ಗದಗ ಕೊಳವೆ ಬಾವಿ ದುರಂತ: ಕಾರ್ಮಿಕರಿಬ್ಬರೂ ಸಾವು
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಕೊಳವೆ ಬಾವಿಗೆ ಬಿದ್ದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ನಡೆದಿದೆ.
ಗದಗ, ಏಪ್ರಿಲ್ 12: ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ ಇಂದು ಕೊಳವೆ ಬಾವಿಗೆ ಬಿದ್ದಿದ್ದ ಶಂಕರಪ್ಪ (30) ಮತ್ತು ಬಸವರಾಜ್ (32) ಇಬ್ಬರ ಮೃತದೇಹವೂ ಪತ್ತೆಯಾಗಿದ್ದು, ಕುಟುಂಬ ವರ್ಗದ ಆಕ್ರಂದನ ಮುಗಿಲುಮುಟ್ಟಿದೆ.
ಇಬ್ಬರು ಕಾರ್ಮಿಕರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.
ಗುಜರಾತಿನ ಅಹಮ್ಮದಾಬಾದಿನ ಸುರೇಂದ್ರ ನಗರದಲ್ಲಿ ನಾಲ್ಕು ವರ್ಷದ ಮಗುವೊಂದು ಕೊಳವೆ ಬಾವಿಗೆ ಬಿದ್ದು ಏಪ್ರಿಲ್ 6 ರಂದು ಅಸುನೀಗಿದ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಗದಗ ಜಿಲ್ಲೆ ರೋಣ ತಾಲೂಕು ಸವಡಿ ಗ್ರಾಮದಲ್ಲಿ ಇಬ್ಬರು ಕಾರ್ಮಿಕರು ಕೊಳವೆ ಬಾವಿಗೆ ಬಿದ್ದ ಘಟನೆ ನಡೆದಿದೆ.
ಬರೋಬ್ಬರಿ 40 ಅಡಿ ಆಳದಲ್ಲಿ ಸಿಲುಕಿರುವ ಇಬ್ಬರು ಕಾರ್ಮಿಕರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಅವರಲ್ಲಿ ಒಬ್ಬರನ್ನು ಜಮೀನಿನ ಮಾಲೀಕ ಶಂಕರಪ್ಪ ಬಾಣದ್(30) ಮತ್ತು ಇನ್ನೊಬ್ಬರು ಜಮೀನಿನ ಕೆಲಸಕ್ಕೆಂದು ಬಂದಿದ್ದ ಬಸವರಾಜ್(32) ಎಂದು ಗುರುತಿಸಲಾಗಿದೆ.[500 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ ಮಗು ಸಾವು]
ಜಮೀನಿನ ಕೊಳವೆ ಬಾವಿಯಲ್ಲಿ ನೀರು ಬತ್ತಿಹೋಗಿದ್ದರಿಂದ ರಿ ಬೋರ್ ಮಾಡಲಾಗುತ್ತಿತ್ತು. ಈ ಸಂದರ್ಭ ಕೇಸಿಂಗ್ ಪೈಪ್ ತೆಗೆಯುತ್ತಿದ್ದ ಇಬ್ಬರು, ಮಣ್ಣು ಕುಸಿದ ಪರಿಣಾಮ ಕೊಳವೆ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.