ಕನ್ನಡಿಗರ ಪರ ಮಾತನಾಡಿದ ತಮಿಳುನಾಡಿನ ಸಚಿವ: ಹೇಳಿಕೆ ವೈರಲ್! ಹಿಂದಿಯಿಂದ ಕರ್ನಾಟಕದಲ್ಲಿ 90,000 ವಿದ್ಯಾರ್ಥಿಗಳು ಫೇಲ್!
ಇತ್ತೀಚೆಗೆ ಸೃಷ್ಟಿಯಾದ ಭಾಷಾ ವಿವಾದ ಹಾಗೂ ಜಲ ವಿವಾದಗಳ ಹೊರತಾಗಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಉತ್ತಮ ಸಂಬಂಧವಿದೆ. ಅದರಲ್ಲೂ ಉಳಿದೆಲ್ಲ ವಿಚಾರಗಳಲ್ಲೂ ಭಿನ್ನಾಭಿಪ್ರಾಯ ಅಥವಾ ಭಿನ್ನ ನಿಲುವನ್ನು ಹೊಂದಿರುವ ಕರ್ನಾಟಕ ಹಾಗೂ ತಮಿಳುನಾಡು. ಹಿಂದಿ ಹೇರಿಕೆಯ ವಿಚಾರದಲ್ಲಿ ಒಂದಾಗಿ ನಿಲ್ಲುವುದಿದೆ. ಹಿಂದಿ ಹೇರಿಕೆಯನ್ನು ಎರಡೂ ರಾಜ್ಯಗಳು ಬಲವಾಗಿ ಖಂಡಿಸಿಕೊಂಡು ಬಂದಿವೆ. ಹಿಂದಿ ವಿಚಾರ ಬಂದಾಗೆಲ್ಲವೂ ಕನ್ನಡಿಗರು ಹಾಗೂ ತಮಿಳಿಗರು ಸಹೋದರರಂತೆ ಒಂದಾಗಿರುವುದು ಇದೆ. ಇದೀಗ ಇದೇ ವಿಚಾರವಾಗಿ ಕನ್ನಡಿಗರ ಪರವಾಗಿ ತಮಿಳುನಾಡಿನ ಸಚಿವ ಧ್ವನಿ ಎತ್ತಿದ್ದಾರೆ. ತಮಿಳುನಾಡಿನ ಸಚಿವರ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ಜಲ ವಿವಾದವಿದೆ. ಉತ್ತಮ ಮಳೆಯಾದಾಗ ಎರಡೂ ರಾಜ್ಯಗಳ ನಡುವೆ ಜಲ ವಿವಾದದ ಪ್ರಶ್ನೆ ಎದುರಾಗಲ್ಲ. ಇನ್ನು ಇದರ ಹೊರತಾಗಿ ಹಿಂದಿ ವಿಚಾರ ಬಂದಾಗೆಲ್ಲವೂ ಎರಡೂ ರಾಜ್ಯದ ಜನರ ಒಂದಾಗಿರುವುದು ಇದೆ. ಅದೇ ರೀತಿ ಇದೀಗ ಕನ್ನಡಿಗರು ಹಾಗೂ ಕರ್ನಾಟಕದ ವಿದ್ಯಾರ್ಥಿಗಳ ಪರವಾಗಿ ತಮಿಳುನಾಡಿನ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರು ಧ್ವನಿ ಎತ್ತಿದ್ದಾರೆ. ಕರ್ನಾಟಕದಲ್ಲಿ 90,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದು ಭಾಷೆಯ ಹೇರಿಕೆಯಿಂದಾಗಿ ಬೋರ್ಡ್ ಪರೀಕ್ಷೆಗಳಲ್ಲಿ / ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರದ ಭಾಷಾ ನೀತಿ ಮತ್ತು ಶಿಕ್ಷಣಕ್ಕೆ ಕೊಡುತ್ತಿರುವ ಅನುದಾನದ ಬಗ್ಗೆ ಟೀಕಿಸಿದ್ದಾರೆ. ಭಾಷಾ ಕಲಿಕೆ ವಿಚಾರವು ವಿದ್ಯಾರ್ಥಿಗಳಿಗೆ ಆಯ್ಕೆಯಾಗಿರಬೇಕು. ಮೂರನೇ ಭಾಷೆಯು ಒಂದು ಆಯ್ಕೆಯಾಗಿರಬೇಕು, ಬಲವಂತದ ಕ್ರಮವಾಗಬಾರದು. ಹಿಂದಿ ಹೇರಿಕೆ ಆಗಬಾರದು ಎಂದು ಅವರು ಹೇಳಿದ್ದಾರೆ.
ಕರ್ನಾಟಕ ಹಾಗೂ ದಕ್ಷಿಣ ಭಾರತದ ಪರವಾಗಿ ಅವರು ಮಾತನಾಡಿದ್ದಾರೆ. ಹಿಂದಿ ಹೇರಿಕೆಯಿಂದ ಕರ್ನಾಟಕದಲ್ಲಿ ವಿದ್ಯಾರ್ಥಿಗಳು ಯಾವ ಸವಾಲು ಎದುರಿಸುತ್ತಿದ್ದಾರೆ ಎನ್ನುವುದನ್ನು ಅವರು ವಿವರಿಸಿದ್ದಾರೆ. ತಮಿಳುನಾಡು ಹಾಗೂ ಕೇರಳದಂತಹ ಉನ್ನತ ಕಾರ್ಯಕ್ಷಮತೆ ಇರುವ ರಾಜ್ಯಗಳಿಂದ ಕೇಂದ್ರ ಸರ್ಕಾರವು ಪ್ರಮುಖ ಶಿಕ್ಷಣ ಅನುದಾನವನ್ನು ತಡೆಹಿಡಿಯುತ್ತಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯಗಳ ಶಿಕ್ಷಣಕ್ಕೆ ಕೊಡಬೇಕಾದ ಅನುದಾನವನ್ನು ಕೊಡುವುದಕ್ಕೆ ಹಿಂದೇಟು ಹಾಕುತ್ತಿದೆ. ಹಿಂದಿ ಯಾವುದೇ ಭಾಷೆಯ ಶತ್ರುವಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಡಿಎಂಕೆ ಸಂಸದೆ ಕನಿಮೋಳಿ ಅವರು, ತಮಿಳು ಸಹ ಯಾವುದೇ ಭಾಷೆಯ ಶತ್ರುವಲ್ಲ. ಉತ್ತರ ಭಾರತೀಯರು ದಕ್ಷಿಣ ಭಾರತೀಯ ಭಾಷೆಗಳನ್ನು ಕಲಿಯಬೇಕು ಎಂದು ಒತ್ತಾಯಿಸಿದ್ದರು.
ಉತ್ತರ ಭಾರತೀಯರು ನಮ್ಮ ಭಾಷೆ ಕಲಿಯಲಿ: ಇನ್ನು ಉತ್ತರ ಭಾರತೀಯರು ದಕ್ಷಿಣ ಭಾರತದ ಭಾಷೆಯನ್ನು ಕಲಿಯಲಿ. ಹಿಂದಿ ಯಾವುದೇ ಭಾಷೆಯ ಶತ್ರುವಲ್ಲ ಎನ್ನುವುದಾದರೆ, ತಮಿಳು ಸಹ ಯಾವುದೇ ಭಾಷೆಯ ಶತ್ರುವಲ್ಲ. ಉತ್ತರ ಭಾರತೀಯರು ತಮಿಳು ಕಲಿಯಲಿ. ಉತ್ತರ ಭಾರತದವರು ಕನಿಷ್ಠ ಒಂದು ದಕ್ಷಿಣ ಭಾರತದ ಭಾಷೆಯನ್ನು ಕಲಿಯಲಿ. ಅದು ನಿಜವಾದ ರಾಷ್ಟ್ರೀಯ ಏಕೀಕರಣ ಎಂದು ಕನಿಮೋಳಿ ಪ್ರತಿಪಾದಿಸಿದ್ದಾರೆ.












Click it and Unblock the Notifications