ಚಿತ್ರ ಸುದ್ದಿ: ಕಾಂಗ್ರೆಸ್ ಸಿಡಿ ಸ್ಫೋಟ - ಈವರೆಗಿನ ಐದು ಬೆಳವಣಿಗೆ
ಸೋಮವಾರದ ಮಧ್ಯಾಹ್ನದವರೆಗೂ ತಮಿಳುನಾಡಿನ ರಾಜಕಾರಣದ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಮಾಧ್ಯಮಗಳ ಗಮನ ಇದ್ದಕ್ಕಿದ್ದಂತೆ ಬೆಂಗಳೂರಿನತ್ತ ಹೊರಳಿತು. ಹಾಗಾಗಿದ್ದು, ಕಾಂಗ್ರೆಸ್ ನಾಯಕ ಉಗ್ರಪ್ಪ ಬಿಡುಗಡೆಗೊಳಿಸಿದ ಸಿಡಿ.
ಸೋಮವಾರದ ಸುದ್ದಿ ಸಂತೆಯಲ್ಲಿ ಹೆಚ್ಚು ಸದ್ದು ಮಾಡಿದ ಸುದ್ದಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರಾದ ಉಗ್ರಪ್ಪ ಅವರು ಬಿಡುಗಡೆಗೊಳಿಸಿದ, ಬಿಜೆಪಿಯ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ನಡುವಿನ ಕಾಂಗ್ರೆಸ್ ವಿರುದ್ಧದ ಪಿತೂರಿಯೊಂದರ ಮಾತುಕತೆಯ ಸಿಡಿ.[ಹೈಕಮಾಂಡ್ ಕಪ್ಪ: ಬಿಜೆಪಿ ಮೇಲೆ 'ಸಿಡಿ' ಎಸೆದ ಕಾಂಗ್ರೆಸ್]
ಸಿಎಂ ಸಿದ್ದರಾಮಯ್ಯ ಅವರು, ಹೈಕಮಾಂಡ್ ಗೆ ಕೋಟಿ ರು. ಹಣ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗೆ ಬಾಂಬ್ ಸ್ಫೋಟಿಸಿದ್ದರು. ಆದರೆ, ಅವರ ಹೇಳಿಕೆಯು ಪಿತೂರಿಯಿಂದ ಕೂಡಿರುವಂಥದ್ದು ಎಂಬುದು ಕಾಂಗ್ರೆಸ್ ನಾಯಕರ ಹೇಳಿಕೆ.[ಯಡಿಯೂರಪ್ಪ- ಅನಂತ್ ಮಾತನಾಡಿಕೊಂಡಿದ್ದು ಯಾರ ಬಗ್ಗೆ?]
ಇದಕ್ಕೆ ಸಾಕ್ಷಿಯಾಗಿಯೇ ಅವರು ಅನಂತ ಕುಮಾರ್ ಹಾಗೂ ಯಡಿಯೂರಪ್ಪ ನಡುವಿನ ದೂರವಾಣಿ ಸಂಭಾಷಣೆಯ ಸಿಡಿಯೊಂದನ್ನು ಬಿಡುಗಡೆ ಮಾಡಿವೆ. ಇದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.[ಹೈಕಮಾಂಡ್ ಗೆ ಕಪ್ಪ ವಿವಾದ: ಕುಮಾರಸ್ವಾಮಿ ಹೇಳಿದ್ದೇನು?]
ತಾವು ತೋಡಿದ ಹಳ್ಳಕ್ಕೆ ತಾವೇ ಬಿದ್ರಾ ಮಾಜಿ ಸಿಎಂ
ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಹೈಕಮಾಂಡ್ ಗೆ ಹಣ ನೀಡಿರುವುದರ ಬಗ್ಗೆ ಮಾತನಾಡಿರುವುದು ಗಮನಾರ್ಹ ಅಂಶ.
ಕುಮಾರಣ್ಣ ಪ್ರತಿಕ್ರಿಯೆ
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್, ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ತಮ್ಮ ಹೈಕಮಾಂಡ್ ಗಳಿಗೆ ಕಪ್ಪಕಾಣಿಕೆ ಸಲ್ಲಿಸಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಆರೋಪಿಸಿದ್ದಾರೆ.
ಮಾನನಷ್ಟ ಮೊಕದ್ದಮೆ ಬೆದರಿಕೆ
ಸಿದ್ದರಾಮಯ್ಯ ಹೈಕಮಾಂಡ್ ಗೆ 1000 ಕೋಟಿ ರು. ನೀಡಿದ್ದಾರೆಂಬ ವಿಚಾರವನ್ನು ತಮ್ಮ ಡೈರಿಯಲ್ಲಿರುವುದಾಗಿ ಹೇಳಿರುವ ಯಡಿಯೂರಪ್ಪ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವಿಧಾನ ಪರಿಷತ್ ನಾಯಕ ಗೋವಿಂದ ರಾಜು ಗುಡುಗಿದ್ದಾರೆ.
ಸುಮ್ಮನಾದ ನಾಯಕರು
ಕಾಂಗ್ರೆಸ್ ಪಕ್ಷವು ಸಿಡಿ ಬಿಡುಗಡೆಗೊಳಿಸಿರುವ ವಿಚಾರದ ಪ್ರತಿಕ್ರಿಯೆ ನೀಡಲು ಬಿಜೆಪಿ ನಾಯಕರಾದ ಅನಂತ ಕುಮಾರ್ ಹಾಗೂ ಬಿಎಸ್ ಯಡಿಯೂರಪ್ಪ ನಿರಾಕರಿಸಿದ್ದಾರೆ.
ಸಿಡಿ ಕೊಟ್ಟಿದ್ದು ಬಿಜೆಪಿಯವರೇ ಅಂತೆ
ಸಂಜೆ ವೇಳೆಗೆ ಮಾಧ್ಯಮಗಳ ಜತೆ ಮಾತನಾಡಿದ ಕಾಂಗ್ರೆಸ್ ನಾಯಕ ಉಗ್ರಪ್ಪ, ಯಡಿಯೂರಪ್ಪ ಹಾಗೂ ಅನಂತ ಕುಮಾರ್ ಅವರ ನಡುವಿನ ಸಂಭಾಷಣೆಯನ್ನು ಸಂಗ್ರಹಿಸಿ ಸಿಡಿ ಮಾಡಿ ನೀಡಿದ್ದು ಬಿಜೆಪಿಯವರೇ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.