ಕುರಿಗಳಿಗೆ ಕೋವಿಡ್-19 ಪರೀಕ್ಷೆ; ಭೋಪಾಲ್ ನಿಂದ ಬಂತು ಸ್ವ್ಯಾಬ್ ಟೆಸ್ಟ್ ವರದಿ!
ಬೆಂಗಳೂರು, ಜು. 03: ಕೊರೊನಾ ವೈರಸ್ ತಂದಿಡುತ್ತಿರುವ ಆತಂಕ ಒಂದೆಡರಲ್ಲ. ಕಳೆದ ಮೂರು ತಿಂಗಳುಗಳಿಂದ ಮನುಷ್ಯ ಜೀವಿಯ ನಿದ್ದೆಗೆಡೆಸಿರುವ ಕೊರೊನಾ ವೈರಸ್ ಆತಂಕ ಕುರಿ-ಮೇಕೆಗಳಿಗೂ ಕಾಡಿದೆ. ತುಮಕೂರು ಜಿಲ್ಲೆಯ ಕುರಿಗಾಹಿಗೆ ಕೋವಿಡ್ 19 ಧೃಢಪಟ್ಟಿದ್ದು ಇಡೀ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಕುರಿ ಕಾಯುವವರು ಸಾಮಾನ್ಯವಾಗಿ ಜನಸಂಪರ್ಕಕ್ಕೆ ಬರುವುದು ಕಡಿಮೆ. ಹೀಗಾಗಿ ಕಾಡು ಮೇಡು ಅಲೆದುಕೊಂಡು ಕುರಿ ಕಾಯುವವರಿಗೆ ಕೋವಿಡ್ ಬಂದರೆ ನಮ್ಮ ಗತಿ ಏನು ಎಂದು ಜನರು ಆತಂಕಕ್ಕೆ ಈಡಾಗಿದ್ದರು.
ಆ ಕುರಿಗಾಹಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದ ಪಟ್ಟಿದ್ದ ದಿನವೇ ಅವನ ಸಂಪರ್ಕಕ್ಕೆ ಬಂದಿದ್ದ 5 ಕುರಿಗಳು ದಿಢೀರ್ ಮೃತಪಟ್ಟಿದ್ದವು. ಇದು ಜನರ ಆತಂಕಕ್ಕೆ ಕಾರಣವಾಗಿತ್ತು. ಯಾವುದಕ್ಕೂ ಅಪಾಯ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂದು ತೀರ್ಮಾನಿಸಿದ್ದ ಜಿಲ್ಲಾಡಳಿತ ಕುರಿಗಳನ್ನು ಕ್ವಾರಂಟೈನ್ ಮಾಡಿ, ಅವುಗಳ ಸ್ವ್ಯಾಬ್ನ್ನು ಕೋವಿಡ್ -19 ಪರೀಕ್ಷೆಗೆ ಕಳುಹಿಸಲಾಗಿತ್ತು. ಕುರಿಗಳ ಕೋವಿಡ್ ಪರೀಕ್ಷಾ ವರದಿ ಇವತ್ತು ಬಂದಿದೆ.
ಕೋವಿಡ್ ಚಿಕಿತ್ಸೆ: ಮಂಡ್ಯದಿಂದ ಬಂತು ಆತ್ಮವಿಶ್ವಾಸ ವೃದ್ಧಿಸುವ ಸುದ್ದಿ!
ಕುರಿಗಾಹಿಗೆ ಕಾಡಿದ್ದ ಕೋವಿಡ್
ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಕುರಿ ಕಾಯುವ 22 ವರ್ಷದ ವ್ಯಕ್ತಿಯ ಸ್ವ್ಯಾಬ್ ಪರೀಕ್ಷೆ ಮಾಡಿದಾಗ ಸೋಂಕು ದೃಢಪಟ್ಟಿತ್ತು. ಕುರಿಗಾಹಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದರಿಂದ ಅವನು ಕಾಯುತ್ತಿದ್ದ ಕುರಿಗಳಿಗೂ ಸೋಂಕು ತಗುಲಿದೆ ಎಂದು ಜನರು ಆತಂಕ ವ್ಯಕ್ತಡಿಸಿದ್ದರು. ಹೀಗಾಗಿ ತುಮಕೂರು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಜಿ. ನಂದೀಶ್ ನೇತೃತ್ವದಲ್ಲಿ ಕುರಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗಿದ್ದ 50 ಕುರಿಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 10 ಕುರಿಗಳ ಸ್ವ್ಯಾಬ್ ತೆಗೆದು ಕೋವಿಡ್ ಪರೀಕ್ಷೆಗೆ ಬೆಂಗಳೂರು ಹಾಗೂ ಭೋಪಾಲ್ನಲ್ಲಿರುವ ಲ್ಯಾಬ್ಗಳಿಗೆ ಕಳುಹಿಸಲಾತ್ತು.
ಮಾಂಸ ಬಳಕೆ ಮಾಡದಂತೆ ಸೂಚನೆ
ಕುರಿಗಳಿಗೆ ಕೋವಿಡ್ ಸೋಂಕಿನ ಸಂಶಯ ವ್ಯಕ್ತವಾಗಿದ್ದರಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿನ ಕುರಿ ಮಾಂಸವನ್ನು ಜನರು ಸೇವಿಸುವ ಮುನ್ನ ಪರೀಕ್ಷಿಸಿಕೊಳ್ಳಬೇಕು. ನಂತರವೇ ಅದನ್ನು ಬಳಸಬೇಕು ಎಂದು ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಜಿ. ನಂದೀಶ್ ಸೂಚಿಸಿದ್ದರು. ಹೀಗಾಗಿ ಜನರು ಕೂಡ ಆತಂಕಕ್ಕೆ ಒಳಗಾಗಿದ್ದರು.
ಸಾಮಾನ್ಯವಾಗಿ ಕುರಿಗಳ ಮೂಲಕ ಕೊರೊನಾ ಸೋಂಕು ಹರಡುವುದಿಲ್ಲ ಎಂಬ ವಿಶ್ವಾಸವಿದೆ. ಆದರೂ ಕೂಡ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕುರಿಗಳ ಸ್ವ್ಯಾಬ್ ಸ್ಯಾಂಪಲ್ಗಳ ವರದಿ ಬಂದ ನಂತರವೇ ಕುರಿಗಳನ್ನು ಮೇಯಲು ಗುಂಪಿನಲ್ಲಿ ಬಿಡಬೇಕು ಬೇಡವೇ ಎಂಬುದನ್ನು ನಿರ್ಧರಿಸಲಾಗುವುದು ಎಂದು ಡಾ. ನಂದೀಶ್ ಹೇಳಿದ್ದರು, ಇದೀಗ ಕುರಿಗಳಿಗೆ ಮಾಡಲಾಗಿದ್ದ ಕೋವಿಡ್ ಪರೀಕ್ಷೆಯ ವರದಿಯು ಎರಡೂ ಲ್ಯಾಬ್ನಿಂದ ಬಂದಿದ್ದು ವರದಿಯಲ್ಲಿನ ಅಂಶಗಳು ಮುಂದಿವೆ.
ಕೊವಿಡ್ 19: ಶುಭ ಸುದ್ದಿ ಆಗಸ್ಟ್ 15ಕ್ಕೆ ಸ್ವದೇಶಿ ಲಸಿಕೆ ಬಿಡುಗಡೆ
ಕುರಿಗಳ ಕೋವಿಡ್ ಟೆಸ್ಟ್ ವರದಿ
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯ ಮೇಕೆಗಳಿಗೆ ಕೊರೊನಾ ವೈರಸ್ ಸೋಂಕು ಇಲ್ಲ ಎಂದು ವರದಿ ಬಂದಿದೆ. ಮೇಕೆಗಳ ಗಂಟಲು ದ್ರವ ಮಾದರಿ ಪರೀಕ್ಷಿಸಿದ ಬೆಂಗಳೂರು ಹಾಗೂ ಭೋಪಾಲ್ ಲ್ಯಾಬ್ಗಳಿಂದ ವರದಿ ಬಂದಿದ್ದು, ಕುರಿಗಳಿಗೆ ಕೋವಿಡ್-19 ಸೋಂಕು ತಗುಲಿಲ್ಲ ಎಂದು ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಕೆ.ಜಿ. ನಂದೀಶ್ ಸ್ಪಷ್ಟಪಡಿಸಿದ್ದಾರೆ.
ಪರೀಕ್ಷಿಸಿಗೆ ಒಳಪಡಿಸಿದ್ದ 10 ಕುರಿ-ಮೇಕೆಗಳ ವರದಿಯಲ್ಲಿ ಕೋವಿಡ್-19 ನೆಗೆಟೀವ್ ಬಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಮೆರಿಕದಲ್ಲೂ ನಡೆದಿತ್ತು ಪರೀಕ್ಷೆ
ಸಾಕು ಪ್ರಾಣೀಗಳಿಗೆ ಕೋವಿಡ್-19 ಸೋಂಕು ಹರಡಿರುವ ಶಂಕೆಯಿಂದ ಅಮೆರಿಕದಲ್ಲು ಸಾಕು ಪ್ರಾಣಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅಲ್ಲಿಯೂ ಪ್ರಾಣಿಗಳಲ್ಲಿ ಸೋಂಕು ದೃಢಪಟ್ಟಿರಲಿಲ್ಲ.
ಆದರೂ ಚಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಸೂಚನೆಯಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯ ಮೇಕೆಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ನೆಗಟಿವ್ ಬಂದಿರುವುದರಿಂದ ಜನರು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಹೇಳಿದೆ. ರೈತರು ಕುರಿ ಮೇಕೆ ಸಾಕಾಣಿಕೆ ಮಾಡಬಹುದು, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಸ್ಪಷ್ಟಪಡಿಸಿದೆ.