ಶಾಸಕ ಯತ್ನಾಳ್ ಕೊಠಡಿಗೆ ಭಿತ್ತಿಪತ್ರ ಅಂಟಿಸಿದ್ದ ಪ್ರಕರಣಕ್ಕೆ ತಿರುವು, ಇಬ್ಬರ ಬಂಧನ!
ಬೆಂಗಳೂರು, ಆ. 25: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಗಳೂರಿನ ಶಾಸಕರ ಭವನದ ಕೊಠಡಿಗೆ ಭಿತ್ತಿಪತ್ರ ಹಚ್ಚಿದ್ದ ಪ್ರಕರಣ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಿಧಾನಸೌಧ ಪೊಲೀಸರು ಬಂಧಿಸಿ, ಶಾಸಕರ ಭವನಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇನ್ನಿಬ್ಬರು ಆರೋಪಿತರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಶಾಸಕರ ಭವನದಲ್ಲಿನ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕೊಠಡಿಗೆ ಪೋಸ್ಟರ್ ಹಚ್ಚುತ್ತಿದ್ದ ವೇಳೆಯಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದರು. ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಶಾಸಕ ಯತ್ನಾಳ್ ಮುಂಚೂಣಿಯಲ್ಲಿದ್ದರು. ಜೊತೆಗೆ ಸಿಎಂ ಹುದ್ದೆ ರೇಸ್ನಲ್ಲಿಯೂ ಇದ್ದರು. ಆದರೆ ಬದಲಾದ ಸಂದರ್ಭದಲ್ಲಿ ನೋಡ ನೋಡುತ್ತಿದ್ದಂತೆಯೆ ರಾಜ್ಯ ಬಿಜೆಪಿಯ ಇಡೀ ಚಿತ್ರಣವೇ ಬದಲಾಗಿತ್ತು. ಆ ಮೇಲೆ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಹುದ್ದೆ ಹೋಗಲಿ, ಕನಿಷ್ಠ ಮಂತ್ರಿಯಾಗುವುದೂ ಆಗಲಿಲ್ಲ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಿಎಂ ಹುದ್ದೆ ತಪ್ಪಲು ಅವರ ಮಾತುಗಳೇ ಕಾರಣ ಎಂಬ ಮಾಹಿತಿ ಬಿಜೆಪಿ ವಲಯದಿಂದ ಕೇಳಿ ಬಂದಿತ್ತು. ಇದೇ ಸಂದರ್ಭದಲ್ಲಿ ಅವರಾಡಿದ್ದ ಮಾತೊಂದು ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು. ಅದಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದೆ!
ಇಬ್ಬರನ್ನು ಬಂಧಿಸಿದ ವಿಧಾನಸೌಧ ಪೊಲೀಸರು!
ಶಾಸಕ ಯತ್ನಾಳ್ ಕೊಠಡಿಗೆ ಭಿತ್ತಿಪತ್ರ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರಾದ ಸೆಲ್ವರಾಜ್ ಹಾಗೂ ಪುಟ್ಟರಾಜ್ ಎಂಬುವರನ್ನು ಬಂಧಿಸಿದ್ದಾರೆ. ಜೊತೆಗೆ ಇನ್ನಿಬ್ಬರು ಆರೋಪಿತರಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಬಸವೇಶ್ವರನಗರದಲ್ಲಿ ಸೆಲ್ವರಾಜ್ನನ್ನು ಬಂಧಿಸಿ, ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಶಾಸಕರ ಭವನದ ಭದ್ರತಾ ಎಎಸ್ಐ ದೂರು ನೀಡಿದ್ದರು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ 427, 447, 504 ಅಡಿ ಪ್ರಕರಣ ದಾಖಲಿಸಲಾಗಿತ್ತು.
ಶಾಸಕ ಕೊಠಡಿಗೆ ಅಂಟಿಸಿದ್ದ ಭಿತ್ತಿಪತ್ರದಲ್ಲಿ ಏನಿತ್ತು?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿಯಾಗಿ ಮಾತನಾಡಿದ್ದರು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಭವನದ ಶಾಸಕ ಯತ್ನಾಳ್ ಕೊಠಡಿಗೆ ಭಿತ್ತಿಪತ್ರ ಅಂಟಿಸಿದ್ದರು. ಭಿತ್ತಿಪತ್ರದಲ್ಲಿ ನೀನು ಬಿನ್ ----, ಎಂಬುದು ಸೇರಿದಂತೆ ಅವಾಚ್ಯ ಶಬ್ದಗಳನ್ನು ಬಳಸಲಾಗಿತ್ತು ಎಂಬ ಆರೋಪವಿದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು. ಕಾರ್ಯಕರ್ತರ ಬಂಧನವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸ್ವಾಗತಿಸಿದ್ದಾರೆ.
|
ಭಿತ್ತಿಚಿತ್ರ ಹಚ್ಚಿದವರನ್ನು ಸಮರ್ಥಿಸಿಕೊಂಡ ಡಿಕೆಶಿ!
ಭಿತ್ತಿಪತ್ರ ಅಂಟಿಸಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. "ಭಿತ್ತಪತ್ರ ಅಂಟಿಸಿ ನಮ್ಮ ಕಾರ್ಯಕರ್ತರು ಒಳ್ಳೆಯ ಕೆಲಸ ಮಾಡಿದ್ದಾರೆ. ನಮ್ಮ ನಾಯಕರ ವಿರುದ್ಧ ಯಾರೇ ಹೇಳಿಕೆ ಕೊಟ್ಟರೂ, ಅವರಿಗೆ ಇದೆ ಗತಿಯಾಗುತ್ತದೆ. ನಮ್ಮ ಕಾರ್ಯಕರ್ತರು ಹೋರಾಟ ಮಾಡುತ್ತಾರೆ. ಎಷ್ಟು ಬೇಕಾದರೂ ಪ್ರಕರಣ ದಾಖಲು ಮಾಡಿಕೊಳ್ಳಲಿ, ಸಮಸ್ಯೆಯಿಲ್ಲ. ಅವರು ಹಾಕುವ ಪ್ರಕರಣಗಳಿಗೆ ಹದರಿ ನಾವು ಹೋರಾಟವನ್ನು ಕೈಬಿಡುವುದಿಲ್ಲ ಎಂದು ತಮ್ಮ ಕಾರ್ಯಕರ್ತರನ್ನ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
|
ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಮಾತು!
ಅಫ್ಘಾನಿಸ್ತಾನದ ವಿಚಾರದಲ್ಲಿ ಮಾತನಾಡದ ಬುದ್ಧಿ ಜೀವಿಗಳು, ರಾಹುಲ್ ಗಾಂಧಿ ತಾಲಿಬಾನ್ಗೆ ಹುಟ್ಟಿದ್ದಾರೆ. ಬುದ್ಧಿ ಜೀವಿಗಳು ಲದ್ದಿ ತಿಂದಿದ್ದಾರೆ. ಬುದ್ಧಿ ಜೀವಿಗಳು ತಾಲಿಬಾನಿ ಸಂತಾನ. ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡುತ್ತಿಲ್ಲ? ಡಿ. ಕೆ. ಶಿವಕುಮಾರ್, ಸಿದ್ಧರಾಮಯ್ಯ ಯಾಕೆ ಮಾತನಾಡುತ್ತಿಲ್ಲ? ಮೋದಿ ಪ್ರಧಾನಿಯಾಗಿರದೆ ಇದ್ದಿದ್ದರೆ ಅವರೆಲ್ಲರೂ ತಾಲಿಬಾನಿಗಳನ್ನು ಇಂಪೋರ್ಟ್ ಮಾಡಿಕೊಳ್ಳುತ್ತಿದ್ದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದರು.
ಜೊತೆಗೆ ದೇಶದ ಒಳಗಡೆ ಇರುವ ತಾಲಿಬಾನಿಗಳಿಗೆ ಗುಂಡು ಹಾಕಬೇಕಿದೆ. ತಾಲಿಬಾನಿಗಳು ಅಲ್ಲಿ ಗುಂಡು ಹಾಕುವ ಹಾಗೆ ಇಲ್ಲಿ, ಇವರಿಗೆ ಗುಂಡು ಹಾಕಬೇಕು. ಗುಂಡು ಹಾಕದಿದ್ದರೇ ಇವರು ದೇಶಕ್ಕೆ ಪಿಡುಗು ಆಗುತ್ತಾರೆ ಎಂದು ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದರು.
Recommended Video