KPCC President: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೆ, ಕಾದು ನೋಡಿ ಎಂದ ಸತೀಶ್ ಜಾರಕಿಹೊಳಿ
ಹುಬ್ಬಳ್ಳಿ, ಫೆಬ್ರವರಿ 22: ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತದೆ. ಯಾವಾಗ ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ. ಕೆಪಿಸಿಸಿ ಅಧ್ಯಕ್ಷರನ್ನ ನೇಮಿಸುವ ಅಧಿಕಾರ ನಮಗಿಲ್ಲ, ಅದನ್ನ ಹೈಕಮಾಂಡ್ ನೋಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಪ್ರಬಲ ಆಕಾಂಕ್ಷಿ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ, ಚರ್ಚೆ ಆಗಿಲ್ಲ, ಸಮಯ ಬಂದಾಗ ನೋಡೋಣ. ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರೇ ಹೇಳಿದ್ದಾರೆ ಎಂದರು>
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇಶದ ನಾನಾ ರಾಜ್ಯಗಳ ಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಿದೆ. ಈಗ ತಕ್ಷಣ ಮಾಡಲು ಆಗದೆ ಇರಬಹುದು, ಆದರೆ, ಆಗೇ ಆಗುತ್ತದೆ. ಅವರು ಯಾವಾಗ ಮಾಡ್ತಾರೆ. ಅನ್ನೋದನ್ನ ಕಾದು ನೋಡೋಣ. ನಾನಂತೂ ಯಾವುದೇ ರೀತಿಯ ಆಕಾಂಕ್ಷೆ ಅಲ್ಲಾ, ಸಂಧರ್ಭ ಬಂದಾಗ ನೋಡೋಣ. ನಾನು ಅಧ್ಯಕ್ಷ ಆಗಬೇಕು ಅಂತ ನನ್ನ ಹಿಂಬಾಲಕರು, ಪ್ರಮುಖರು ಇಂಗಿತ ವ್ಯಕ್ತಪಡಿಸಿದ್ದಾರೆ, ಇದು ಸಹಜ ಕೂಡ ಎಂದು ಹೇಳಿದರು.

ಬಜೆಟ್ ನಂತರ ಸಿಎಂ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಇದು ನನ್ನ ವ್ಯಾಪ್ತಿಗೆ ಬರಲ್ಲ ಅಂತ ನಾನು ಹೇಳಿದ್ದೇನೆ. ನಾನು ಮಂತ್ರಿ ಮಂಡಲದಲ್ಲಿ ಒಬ್ಬ ಮಂತ್ರಿ ಅಷ್ಟೇ, ಆ ಬಗ್ಗೆ ಚರ್ಚೆ ಮಾಡುವ ಅಧಿಕಾರ ನಮಗಿಲ್ಲ. ಏನೇ ಇದ್ರು ಈ ಬಗ್ಗೆ ವರಿಷ್ಟರೆ ಚರ್ಚೆ ಮಾಡಬೇಕು. ಈಗಾಗಲೇ ಸಚಿವರ ಕಾರ್ಯ ವೈಖರಿ ಬಗ್ಗೆ ವರದಿ ತೆಗೆದುಕೊಂಡಿದ್ದಾರೆ, ಯಾವ ಸಚಿವರನ್ನ ತೆಗೆದುಕೊಳ್ಳಬೇಕು, ಕೈ ಬಿಡಬೇಕು ಹಿರಿಯ ನಾಯಕರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪ್ರೋಗ್ರೆಸ್ ರಿಪೋರ್ಟ್ ನೋಡಿ ವರಿಷ್ಟರೆ ತೀರ್ಮಾನ ಕೈಗೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಡಿಕೆ ಶಿವಕುಮಾರ್ ಇವಾಗ ಅಲ್ಲ ಮೊದಲಿನಿಂದಲೂ ರೇಸ್ ನಲ್ಲಿದಾರೆ. ಮುಂಚೆಯಿಂದಲೂ ರೇಸ್ ನಲ್ಲಿದಾರೆ. ಅದರಲ್ಲಿ ಪ್ರಶ್ನೆ ಇಲ್ಲ,ಇದಕ್ಕೆಲ್ಲ ವರಿಷ್ಠರ ನಿರ್ಧಾರ ತಗೊಬೇಕು. ಸಮಯಕ್ಕಾಗಿ ಕಾಯಬೇಕು,ಕಾದು ನೋಡೋಣ. ಬಿಜೆಪಿ ಪಕ್ಷದ ಬಗ್ಗೆ ಹೇಳೋಕೆ ಆಗಲ್ಲ. ಅದು ಅವರ ಇಂಟರನಲ್ ಸಮಸ್ಯೆ, ಅವರ ಪಕ್ಷದ ವರಿಷ್ಠರ ಇದ್ದಾರೆ. ನಾವು ಯಾಕೆ ಮಾತಾಡಬೇಕು ಎಂದ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.
ಇನ್ನೂ ಗ್ಯಾರಂಟಿ ಯೋಜನೆಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ ಅವರು, ಗ್ಯಾರಂಟಿ ನಿಲ್ಲಿಸಿಲ್ಲ ಆದರೆ ವಿಳಂಭ ಆಗಿರಬಹುದು. ನಾವು ಇದೇ ದಿನ ಕೊಡ್ತೀವಿ ಅಂತಿಲ್ಲ. ಕೆಲ ಸಲ ಲೇಟ್ ಆಗಿರಬಹುದು. ಇಂತಹ ದಿನವೇ ಕೊಡ್ತೀವಿ ಅಂತಿಲ್ಲ, ಸರ್ಕಾರ ಅನ್ನೋದು ಸಮುದ್ರ ತರಹ. ಕೆಲ ಸಲ ಎರಡು ತಿಂಗಳು ಸೇರಿ ಕೊಡಬಹುದು. ಆದರೆ, ನಾವು ಯಾವ ಗ್ಯಾರಂಟಿ ನಿಲ್ಲಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.












Click it and Unblock the Notifications