ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ: ಭುಗಿಲೆದ್ದ ಪಲ್ಲಕ್ಕಿ ವಿವಾದ
ಉಡುಪಿ, ಜ 16: ಎರಡು ವರ್ಷಕ್ಕೊಮ್ಮೆ ಉಡುಪಿಯಲ್ಲಿ ನಡೆಯುವ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಮಾನವ ಹೊರುವ ಪಲ್ಲಕ್ಕಿಯಲ್ಲಿ ಕೂರಬೇಕೇ ಅಥವಾ ಬೇಡವೇ ಎನ್ನುವ ವಿಚಾರದಲ್ಲಿ ಅಷ್ಠಮಠಾಧೀಶರ ನಡುವೆ ಒಮ್ಮತದ ಮೂಡದೇ ಇರುವುದು ಆತಂಕ ಮೂಡಿಸಿದೆ.
ಇದೇ ಶನಿವಾರ (ಜ 18) ನಸುಕಿನಲ್ಲಿ ನಡೆಯುವ ವೈಭವದ ಪರ್ಯಾಯ ಮೆರವಣಿಗೆಯ ನಂತರ ಅಷ್ಠ ಮಠಗಳಲ್ಲಿ ಒಂದಾದ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಮುಂದಿನ ಎರಡು ವರ್ಷದ ಅವಧಿಗೆ ಸರ್ವಜ್ಞ ಪೀಠವನ್ನೇರಲಿದ್ದಾರೆ.
ಪರ್ಯಾಯ ಮೆರವಣಿಗೆಯ ಸಂದರ್ಭದಲ್ಲಿ ಮಾನವ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಕೊಳ್ಳದೇ ಇರಲು ಪೇಜಾವರ ಹಿರಿಯ ಶ್ರೀಗಳು ನಿರ್ಧರಿಸಿದ್ದರು. ಇದಕ್ಕೆ ಅಷ್ಠಮಠದ ಕೆಲವು ಮಠಾಧೀಶರೂ ಬೆಂಬಲ ವ್ಯಕ್ತ ಪಡಿಸಿದ್ದರು. (ಹೊಸವರ್ಷದ ಮುನ್ನ ಪೇಜಾವರರ ಮಹತ್ವದ ನಿರ್ಧಾರ)
ಆದರೆ ಪೇಜಾವರ ಶ್ರೀಗಳ ನಿರ್ಧಾರವನ್ನು ಶಿರೂರು ಶ್ರೀಗಳು ಪ್ರಶ್ನಿಸಿದ್ದಾರೆ. ಶ್ರೀಗಳನ್ನು ಪರ್ಯಾಯ ಮೆರವಣಿಗೆಯ ಸಂದರ್ಭದಲ್ಲಿ ಪಲ್ಲಕ್ಕಿಯಲ್ಲಿ ಮನುಷ್ಯರು ಹೊರುವುದು ಅನಾದಿ ಕಾಲದಿಂದಲೂ ನಡೆದು ಕೊಂಡು ಬರುತ್ತಿರುವ ಪದ್ದತಿ ಎಂದು ಶ್ರೀಗಳು ಹೇಳಿದ್ದಾರೆ.
ಪಲ್ಲಕ್ಕಿ ಇರುವುದು ಹೊತ್ತು ಕೊಂಡು ಹೋಗುವುದಕ್ಕೆ. ಟ್ಯಾಬ್ಲೋದಲ್ಲಿ ಇಟ್ಟು ಮೆರವಣಿಗೆ ಮಾಡಲು ಅಲ್ಲ. ಪಲ್ಲಕ್ಕಿಯನ್ನು ತೆರೆದ ವಾಹನದಲ್ಲಿ ಇಟ್ಟು ಮಠಾಧೀಶರು ಅದರಲ್ಲಿ ಕೂತು ಮೆರವಣಿಗೆಯಲ್ಲಿ ಬರುವುದಕ್ಕೆ ನನ್ನ ತೀವ್ರ ವಿರೋಧವಿದೆ ಎಂದು ಶಿರೂರು ಶ್ರೀಗಳು ಹೇಳಿದ್ದಾರೆ.
ಗುಲ್ಬರ್ಗದಲ್ಲಿ ಗುಂಡೇಟಿಗೆ ಬಲಿಯಾದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಪ್ರಕಟಿಸಿ ಮಾತನಾಡುತ್ತಿದ್ದ ಶಿರೂರು ಶ್ರೀಗಳು, ಒಂದೋ ಪಲ್ಲಕ್ಕಿಯನ್ನು ಭಕ್ತರು ಹೊರಬೇಕು. ಇಲ್ಲದಿದ್ದರೆ, ಪಲ್ಲಕ್ಕಿಯನ್ನು ವಾಹನದಲ್ಲಿ ಇಟ್ಟು ತರಬೇಕು ಎಂದಿದ್ದಾರೆ. ಪಲ್ಲಕ್ಕಿ ಹೊರುವ ವ್ಯವಸ್ಥೆ ಇಲ್ಲದಿದ್ದರೆ, ನಾನು ಪರ್ಯಾಯ ಮೆರವಣಿಗೆಯಲ್ಲಿ ಭಾಗವಹಿಸುವುದಿಲ್ಲ ಎಂದು ಶ್ರೀಗಳು ಹೇಳಿದ್ದಾರೆ. (ಪಿಎಸ್ಸೈ ಬಂಡೆ: ಪರಿಹಾರ ಮೊತ್ತ 50ಕ್ಕೇರಿಸಿದ ಸಿದ್ದು)
ಏನಿದು ಪಲ್ಲಕ್ಕಿ ವಿವಾದ? ಸ್ಲೈಡಿನಲ್ಲಿ ನೋಡಿ..
ಮೊಗವೀರ ಸಮುದಾಯದವರು ಹೊರುವ ಪಲ್ಲಕ್ಕಿ
ಪರ್ಯಾಯದ ದಿನದಂದು ಸಾಗುವ ಮೆರವಣಿ ಉಡುಪಿ ಜೋಡುಕಟ್ಟೆ ವೃತ್ತದಿಂದ ರಥಬೀದಿಯವರೆಗೆ ಸಾಗುತ್ತದೆ. ಆ ಮೆರವಣಿಗೆಯಲ್ಲಿ ಅಷ್ಠ ಮಠಾಧೀಶರು ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಬರುವ ಪದ್ದತಿಯಿದೆ. ಮೊಗವೀರ ಸಮುದಾಯದವರು ಶ್ರೀಗಳು ಕೂತಿರುವ ಪಲ್ಲಕ್ಕಿಯನ್ನು ಹೊರುವುದು ಈಗಿರುವ ಪದ್ದತಿ. ನಾನು ಭಕ್ತರು ಹೊರುವ ಪಲ್ಲಕ್ಕಿಯಲ್ಲಿ ಇನ್ನು ಮುಂದೆ ಕುಳಿತು ಕೊಳ್ಳುವುದಿಲ್ಲ. ಜೀಪಿನಲ್ಲಿ ಪಲ್ಲಕ್ಕಿ ಇರಿಸಿ ಅದರಲ್ಲಿ ಕುಳಿತು ಬರುತ್ತೇನೆ ಎಂದು ಪೇಜಾವರ ಶ್ರೀಗಳು ಹೇಳಿದ್ದರು.
ರಂಭಾಪುರಿ ಅಡ್ಡಪಲ್ಲಕ್ಕಿ
ಇತ್ತೀಚೆಗೆ ಗುಲ್ಬರ್ಗ ಜಿಲ್ಲೆ ಜೇವರ್ಗಿಯಲ್ಲಿ ರಂಭಾಪುರಿ ಶ್ರೀಗಳ ದಸರಾ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಪ್ರಗತಿಪರರಿಂದ ವಿರೋಧ ವ್ಯಕ್ತವಾಗುವ ಮುನ್ನವೇ ಪಲ್ಲಕ್ಕಿ ಹೊರುವ ಪದ್ದತಿಯಲ್ಲಿ ಮಾರ್ಪಾಡು ಮಾಡಲು ಮುಂದಾಗಿದ್ದೇವೆ. ನನ್ನ ನಿರ್ಧಾರಕ್ಕೆ ಪಲಿಮಾರು ಮತ್ತು ಕಾಣಿಯೂರು ಶ್ರೀಗಳು ಸಹಮತ ವ್ಯಕ್ತ ಪಡಿಸಿದ್ದಾರೆ ಎಂದು ಪೇಜಾವರ ಶ್ರೀಗಳು ಹೇಳಿದ್ದರು.
ಈ ಹಿಂದೆ ಪ್ರತ್ಯೇಕ ರಥೋತ್ಸವ ನಡೆದಿತ್ತು
ಸುಮಾರು 8 ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಪ್ರತಿಷ್ಠಾಪಿಸಿದ ಶ್ರೀಕೃಷ್ಣ ಮತ್ತು ಪೂಜೆಗಾಗಿ ನೇಮಿಸಿದ ಅಷ್ಟ ಮಠಗಳ ಪರಂಪರೆಯಲ್ಲಿ ಮೊದಲಬಾರಿಗೆ ಹೊಸ ಸಂಪ್ರದಾಯಕ್ಕೆ ಸೆ 9, 2012ರಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿಯಂದು ನಡೆಯುವ ವಿಟ್ಲಪಿಂಡಿ ಉತ್ಸವ ಸಾಕ್ಷಿಯಾಗಿತ್ತು. ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಶ್ರೀಲಕ್ಷ್ಮೀವರ ತೀರ್ಥರು ಪ್ರತ್ಯೇಕ ರಥೋತ್ಸವ ನಡೆಸಿ ಹೊಸ ವಿವಾದಕ್ಕೆ ಕಾರಣರಾಗಿದ್ದರು. (ಉಡುಪಿ ಶ್ರೀಕೃಷ್ಣನ 800 ವರ್ಷಗಳ ಇತಿಹಾಸಕ್ಕೆ ಕಪ್ಪುಚುಕ್ಕೆ)
ಕಳೆದ ಪರ್ಯಾಯದಂದು ಉಪವಾಸ ಕೂತಿದ್ದ ಪುತ್ತಿಗೆ ಮತ್ತು ಪೇಜಾವರ ಶ್ರೀಗಳು
ಕರಾವಳಿ ಕರ್ನಾಟಕ ಭಾಗದಲ್ಲಿ ನಾಡಹಬ್ಬದ ರೀತಿಯಲ್ಲಿ ಆಚರಿಸಲ್ಪಡುವ ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಕಳೆದ ಬಾರಿ ಈಗಿನ ಪರ್ಯಾಯ ಪೀಠಾಧಿಪತಿ ಸೋದೆ ಶ್ರೀಗಳ ಮತ್ತು ಪುತ್ತಿಗೆ ಶ್ರೀಗಳ ನಡುವಿನ ಬಿಕ್ಕಟ್ಟು ಉಲ್ಬಣಗೊಂಡಿತ್ತು. ಪರ್ಯಾಯ ಮಹೋತ್ಸವಕ್ಕೆ ರಾಯಸ (ಆಮಂತ್ರಣ) ನೀಡಲಿಲ್ಲ ಎಂದು ಪುತ್ತಿಗೆ ಶ್ರೀಗಳು ಉಪವಾಸ ಕೂತಿದ್ದರು. (ಉಡುಪಿ ಪರ್ಯಾಯ ವಿವಾದ: ಪೇಜಾವರ ಶ್ರೀಗಳೇ ಎಲ್ಲಿದ್ದೀರಿ?)
ಸಂಧಾನಕ್ಕೆ ಮುಖ್ಯಮಂತ್ರಿ ಬರಬೇಕಾಯಿತು
ಪೇಜಾವರ ಶ್ರೀಗಳು ಮನಸು ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು ಎಂದು ಪುತ್ತಿಗೆ ಶ್ರೀಗಳು ಹೇಳಿದ್ದರು. ಇದರಿಂದ ಬೇಸತ್ತ ಪೇಜಾವರ ಶ್ರೀಗಳು ತಾವೂ ಉಪವಾಸ ಕೂತರು. ಬಿಕ್ಕಟ್ಟು ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಲಾರಂಭಿಸಿದಾಗ ಆಗಿನ ಸಿಎಂ ಸದಾನಂದ ಗೌಡ ಮತ್ತು ಸಚಿವರಾಗಿದ್ದ ದಿ. ವಿ ಎಸ್ ಆಚಾರ್ಯ ಖುದ್ದು ಉಡುಪಿಗೆ ಭೇಟಿ ನೀಡಿ ಸ್ವಾಮಿಗಳ ನಡುವೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಿದರು.