ಹೊಂದಾಣಿಕೆ ರಾಜಕಾರಣ: ತಾಕತ್ತಿದ್ರೆ ಹೆಸರು ಹೇಳಿ ಎಂದು ಪ್ರತಾಪ್ ಸಿಂಹ, ಸಿ.ಟಿ. ರವಿಗೆ ಕಾಂಗ್ರೆಸ್ ಸವಾಲು!
ರಾಜ್ಯ ಬಿಜೆಪಿ ಹಿರಿಯ ನಾಯಕರು ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ್ದ ಪ್ರತಾಪ್ ಸಿಂಹ, ತಮ್ಮದೇ ಪಕ್ಷದ ನಾಯಕತ ವಿರುದ್ಧ ಕಿಡಿ ಕಾರಿದ್ದರು.
ಕೆಲ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರೊಂದಿಗೆ ಕೈ ಜೋಡಿಸಿದ್ದಾರೆ, ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ನಾಯಕರನ್ಬು ಹೆದರಿಸುತ್ತಾರೆ, ಕಾಂಗ್ರೆಸ್ ಅಧಿಕಾರಕ್ಕೆ ಬಿಜೆಪಿ ನಾಯಕರನ್ನು ಹೆದರಿಸುತ್ತಾರೆ, ಯಾವ ಹಗರಣಗಳ ತನಿಖೆ ಮಾಡಲ್ಲ, ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದು ಹೇಳಿದ್ದರು.

ಬಿಜೆಪಿಯ ಮತ್ತೊಬ್ಬ ನಾಯಕ ಸಿಟಿ ರವಿ ಕೂಡ ಇದೇ ಆರೋಪ ಮಾಡಿದ್ದರು, ಈಗ ಪ್ರತಾಪ್ ಸಿಂಹ ಅದಕ್ಕೆ ದನಿಗೂಡಿಸಿದ್ದಾರೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತಂತೆ ಕೆಲ ಬಿಜೆಪಿ ನಾಯಕರಷ್ಟೇ ಪ್ರಶ್ನೆ ಮಾಡುತ್ತಿದ್ದು, ಹಲವು ಹಿರಿಯ ನಾಯಕರು ಮೌನಕ್ಕೆ ಜಾರಿರುವುದು ಪ್ರತಾಪ್ ಸಿಂಹ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಾಪ್ ಸಿಂಹ ಮಾಡಿರುವ ಆರೋಪವನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದು ಹೆಸರು ಬಹಿರಂಗಪಡಿಸಲಿ, ಸುಮ್ಮನೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದರು.
ತಾಕತ್ತಿದ್ದರೆ ಹೆಸರು ಹೇಳಿ ಎಂದ ಕಾಂಗ್ರೆಸ್
ಇನ್ನು ಕರ್ನಾಟಕ ಕಾಂಗ್ರೆಸ್ ಪ್ರತಾಪ್ ಸಿಂಹ, ಸಿಟಿ ರವಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ತಾಕತ್ತಿದ್ದರೆ ಹೆಸರು ಬಹಿರಂಗಪಡಿಸಲಿ ಎಂದು ಇಬ್ಬರೂ ನಾಯಕರಿಗೆ ಸವಾಲಾಕಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ರಿಟೈರ್ಡ್ ಹರ್ಟ್ ಆಗಿರುವ ಸಿಟಿ ರವಿ ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ, ಅವರ ಅರಣ್ಯ ರೋಧನಕ್ಕೆ ಸಂಸದ ಪ್ರತಾಪ್ ಸಿಂಹ ದನಿ ಜೋಡಿಸಿದ್ದಾರೆ. ಇಬ್ಬರಿಗೂ ದಮ್ಮು ತಾಕತ್ತು ಇದ್ದರೆ ಅಡ್ಜಸ್ಟಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ. ಅಂದಹಾಗೆ ಬಿಜೆಪಿಯೊಂದಿಗೆ ಅಡ್ಜಸ್ಟ್ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ ಸವರಿಕೊಂಡು ನಗುತ್ತಿದ್ದಾರಂತೆ ಅಲ್ಲವೇ? ಎಂದು ಕರ್ನಾಟಕ ಬಿಜೆಪಿಯ ಕಾಲೆಳೆದಿದೆ.
ಆರೋಪ ನಿರಾಕರಿಸಿದ ಕಾಂಗ್ರೆಸ್ ನಾಯಕರು
ಪ್ರತಾಪ್ ಸಿಂಹ ಅವರ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, "ಪ್ರತಾಪ್ ಸಿಂಹ ಅವರು ಸುಮ್ಮನೆ ಮಾತನಾಡಬಾರದು, ಯಾರು ಯಾರ ಜೊತೆ ಕೈ ಜೋಡಿಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಿ" ಎಂದು ತಿರುಗೇಟು ನೀಡಿದ್ದರು.
ಹೆಚ್.ಸಿ.ಮಹದೇವಪ್ಪ ಕೂಡ ಪ್ರತಿಕ್ರಿಯೆ ನೀಡಿ, ಪ್ರತಾಪ್ ಸಿಂಹ ಆಡುವ ಮಾತಿಗೆ ಬೆಲೆ, ತೂಕ ಇರುವುದಿಲ್ಲ ಅವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ ಎಂದು ಹೇಳಿದ್ದರು.
ಪ್ರತಾಪ್ ಸಿಂಹ ಅವರ ಆರೋಪದ ಬಗ್ಗೆ ಬಿಜೆಪಿ ಹಿರಿಯ ನಾಯಕರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ಹೀನಾಯವಾಗಿ ಸೋತಿರುವುದು, ಕೇಂದ್ರ ನಾಯಕರು ರಾಜ್ಯದ ನಾಯಕರ ಮಾತುಗಳಿಗೆ ಮನ್ನಣೆ ಕೊಡದಿರುವ ಕಾರಣ ಹಲವು ಹಿರಿಯ ನಾಯಕರು ಮೌನಕ್ಕೆ ಜಾರಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಇನ್ನೂ ವಿರೋಧ ಪಕ್ಷದ ನಾಯಕನನ್ನು ಆರಿಸದೇ ಇರುವುದು ಕೂಡ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಿ ಪರಿಣಮಿಸಿದೆ.












Click it and Unblock the Notifications