ದೇವಸ್ಥಾನಗಳ ಪ್ರಸಾದದ ಮೇಲೆ ಎಕ್ಸ್ಪೈರಿ ಡೇಟ್ ಇನ್ಮುಂದೆ ಕಡ್ಡಾಯ
ಬೆಂಗಳೂರು, ಡಿಸೆಂಬರ್ 26: ಚಾಮರಾಜನಗರದ ಸುಳ್ವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವನೆಯಿಂದ 17 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದ ದೇವಸ್ಥಾನಗಳಲ್ಲಿ ಪ್ಯಾಕ್ ಮಾಡಿ ವಿತರಿಸುವ ಪ್ರಸಾದದ ಮೇಲೆ ಎಕ್ಸ್ಪೈರಿ ಡೇಟ್ ನಮೂದಿಸುವುದು ಕಡ್ಡಾಯಗೊಳಿಸಲು ಚರ್ಚೆ ನಡೆದಿದೆ.
ಕೇಂದ್ರ ಆಹಾರ ಮತ್ತು ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮ ಪ್ರಕಾರ ಎಕ್ಸ್ಪೈರಿ ಡೇಟ್ ನಮೂದಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರಸಾದದ ಪೊಟ್ಟಣಗಳ ಮೇಲೆ ದೇವಾಲಯದ ಹೆಸರು, ತಯಾರಾದ ದಿನಾಂಕ, ಬ್ಯಾಚ್ ನಂಬರ್, ತೂಕ, ಬಳಕೆಯ ಅವಧಿ, ಪ್ರಸಾದಕ್ಕೆ ಬಳಸಿರುವ ಪದಾರ್ಥ ಇತ್ಯಾದಿ ಅಂಶಗಳನ್ನು ನಮೂದಿಸಬೇಕು.

ಈ ನಿಟ್ಟಿನಲ್ಲಿ ದೇವಾಲಯಗಳಿಗೆ ಎಫ್ಎಸ್ಎಸ್ಎಐ ಪರವಾನಗಿ ಕಡ್ಡಾಯಗೊಳಿಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನಾಪತ್ರ ರವಾನಿಸಲಾಗಿದೆ. ಪ್ರಸಾದ ಹಾಗೂ ಅನ್ನ ದಾಸೋಹ ನಡೆಸುವ ಎಲ್ಲಾ ದೇವಾಲಯಗಳು ಫುಡ್ ಲೈಸೆನ್ಸ್ ಪಡೆಯಬೇಕಾಗುತ್ತದೆ.
ಮಾರುಕಟ್ಟೆಯಲ್ಲಿ ದೊರೆಯುವ ಪ್ರತಿಯೊಂದು ಆಹಾರ ಪದಾರ್ಥಕ್ಕೂ ಉತ್ಪಾದನಾ ದಿನಾಂಕ ಹಾಗೂ ಬಳಕೆ ಅವಧಿ ದಿನಾಂಕ ನಮೂದಿಸುವುದು ಕಡ್ಡಾಯ. ಇದೇ ನಿಯಮ ದೇವಾಲಯಗಳಿಗೂ ಅನ್ವಯವಾಗಿತ್ತು. ಆದರೆ ಭಕ್ತರ ಧಾರ್ಮಿಕ ಭಾವನೆಗಳಿಗೆ ಅಡ್ಡಿಬರುತ್ತದೆ ಎನ್ನುವ ಕಾರಣಕ್ಕೆ ಗಂಭೀರವಾಗಿ ಪರಿಗಣಿಸಿರಲಿಲ್ಲ. 2016ರ ನಿಯಮವನ್ನು ಜಾರಿಗೆ ತರಲು ಪ್ರಯತ್ನ ನಡೆದಿದೆ.
ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ಎಲ್ಲಾ ದೇವಾಲಯಗಳಿಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಸುವಂತೆ ದೇವಾಲಯಗಳಿಗೆ 20 ಅಂಶಗಳ ಸುತ್ತೋಲೆ ಈಗಾಗಲೇ ಹೊರಡಿಸಿದೆ.











Click it and Unblock the Notifications