ರಾಮನಗರದಲ್ಲಿ 145 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಪ್ರವಾಸೋದ್ಯಮ ಅಭಿವೃದ್ಧಿ, ರಾಜಕೀಯ ಲೆಕ್ಕಾಚಾರವೂ ಇದೆ!
ಕರ್ನಾಟಕ ಸರ್ಕಾರವು ಮಹತ್ವದ ಹಾಗೂ ಹೊಸ ಪ್ರವಾಸೋದ್ಯಮ ಕೇಂದ್ರವೊಂದನ್ನು ಅಭಿವೃದ್ಧಿಪಡಿಸುವುದಕ್ಕೆ ಮುಂದಾಗಿದೆ. ರಾಮನಗರ ಜಿಲ್ಲೆಯ ಮಂಚನಬೆಲೆ ಜಲಾಶಯವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಇದು ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿದೆ. ರಾಮನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಸುತ್ತಮುತ್ತಲಿನ ಭಾಗದ ಜನರಿಗೆ ಅನುಕೂಲ ಆಗಲಿದೆ. ಅಲ್ಲದೆ ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿ ಇರುವುದರಿಂದ ಇಲ್ಲಿಗೆ ಬೆಂಗಳೂರಿನಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಇದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಪ್ಲಾನ್ ಆಗಿದೆ. ಹಾಗಾದರೆ ರಾಮನಗರದ ಮಂಚನಬೆಲೆ ಜಲಾಶಯದಲ್ಲಿ ಯಾವ ರೀತಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವ ಪ್ಲಾನ್ ಇದೆ. ರಾಜಕೀಯ ಲೆಕ್ಕಾಚಾರಗಳೇನು ಎನ್ನುವ ವಿವರ ಇಲ್ಲಿದೆ.
ರಾಮನಗರದಲ್ಲಿ ಇದೀಗ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಾಗಿದೆ. ಕೆಲವು ವರ್ಷಗಳಿಗಿಂತ ಮೊದಲು ಜೆಡಿಎಸ್ನ ಭದ್ರಕೋಟೆಯಾಗಿದ್ದ ರಾಮನಗರ ಇದೀಗ ಅಲ್ಲಿ ತನ್ನ ಅಸ್ತಿತ್ವಕ್ಕಾಗಿ ಸೆಣಸುತ್ತಿದೆ. ಕಾಂಗ್ರೆಸ್ ಇಲ್ಲಿ ಪ್ರಬಲವಾಗುತ್ತಿದ್ದು. ಇದೇ ಸಮಯದಲ್ಲಿ ಈ ಜಿಲ್ಲೆಯಲ್ಲಿ ಕೆಲವು ಪ್ರಮುಖ ಯೋಜನೆಗಳನ್ನು ರಾಜ್ಯ ಸರ್ಕಾರ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಹಾಕಿಕೊಳ್ಳಲಾಗುತ್ತಿದೆ. ಮಂಚನಬೆಲೆ ಜಲಾಶಯ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸಾರ್ವಜನಿಕ - ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ನಿರ್ಧರಿಸಲಾಗಿದೆ. ಈ ಯೋಜನೆಗೆ ಬರೋಬ್ಬರಿ 145 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಂಚನಬೆಲೆ ಜಲಾಶಯ ಪ್ರದೇಶವು ಒಟ್ಟು 72.3 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಇದೆ. ಇಲ್ಲಿ ರೆಸಾರ್ಟ್, ಹೋಟೆಲ್, ವೀಕ್ಷಣಾ ವೇದಿಕೆ ನಿರ್ಮಾಣವಾಗಲಿದೆ. ಅಲ್ಲದೆ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಸಹ ಇಲ್ಲಿ ನಿರ್ಮಾಣ ಮಾಡುವುದಕ್ಕೆ ಪ್ಲಾನ್ ಹಾಕಿಕೊಳ್ಳಲಾಗಿದೆ. ಜಲಸಂಪನ್ಮೂಲ ಇಲಾಖೆ ವತಿಯಿಂದ ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಾವೇರಿ ನೀರಾವರಿ ನಿ.ಲಿ ಈ ಯೋಜನೆ ಜಾರಿಗೆ ಸಂಬಂಧಿಸಿದಂತ ಟೆಂಡರ್ ಆಹ್ವಾನಿಸಿದೆ.
ಮೂರು ವಿಭಾಗವಾಗಿ ಅಭಿವೃದ್ಧಿ: ಮಂಚನಬೆಲೆ ಜಲಾಶಯ ವ್ಯಾಪ್ತಿಯಲ್ಲಿ ಮೂರು ವಿಭಾಗಗಳ ಮಾದರಿಯಲ್ಲಿ ಅಭಿವೃದ್ಧಿಯನ್ನು ಮಾಡುವುದಕ್ಕೆ ಪ್ಲಾನ್ ಹಾಕಿಕೊಳ್ಳಲಾಗಿದೆ. ಮೊದಲನೆಯ ವಿಭಾಗವನ್ನು ಆಗಮನ, ಎರಡನೇಯದ್ದನ್ನು ಸಾಹಸ ವಿಭಾಗ ಹಾಗೂ ಮೂರನೇ ವಿಭಾಗವನ್ನು ವಿರಾಮ ವಲಯ ಎಂದು ಅಭಿವೃದ್ಧಿಪಡಿಸುವುದಕ್ಕೆ ನಿರ್ಧರಿಸಲಾಗಿದೆ. ಆಗಮನ ವಲಯ 3 ಎಕರೆ ವ್ಯಾಪ್ತಿಯಲ್ಲಿ ಇರಲಿದೆ. ಇಲ್ಲಿ ಟಿಕೆಟ್ ಪ್ಲಾಜಾ, ಟಾಯ್ಟ್ರೈನ್ ಹಾಗೂ 100 ವಾಹನಗಳಿಗೆ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
ಅಲ್ಲದೇ 15.5 ಎಕರೆ ಇರುವ ಮತ್ತೊಂದು ವಿಭಾಗವನ್ನು ಪರಿಸರ-ಪ್ರವಾಸೋದ್ಯಮ ವಲಯ ಎಂದು ಗುರುತುಮಾಡಿಕೊಳ್ಳಲಾಗಿದೆ. ಇಲ್ಲಿ 55 ರೂಮ್ಗಳು ಇರುವ ಹೋಟೆಲ್, ರೆಸಾರ್ಟ್, ಸ್ಪಾ, ಈಜುಕೊಳಗಳು ಹಾಗೂ ಮಂಚನಬೆಲೆ ಜಲಾಶಯವನ್ನು ನೋಡುವುದಕ್ಕೆ ಅವಕಾಶವಿರುವ ಜಾಗ ಅಭಿವೃದ್ಧಿಯಾಗಲಿದೆ.
ಸಾಹಸ ವಲಯವು 15.3 ಎಕರೆ ಇರಲಿದೆ. ಇದರಲ್ಲಿ ರಾಕ್ - ಕ್ಲೈಂಬಿಂಗ್ ವಾಲ್ ಮತ್ತು ಹೈ-ರೋಪ್ ಸೇರಿದಂತೆ ಹಲವು ಸಾಹಸ ಕ್ರೀಡೆಗಳು ಇರಲಿವೆ. ಸಾಂಸ್ಕೃತಿಕ ಗ್ರಾಮ, ಸ್ಥಳೀಯ ಸಂಸ್ಕೃತಿ ಹಾಗೂ ಆಹಾರ ಪ್ರೋತ್ಸಾಹಿಸುವ ಮಳಿಗೆಗಳು ಸೇರಿದಂತೆ ಹಲವು ವಿಶೇಷತೆಗಳು ಇರಲಿವೆ ಎಂದು ಹೇಳಲಾಗಿದೆ.
ರಾಜಕೀಯ ಲೆಕ್ಕಾಚಾರವೇನು: ದಶಕಗಳ ಕಾಲ ರಾಮನಗರದಲ್ಲಿ ಜೆಡಿಎಸ್ ಪಾರುಪತ್ಯವಿತ್ತು. ಆದರೆ, ಇದೀಗ ರಾಮನಗರದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ. ಚನ್ನಪಟ್ಟಣದಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಇಲ್ಲಿ ಜೆಡಿಎಸ್ ಪಕ್ಷವನ್ನು ಮಣಿಸಿದೆ. ಇನ್ನು ಈ ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಾಗಿದೆ. ಈ ಬೃಹತ್ ಅಭಿವೃದ್ಧಿ ಯೋಜನೆಯ ಹಿಂದೆ ರಾಜಕೀಯ ಹಾಗೂ ಜನರನ್ನು ಸೆಳೆಯುವ ಪ್ರಯತ್ನವೂ ಇದೆ ಎಂದು ಹೇಳಲಾಗಿದೆ.












Click it and Unblock the Notifications