ ಹೊನ್ನಹಳ್ಳಿಯಲ್ಲಿ ನಡೆದಿದೆ.
ಸುಮಾರು ಮೂರು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಗ್ರಾಮದ ಶಿವನಂಜಪ್ಪ ಎಂಬ ರೈತ ಸಾಲಕ್ಕೆ ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ನೋಡಿದ ಹೆಂಡತಿ ತನ್ನ ಮಕ್ಕಳೊಂದಿಗೆ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಡೀ ಕುಟುಂಬವೇ ಬಲಿಯಾಗಿದೆ.
ರೈತ ಶಿವನಪ್ಪ (45) ಬೋರ್ವೆಲ್ ಕೊರೆಯಿಸಿದ್ದಲ್ಲದೆ ಬೆಳೆ ಬೆಳೆಯಲು ಸಾಲ ಮಾಡಿದ್ದರು. ಬರದ ಹಿನ್ನಲೆಯಲ್ಲಿ ನೀರು ಬಾರದೆ ಕೃಷಿ ಮಾಡಲು ಸಾಧ್ಯವಾಗಿರಲಿಲ್ಲ. ತಾನು ಮಾಡಿದ್ದ ಸಾಲಕ್ಕೆ ಬಡ್ಡಿ ಬೆಳೆಯುತ್ತಾ ಹೋಗಿತ್ತಲ್ಲದೆ, ಸಾಲ ನೀಡಿದವರು ಮರು ಪಾವತಿಸುವಂತೆ ಒತ್ತಾಯಿಸುತ್ತಿದ್ದರು. ಇದರಿಂದ ಬೇಸತ್ತಿದ್ದ ಶಿವನಪ್ಪ ಸಾಲ ತೀರಿಸುವ ದಾರಿಕಾಣದೆ ತನ್ನ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. [ಮಾದೇವಮ್ಮನ ಲಿವಿಂಗ್ ಟುಗೆದರ್ ಸಂಸಾರ!]
ಜಮೀನಿಗೆ ಹೋದ ಗಂಡ ಮರಳಿ ಬಾರದ್ದರಿಂದ ಹೆಂಡತಿ ಕನ್ಯಾ(40) ಜಮೀನಿನತ್ತ ತೆರಳಿದ್ದು ಅಲ್ಲಿ ಗಂಡ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದನ್ನು ಕಂಡು ದುಃಖಿತಳಾದ ಆಕೆ ನೇರವಾಗಿ ಮನೆಗೆ ಬಂದು ಮನೆಗೆ ಬಂದು ತನ್ನ ಮಕ್ಕಳಾದ ಪ್ರಿಯಾ(6) ಮತ್ತು ಪ್ರೀತಿ(4) ಇಬ್ಬರ ಮೇಲೆ ಸೀಮೆಎಣ್ಣೆ ಸುರಿದು ತಾನು ಸುರಿದು ಕೊಂಡು ಬಳಿಕ ಬೆಂಕಿ ಹಚ್ಚಿಕೊಂಡು ಸಜೀವ ದಹನಗೊಂಡಿದ್ದಾರೆ.
ಮನೆಯಲ್ಲಿ ಹೊಗೆ ಬಂದು ಚೀರಾಟ ಕೇಳಿ ಬಂದಿದ್ದರಿಂದ ಸುತ್ತಮುತ್ತಲಿನವರು ಸ್ಥಳಕ್ಕೆ ಆಗಮಿಸಿ ನೋಡಿದಾಗ ಅದಾಗಲೇ ಮೂವರು ಸಾವನ್ನಪ್ಪಿದ್ದರು. ಘಟನೆಯಿಂದ ಹೊನ್ನಹಳ್ಳಿ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಭೇಟಿ ನೀಡಿದ್ದರು. [ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ, ನೇಣಿಗೆ ರೈತ ಶರಣು]