ಈಶ್ವರಪ್ಪ ಮೇಲೆ ಬಿಜೆಪಿಯಿಂದಲೇ ಸರ್ಜಿಕಲ್ ಸ್ಟ್ರೈಕ್: ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 20: ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕುರಿತು ಕಾಂಗ್ರೆಸ್ ಟ್ವಿಟ್ ಮಾಡಿದೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಶಿವಮೊಗ್ಗದಲ್ಲಿ ಧನಂಜಯ ಸರ್ಜಿಯವರ ಮೂಲಕ ಈಶ್ವರಪ್ಪನವರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ಇತ್ತ ಮಂತ್ರಿಗಿರಿ ನೀಡದೆ ಮೂಲೆಗುಂಪು ಮಾಡಲಾಗಿದೆ. ಯಡಿಯೂರಪ್ಪನವರಂತೆ ಈಶ್ವರಪ್ಪನವರನ್ನೂ ಮಾರ್ಗದರ್ಶಕ ಮಂಡಳಿಗೆ ಕಳಿಸಲಿದೆ ಬಿಜೆಪಿ' ಎಂದು ಟೀಕಿಸಿದೆ.
ಕಳೆದ ಅಧಿವೇಶನದಲ್ಲೂ ಗೈರಾಗಿದ್ದ ಕೆ.ಎಸ್.ಈಶ್ವರಪ್ಪ ಅವರಿಗೆ ಸ್ಪೀಕರ್ ಕಾರಣ ಕೇಳಿ ನೋಟಿಸ್ ನೀಡಿದ್ದರು. ಈಗಲೂ 'ವೈಯುಕ್ತಿಕ ಕಾರಣ' ಹೇಳಿ ಗೈರಾಗಿದ್ದಾರೆ. ಆದರೆ ಹೊರಗೆ ಇದು ನನ್ನ ಪ್ರತಿಭಟನೆ ಎಂದಿದ್ದಾರೆ. ಒಬ್ಬ ಶಾಸಕನಾಗಿ ತನ್ನ ಜವಾಬ್ದಾರಿಯ ಬಗ್ಗೆ, ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಬಿಜೆಪಿ ನಾಯಕರ ಅದ್ಯತೆಯೇ ಅಲ್ಲ ಎಂದೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಶಿವಮೊಗ್ಗ ಶಾಸಕರೂ ಆಗಿರುವ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸದನಕ್ಕೆ ಹಾಜರಾಗದೇ, ಇದು ನನ್ನ ಪ್ರತಿಭಟನೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಇಬ್ಬರೂ ನಾಯಕರು ಒಂದೇ ವಿಮಾನದಲ್ಲಿ ಬೆಳಗಾವಿಯಿಂದ ಬೆಂಗಳೂರಿಗೆ ಬಂದಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ವಿಡಿಯೋ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿಗೆ ಮತ್ತೆ ಸಚಿವರಾಗಬೇಕೆನ್ನುವ ಬಯಕೆ ಇದೆ ಎಂಬ ಬಗ್ಗೆ ವರದಿಗಳಾಗಿವೆ. ಹೀಗಾಗಿ, ಈ ಇಬ್ಬರ ನಾಯಕರ ಭೇಟಿ ಮಹತ್ವ ಪಡೆದುಕೊಂಡಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಸವರಾಜ ಬೊಮ್ಮಾಯಿ, ಪಕ್ಷದ ಪ್ರಮುಖ ನಾಯಕರಾದ ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ರಾಜೀನಾಮೆ ನೀಡಿದ್ದರು.
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಮೇಶ ಜಾರಕಿಹೊಳಿ ವಿಚಾರವೇ ಬೇರೆ, ನನ್ನ ವಿಚಾರವೇ ಬೇರೆ. ಸಚಿವ ಸ್ಥಾನ ಬೇಕೆಂದು ನಾನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆಗಿಲ್ಲ ಎಂದು ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ಸಚಿವ ಸ್ಥಾನ ನೀಡುತ್ತೇನೆಂದು ಹೇಳಿದ್ದರು. ಆದರೆ, ಅವರು ನೀಡಿಲ್ಲ. ಈ ವಿಚಾರದ ಕುರಿತು ಯಾರು ತೀರ್ಮಾನ ತೆಗೆದುಕೊಳ್ಳುತ್ತಾರೋ ಅವರು ತೆಗೆದುಕೊಳ್ಳಲಿ ಎಂದು ತಿಳಿಸಿದ್ದರು.












Click it and Unblock the Notifications