ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ರೋಹಿತ್ ಚಕ್ರತೀರ್ಥ ಸಮಿತಿ ಬರಖಾಸ್ತು?
ಬೆಂಗಳೂರು, ಮೇ. 31: ಒಂದರ ಮೇಲೊಂದು ವಿವಾದ ಹುಟ್ಟುಹಾಕಿ ಸರ್ಕಾರವನ್ನು ಮುಜಗರಕ್ಕೀಡುಮಾಡುತ್ತಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನ ಬರಖಾಸ್ತು ಗೊಳಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
6 ರಿಂದ 10 ನೇ ತರಗತಿ ವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಪರಿಷ್ಕರಣೆ, 6 ರಿಂದ 10 ನೇ ತರಗತಿ ವರೆಗಿನ ಕನ್ನಡ ಪಠ್ಯ ಪುಸ್ತಕ ಹಾಗೂ ಮೂರನೇ ತರಗತಿಯ ಪರಿಸರ ಅಧ್ಯಯನ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ಮಾಡಿತ್ತು.
ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಪಠ್ಯಕ್ಕೆ ಹೊಸದಾಗಿ ಅರ್ಎಸ್ಎಸ್ ಸ್ಥಾಪಕ ಹೆಡ್ಗೇವಾರ್ ಅವರ ಲೇಖನ ಸೇರ್ಪಡೆ, ಟಿಪ್ಪು ಸುಲ್ತಾನ್ ಮತಾಂಧ ಎಂದು ಬಿಂಬಿಸುವ ಪದಗಳ ಸೇರ್ಪಡೆ, ಸೂಲಿಬೆಲೆ ಚಕ್ರವರ್ತಿ ಬರೆದಿರುವ 'ತಾಯಿ ಭಾರತಿಯ ಅಮರ ಪುತ್ರರು' ವಿಷಯ ಸೇರ್ಪಡೆ, ಸಾ.ರಾ. ಅಬ್ಬೂಬಕರ್ , ಎ.ಎನ್. ಮೂರ್ತಿರಾವ್ ಕುರಿತ ವಿಷಯ ಪಠ್ಯ ಕೈ ಬಿಟ್ಟಿರುವುದು ಹೀಗೆ ನಾನಾ ವಿಷಯಗಳಲ್ಲಿ ಬದಲಾವಣೆ ಮಾಡಿ ಚಕ್ರತೀರ್ಥ ಸಮಿತಿ ಮಾಡಿದ್ದ ಪರಿಷ್ಕರಣೆ ಭಾರೀ ವಿವಾದಕ್ಕೆ ನಾಂದಿ ಹಾಡಿತ್ತು. ಜಗಜ್ಯೋತಿ ಬಸವಣ್ಣ ಕುರಿತ ಪಠ್ಯದಲ್ಲಿ ಲೋಪ ಎಸಗಿರುವುದು ಇದೀಗ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದಕ್ಕೂ ಮೊದಲು ರೋಹಿತ್ ಚಕ್ರತೀರ್ಥ ಕುವೆಂಪು ಅವರ ನಾಡಗೀತೆಯನ್ನು ವಿರೂಪಗೊಳಿಸಿ ಭಾರೀ ವಿವಾದ ಎಬ್ಬಿಸಿದ್ದರು.
ಮಕ್ಕಳ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿ ರೋಹಿತ್ ಚಕ್ರತೀರ್ಥ ಮಾಡಿರುವ ಎಡವಟ್ಟುಗಳ ವಿರುದ್ಧ ರಾಜ್ಯದಲ್ಲಿ ಪ್ರತಿಪಕ್ಷಗಳು, ಪ್ರಗತಿಪರ ಚಿಂತಕರು ಮತ್ತು ಸಾಹಿತಿಗಳು ಧ್ವನಿಯೆತ್ತಿದ್ದರು. ಚಕ್ರತೀರ್ಥ ಸಮಿತಿ ಮಾಡಿದ ಕಾರ್ಯವನ್ನು ಎಷ್ಟೇ ಸಮರ್ಥನೆ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ರಾಜ್ಯದ ಬಹುದೊಡ್ಡ ಲಿಂಗಾಯುತ ಮತ್ತು ಒಕ್ಕಲಿಗ ಸಮುದಾಯಗಳು ಕೂಡ ಚಕ್ರತೀರ್ಥ ಸಮಿತಿಯ ಕೊಡುಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.
ಸ್ವಾಮೀಜಿಗಳಿಂದಲೂ ಕೆಂಗಣ್ಣು
ಕುವೆಂಪು ಅವರ ನಾಡಗೀತೆಯನ್ನು ಅವಹೇಳನ ಮಾಡಿದ ವಿವಾದ ಭುಗಿಲೆದ್ದ ಬೆನ್ನಲ್ಲೇ ಕುವೆಂಪು ಪ್ರತಿಷ್ಠಾನಕ್ಕೆ ಹಂಪಾ ನಾಗರಾಜ್ ಅವರು ರಾಜೀನಾಮೆ ನೀಡಿದ್ದರು. ಇದರ ಮದ್ಯೆ ಕುವೆಂಪು ನಾಡಗೀತೆಗೆ ಅವಮಾನ ಮಾಡಿದ ಬಗ್ಗೆ ಬೇಸರ ವ್ಯಕ್ತಪಡಿಸಿ ಒಕ್ಕಲಿಗ ಸಮುದಾದಯ ಪ್ರಧಾನ ಸ್ವಾಮೀಜಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ನಾಡಗೀತೆಯನ್ನು ವಿರೂಪಗೊಳಿಸಿದ ವ್ಯಕ್ತಿಯನ್ನು ಹೀಗೆ ಬಿಟ್ಟರೆ ನಾಳೆ ರಾಷ್ಟ್ರಗೀತೆಯನ್ನು ಅವಮಾನಿಸುತ್ತಾರೆ. ಅಂತಹ ವ್ಯಕ್ತಿ ವಿರುದ್ಧ ಕ್ರಮ ಜರುಗಿಸುವುದು ಬಿಟ್ಟು ಕನ್ನಡ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸದಸ್ಯರನ್ನಾಗಿ ಮಾಡಿರುವುದು ಎಷ್ಟು ಸರಿ ಎಂದು ನಿರ್ಮಾಲಾನಂದ ಶ್ರೀಗಳು ಬಿ. ಸಿ. ನಾಗೇಶ್ ಅವರನ್ನು ಪ್ರಶ್ನಿಸಿದ್ದಾರೆ.
9ನೇ ತರಗತಿಯ 'ಸಮಾಜ ವಿಜ್ಞಾನ' ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1ರಲ್ಲಿ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ ಪ್ರಕಟಿಸಿರುವುದಕ್ಕೆ ಸಂಬಂಧಿಸದಿಂತೆ ತರಳಬಾಳು ಜಗದ್ಗುರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು. ಇಲ್ಲವೇ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸದಿದ್ದರೆ ನಾಡಿನಾದ್ಯಂತ ಹೋರಾಟ ನಡೆಯುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಅನೇಕ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಚಕ್ರತೀರ್ಥ ಸಮಿತಿ ಬರಖಾಸ್ತು ?
ಈ ರೀತಿ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಎಡವಟ್ಟುಗಳು ಸರ್ಕಾರಕ್ಕೆ ಮುಜುಗರ ತಂದಿವೆ. ಚುನಾವಣೆ ಸಂದರ್ಭದಲ್ಲಿ ಒಕ್ಕಲಿಗ, ಲಿಂಗಾಯತ, ಮುಸ್ಲಿಂ ಹೀಗೆ ಎಲ್ಲಾ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿ ಪಕ್ಷಗಳು ಇದೇ ವಿಚಾರ ಮುಂದಿಟ್ಟುಕೊಡಂಡು ರಾಜಕೀಯವಾಗಿ ಲಾಭ ಪಡೆದುಕೊಳ್ಳುತ್ತಿವೆ. ಮಾತ್ರವಲ್ಲ ಬಿಜೆಪಿ ಪಕ್ಷದಲ್ಲಿನ ಶಾಸಕರು ಕೂಡ ಚಕ್ರತೀರ್ಥ ಸಮಿತಿ ಕೊಟ್ಟಿರುವ ಕೊಟ್ಟಿರುವ ಕೊಡುಗೆಗಳ ಬಗ್ಗೆ ಬೇಸರ ತೋಡಿಕೊಂಡಿದ್ದಾರೆ. ಈ ವಿವಾದಗಳಿಗೆ ತಿಲಾಂಜಲಿ ಇಡುವ ನಿಟ್ಟಿನಲ್ಲಿ ಚಕ್ರತೀರ್ಥ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಬರಕಾಸ್ತುಗೊಳಿಸಿ ಹಳೇ ಪಠ್ಯ ಪುಸ್ತಕಗಳನ್ನೇ ಮುಂದುವರೆಸಲು ಬೊಮ್ಮಾಯಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ. ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆದು ಚರ್ಚೆ ನಡೆಸಿ ಬರಖಾಸ್ತು ಅಧಿಸೂಚನೆ ಹೊರಡಿಸಲು ಬೊಮ್ಮಾಯಿ ಸರ್ಕಾರ ಚಿಂತನೆ ನಡೆಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.